ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, ಕಾಂಗ್ರೆಸ್ ಸರ್ಕಾರವು ಆಡಳಿತವನ್ನು ಮರೆತು ಕುರ್ಚಿಗಾಗಿ ಶಾಸಕರ ಖರೀದಿಗೆ ಇಳಿದಿದೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಗುದ್ದಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಎಂದರು.
ಹುಬ್ಬಳ್ಳಿ (ನ.23): ರಾಜ್ಯದ ಜನ ಕಾಂಗ್ರೆಸ್ಗೆ ಪ್ರಚಂಡ ಬಹುಮತ ಕೊಟ್ಟಿದ್ದರೂ ದ್ರೋಹ ಬಗೆಯುತ್ತಿದ್ದಾರೆ. ಕುರ್ಚಿಗಾಗಿ ಶಾಸಕರ ಖರೀದಿಗೆ ಇಳಿದಿದ್ದು, ಜೈಲಿಗೂ ಹೋಗಿ ಭೇಟಿಯಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.
ಆಡಳಿತದ ಗಮನ ಇಲ್ಲ, ಕುರ್ಚಿ ಕಿತ್ತಾಟದಲ್ಲೇ ಫುಲ್ ಟೈಂ ಬ್ಯುಸಿ!
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಸಂಪೂರ್ಣ ಆಡಳಿತ ಮರೆತಿದೆ. ರಾಜ್ಯದ ಜನ, ರೈತರು ಸಂಕಷ್ಟದಲ್ಲಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬೆಂಗಳೂರಿನಲ್ಲಿ ಹಾಡುಹಗಲೇ ದರೋಡೆ ನಡೆದಿದೆ. ಇದನ್ನೆಲ್ಲ ನೋಡಿದರೆ ಸರ್ಕಾರಕ್ಕೆ ಆಡಳಿತದ ಕಡೆಗೆ ಗಮನ ಕಡಿಮೆ ಆಗಿದ್ದು, ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಶಾಸಕರು ಚೀಟಿ ಕೊಟ್ಟು ವರ್ಗಾವಣೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಗುದ್ದಾಟ ಶುರುವಾಗಿದ್ದು, ವೋಟಿಂಗ್ನಲ್ಲಿ ತಮ್ಮ ನಂಬರ್ ಹೊಂದಿಸುವುದಕ್ಕೆ ಇಳಿದಿದ್ದಾರೆ. ಈ ಜಗಳದಲ್ಲಿ ರಸ್ತೆಗಳು ಅಭಿವೃದ್ಧಿಯಾಗುತ್ತಿಲ್ಲ. ನೀರಾವರಿ ಯೋಜನೆಗಳಿಗೆ ಹಣವಿಲ್ಲ ಎಂದರು.
ಏಕನಾಥ ಶಿಂಧೆ ಮಾಡಲು ಬಯಸಲ್ಲ:
ರಾಜ್ಯದಲ್ಲಿ ಅಸ್ಥಿರತೆ ನಡುವೆಯೂ ಯಾರನ್ನೋ ಕರೆದುಕೊಂಡು ಬಂದು ಏಕನಾಥ ಶಿಂಧೆ ಮಾಡಲು ನಾವು ಬಯಸುವುದಿಲ್ಲ. ಅಂಥ ಪ್ರಯತ್ನಕ್ಕೆ ನಾವು ಕೈಹಾಕುವುದಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಜನರು ಪೂರ್ಣ ಬಹುಮತ ನೀಡಿದ್ದು, ಅವರು 5 ವರ್ಷ ಅಧಿಕಾರ ನಡೆಸಲಿ. ಆದರೆ, ಒಳ್ಳೆಯ ಆಡಳಿತ ನೀಡಲಿ. ಮಹಾರಾಷ್ಟ್ರದಲ್ಲಿ ನಾವು ಬಹುಮತ ಗಳಿಸಿ ಅತಿ ದೊಡ್ಡ ಪಕ್ಷವಾಗಿದ್ದೇವು. ನಮಗೆ ಜನಮನ್ನಣೆ ಇತ್ತು. ಏಕನಾಥ ಶಿಂಧೆ ಶಿವಸೇನೆಯಿಂದ ಹೊರಗೆ ಬಂದು ನಮ್ಮ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದೇವು. ಕರ್ನಾಟಕದಲ್ಲಿ ಹಾಗೇ ಆಗುವುದಿಲ್ಲ ಎಂದು ಹೇಳಿದರು.


