ರಾಜ್ಯದಲ್ಲಿ ಕಳೆದ 30 ವರ್ಷಗಳಿಂದ ನೆಲೆಯೂರಿರುವ ಟೊಯೊಟಾ ಕಂಪನಿ ಹೂಡಿಕೆ ಮುಂದುವರೆಯಲಿದೆ. ಜೊತೆಗೆ, ಸೆನ್ಸೇರಾ ಕಂಪನಿಯು ರಾಮನಗರದಲ್ಲಿ 2,100 ಕೋಟಿ ರೂ. ವೆಚ್ಚದಲ್ಲಿ ಉದ್ಯಮ ಆರಂಭಿಸಲಿದೆ ಎಂದು ಸಚಿವ ಎಂ.ಬಿ. ಪಾಟೀಲ ಮಾಹಿತಿ ನೀಡಿದರು. 

ಬೆಂಗಳೂರು (ಜು.31): ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡಿ, 30 ವರ್ಷಗಳಿಂದಲೂ ಇಲ್ಲಿ ನೆಲೆಯೂರಿರುವ ಟೊಯೋಟಾ ಕಂಪನಿಯ ಹೂಡಿಕೆ ಎಂದಿನಂತೆ ಮುಂದುವರಿಯಲಿದೆ. ಅದು ಮಹಾರಾಷ್ಟ್ರದಲ್ಲೂ ಹೂಡಿಕೆ ಮಾಡುತ್ತಿರುವುದನ್ನು ಬೇರೆ ದೃಷ್ಟಿಯಿಂದ ನೋಡುವ ಅಗತ್ಯವಿಲ್ಲ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, 'ಟೊಯೋಟಾ ಕಂಪನಿಯು ಮಹಾರಾಷ್ಟ್ರದಲ್ಲಿ ಹೆಚ್ಚುವರಿ ಹೂಡಿಕೆ ಮಾಡಬಹುದು. ನಮ್ಮಲ್ಲಿ ಹೂಡಿಕೆ ಮಾಡಿದ ಮಾತ್ರಕ್ಕೆ ಅವರು ಇನ್ನೊಂದು ಕಡೆ ಬಂಡವಾಳ ಹೂಡಬಾರದು ಎಂದೇನಿಲ್ಲ. ಆದರೆ ರಾಜ್ಯದಲ್ಲಿ ಆ ಕಂಪನಿಯ ಹೂಡಿಕೆ ಎಂದಿನಂತೆಯೇ ಮುಂದುವರಿದುಕೊಂಡು ಹೋಗಲಿದೆ' ಎಂದಿದ್ದಾರೆ. ಟೊಯೋಟಾ ಕಂಪನಿಯು 2023ರಲ್ಲಿ 3,300 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಬಿಡದಿಯಲ್ಲಿ ತನ್ನ ಮೂರನೇ ಕಾರು ತಯಾರಿಕೆ ಘಟಕ ತೆರೆಯಲು ರಾಜ್ಯ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. 2022ರಲ್ಲಿ ಅದು ನಮ್ಮಲ್ಲಿ 4,100 ಕೋಟಿ ರೂಪಾಯಿ ಹೂಡಿದೆ. ಅದರ ಕೇಂದ್ರ ಕಚೇರಿ ಮತ್ತು ಸಂಶೋಧನಾ ಕೇಂದ್ರಗಳು ನಮ್ಮಲ್ಲೇ ಇವೆ ಎಂದು ಹೇಳಿದ್ದಾರೆ.

ಬಿಜೆಪಿಯವರು ಸಿದ್ದರಾಮಯ್ಯ ಸರ್ಕಾರ ಅಲುಗಾಡಿಸಿದರೆ ರಕ್ತಕ್ರಾಂತಿ ಆಗುತ್ತೆ; ಶಾಸಕ ಶಿವಲಿಂಗೇಗೌಡ ಎಚ್ಚರಿಕೆ

ಉದ್ಯಮಗಳು ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುವುದು ಒಂದು ಸಹಜ ವಿದ್ಯಮಾನ. ಟೊಯೋಟಾ ಕೂಡ ಅದೇ ರೀತಿಯಲ್ಲಿ ನೆರೆ ರಾಜ್ಯದಲ್ಲಿ ಹೂಡಿಕೆ ಮಾಡುತ್ತಿದೆ. ಇದನ್ನು ಕರ್ನಾಟಕಕ್ಕೆ ಆಗುತ್ತಿರುವ ನಷ್ಟವೆಂದು ಭಾವಿಸುವ ಅಗತ್ಯವಿಲ್ಲ ಎಂದು ತಿಳಿಸಿದರು. 

ಸನ್ಸೇರಾ ಕಂಪನಿಯಿಂದ ₹2,100 ಕೋಟಿ ಹೂಡಿಕೆಗೆ ಒಪ್ಪಂದ: ವಾಹನಗಳ ಮತ್ತು ವೈಮಾನಿಕ‌ ಬಿಡಿಭಾಗಗಳನ್ನು ತಯಾರಿಸುವ ಸನ್ಸೇರಾ ಕಂಪನಿಯು ರಾಜ್ಯದಲ್ಲಿ 2,100 ಕೋಟಿ ರೂ. ಹೂಡಿಕೆ ಮಾಡಲಿದೆ. ಈ ಸಂಬಂಧ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಅವರ ಸಮ್ಮುಖದಲ್ಲಿ ಬುಧವಾರ ಒಡಂಬಡಿಕೆಗೆ ಅಂಕಿತ ಹಾಕಲಾಯಿತು. ಖನಿಜ ಭವನದಲ್ಲಿ ನಡೆದ ಸಮಾರಂಭದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಮತ್ತು ಸೆನ್ಸೇರಾ ಕಂಪನಿಯ ಸಿಇಒ ಶೇಖರ್ ವಾಸನ್ ಒಡಂಬಡಿಕೆಗೆ ಸಹಿ ಹಾಕಿದರು.

ಪುನೀತ್ ಕೆರೆಹಳ್ಳಿ ಬೆತ್ತಲೆಗೊಳಿಸಿ ಹಲ್ಲೆ ಆರೋಪ; ಎಸಿಪಿ ಚಂದನ್ ಭೇಟಿಗೆ ಬಂದ ಮಾಜಿ ಸಂಸದ ಪ್ರತಾಪ್ ಸಿಂಹ

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸನ್ಸೇರಾ ಎಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ ಈ ಹೂಡಿಕೆ ಮಾಡಲಿದೆ. ಇದರಿಂದ 3,500 ಉದ್ಯೋಗಗಳು ಸೃಷ್ಟಿ ಆಗಲಿವೆ. ಕಂಪನಿಯು ರಾಮನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 55 ಎಕರೆ ಪ್ರದೇಶದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲಿದೆ. ಇದರಿಂದ ರಾಜ್ಯದ ರಫ್ತು ವಹಿವಾಟಿಗೂ ಅನುಕೂಲ ಆಗಲಿದೆ ಎಂದರು.