ಪ್ರವಾಸಿಗರೇ ಇಲ್ನೋಡಿ: ಹೊಸ ವರ್ಷಾಚರಣೆಗೆ ನೀವು ಈ ಸ್ಥಳಗಳಿಗೆ ಹೋಗೋಹಾಗಿಲ್ಲ
ಕೋವಿಡ್ ಆತಂಕದ ಹಿನ್ನೆಲೆ ಜನಸಂದಣಿ ತಪ್ಪಿಸಲು ಜಿಲ್ಲಾಡಳಿತಗಳ ನಿರ್ಧಾರ | ಪ್ರವಾಸಕ್ಕೆ ರೆಡಿಯಾಗಿರೋರು ಈ ಸ್ಥಳಗಳಿಗೆ ಹೋಗೋ ಹಾಗಿಲ್ಲ
ಬೆಂಗಳೂರು(ಡಿ.29): ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಹೊಸವರ್ಷಾಚರಣೆ ವೇಳೆ ಜನಸಂದಣಿ ತಪ್ಪಿಸುವ ಸಲುವಾಗಿ ನಂದಿಬೆಟ್ಟಸೇರಿದಂತೆ ರಾಜ್ಯದ ಹಲವು ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಇತಿಹಾಸ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿರುವ ಜಿಲ್ಲೆಯ ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆ ಪ್ರತಿವರ್ಷ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ವರ್ಷ ರೂಪಾಂತರಗೊಂಡ ಕೊರೋನಾ ವೈರಸ್ ಸೋಂಕು ಹರಡುವ ಭೀತಿ ಹೆಚ್ಚಾಗಿರುವುದರಿಂದ 2020ರ ಡಿ.30ರಿಂದ 2021ರ ಜ.2ರ ವರೆಗೆ ನಂದಿಗಿರಿಧಾಮದ ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ.
BMTC ಪ್ರಯಾಣಿಕರಿಗೆ ಗುಡ್ನ್ಯೂಸ್: ಹೊಸವರ್ಷದಲ್ಲಿ ಟಿಕೆಟ್ ದರ ಕಡಿತ
ಅದೇ ರೀತಿ ಮೈಸೂರು ಜಿಲ್ಲೆಯ ಚಾಮುಂಡಿ ಬೆಟ್ಟ, ಮಂಡ್ಯ ಜಿಲ್ಲೆಯ ಬಲಮುರಿ, ಎಡಮುರಿ, ಕೆ.ಆರ್.ಎಲ್. ಹಿನ್ನೀರು ಪ್ರದೇಶ, ಮುತ್ತತ್ತಿ, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕಣ್ವ ಜಲಾಶಯ, ಮಾಗಡಿ ತಾಲೂಕಿನ ಸಾವನ ದುರ್ಗ ಮತ್ತು ಮಂಚನಬೆಲೆ ಜಲಾಶಯ, ಕನಕಪುರ ತಾಲೂಕಿನ ಸಂಗಮ-ಮೇಕೆದಾಟು, ಚುಂಚಿ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧಿಸಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಬೀಚ್ಗಳಲ್ಲಿ, ಐತಿಹಾಸಿಕ ಸ್ಥಳಗಳಲ್ಲಿ ಡಿ.31ರಿಂದ ಸಂಜೆ 4ರಿಂದ ಜ.1ರ ಬೆಳಗ್ಗೆ 6 ಗಂಟೆವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ದೇವಾಲಯ ಪ್ರವೇಶ ನಿರ್ಬಂಧವಿಲ್ಲ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಾಲಯ ಸೇರಿದಂತೆ ಯಾವ ದೇವಾಲಯದಲ್ಲೂ ಯಾವುದೇ ಹೊಸ ನಿರ್ಬಂಧವನ್ನು ವಿಧಿಸಲಾಗಿಲ್ಲ. ಈಗಾಗಲೇ ಜಾರಿಯಲ್ಲಿರುವ ಕೋವಿಡ್ ನಿಯಮಾವಳಿಗಳಂತೆ ಭಕ್ತರು ದೇವಾಲಯಕ್ಕೆ ತೆರಳಿ ದೇವರ ದರ್ಶನ ಮಾಡಬಹುದಾಗಿದೆ ಎಂದು ಉಡುಪಿ ಜಿಲ್ಲಾಡಳಿತ ತಿಳಿಸಿದೆ.