ಸಿದ್ದರಾಮೋತ್ಸವಕ್ಕೆ ಇಂದು ಪೂರ್ವಸಿದ್ಧತೆ: ಸಿದ್ದು, ಡಿಕೆಶಿ ಸೇರಿ 800 ನಾಯಕರಿಂದ ಸಭೆ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನ ಸಮಾರಂಭವಾದ ‘ಸಿದ್ದರಾಮೋತ್ಸವ’ಕ್ಕೆ ಅಗತ್ಯ ರೂಪರೇಷೆ ಸಿದ್ಧಪಡಿಸಲು ನಗರದ ಅರಮನೆ ಮೈದಾನದ ಕಿಂಗ್ಸ್ ಕೋರ್ಟ್ನಲ್ಲಿ ಮಂಗಳವಾರ ಬೃಹತ್ ಪೂರ್ವ ಸಿದ್ಧತಾ ಸಭೆಯನ್ನು ಏರ್ಪಡಿಸಲಾಗಿದೆ.
ಬೆಂಗಳೂರು (ಜು.13): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನ ಸಮಾರಂಭವಾದ ‘ಸಿದ್ದರಾಮೋತ್ಸವ’ಕ್ಕೆ ಅಗತ್ಯ ರೂಪರೇಷೆ ಸಿದ್ಧಪಡಿಸಲು ನಗರದ ಅರಮನೆ ಮೈದಾನದ ಕಿಂಗ್ಸ್ ಕೋರ್ಟ್ನಲ್ಲಿ ಮಂಗಳವಾರ ಬೃಹತ್ ಪೂರ್ವ ಸಿದ್ಧತಾ ಸಭೆಯನ್ನು ಏರ್ಪಡಿಸಲಾಗಿದೆ. ಬರುವ ಆ.3ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಮಾರಂಭಕ್ಕೆ ಕನಿಷ್ಠ ಐದು ಲಕ್ಷ ಮಂದಿಯನ್ನು ಸೇರಿಸುವ ಮೂಲಕ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಪೂರ್ವಭಾವಿಯಾಗಿ ಚರ್ಚಿಸಲು ‘ಸಿದ್ದರಾಮಯ್ಯ 75 ಜನ್ಮ ದಿನಾಚರಣೆ ಸಮಿತಿ’ಯ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರು ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು, ಸಂಸದರು, ಮಾಜಿ ಸಂಸದರು, ಸ್ವಾಗತ ಸಮಿತಿಯ ಪದಾಧಿಕಾರಿಗಳು, ಜಿಲ್ಲಾ ಸಂಚಾಲಕರು, ಕೆಪಿಸಿಸಿ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಕೆಪಿಸಿಸಿ ವಿವಿಧ ವಿಭಾಗದ ಅಧ್ಯಕ್ಷರಿಗೆ ಸಭೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದ್ದಾರೆ. ಪೂರ್ವಸಿದ್ಧತೆ ಸಭೆಯಲ್ಲಿ ನಾಯಕರಾದ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಸೇರಿ 800 ಜನರು ಭಾಗವಹಿಸಲಿದ್ದಾರೆ.
ಸಿದ್ದರಾಮೋತ್ಸವದಿಂದ ಬಿಜೆಪಿಗೆ ನಡುಕ, ಅದಕ್ಕೇ ಟೀಕೆ: ಎಂಬಿಪಾ
ದಾವಣಗೆರೆಯಲ್ಲೂ ಚರ್ಚೆ: ಸಿದ್ದರಾಮೋತ್ಸವ ಪೂರ್ವ ಸಿದ್ಧತೆ ಬಗ್ಗೆ ಮಂಗಳವಾರ ದಾವಣಗೆರೆಯಲ್ಲೂ ಚರ್ಚೆ ನಡೆದಿದೆ. ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯವರ 65ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ದಾವಣಗೆರೆಗೆ ತೆರಳಿದ್ದ ಸಿದ್ದರಾಮಯ್ಯ ಅವರು ಸಮಿತಿಯ ಗೌರವಾಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಸಿದ್ದರಾಮೋತ್ಸವ ಸಿದ್ಧತೆಗಳು ಹಾಗೂ ಬುಧವಾರ ನಡೆಯುವ ಪೂರ್ವ ಸಿದ್ಧತೆ ಸಭೆಯ ಕುರಿತು ಸಹ ಚರ್ಚಿಸಿರುವುದಾಗಿ ತಿಳಿದುಬಂದಿದೆ.
ಡಿಕೆಶಿಗೆ ಅಧಿಕೃತ ಆಹ್ವಾನ: ಆ.3ರಂದು ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮಂಗಳವಾರ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿ ಪದಾಧಿಕಾರಿಗಳು ಅಧಿಕೃತ ಆಹ್ವಾನ ನೀಡಿದರು. ಸಮಿತಿ ಪದಾಧಿಕಾರಿಗಳಾದ ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ, ಎಚ್.ಸಿ. ಮಹದೇವಪ್ಪ, ಮಾಜಿ ಶಾಸಕ ಅಶೋಕ್ ಪಟ್ಟಣ್ ಅವರು ಸದಾಶಿವನಗರದ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಆಮಂತ್ರಣ ಪತ್ರಿಕೆ ನೀಡಿದರು.
Siddaramotsava; ಸಿದ್ದರಾಮೋತ್ಸವ ಬಳಿಕ ಡಿಕೆಶಿ ಉತ್ಸವ
ಸಿದ್ದರಾಮೋತ್ಸವ ಸಮಾರಂಭವನ್ನು ಯಶಸ್ವಿಗೊಳಿಸಲು ಹಾಗೂ ರಾಜ್ಯದ ಮೂಲೆ-ಮೂಲೆಯಿಂದ ಕನಿಷ್ಠ ಐದು ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ಜನರು ಹೆಚ್ಚು ಸಂಖ್ಯೆಯಲ್ಲಿ ಸೇರಿ ಸಮಾರಂಭ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅರಮನೆ ಮೈದಾನದಲ್ಲಿ 800 ಜನರನ್ನು ಒಳಗೊಂಡ ಬೃಹತ್ ಪೂರ್ವಸಿದ್ಧತಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.