ಸಿದ್ದರಾಮೋತ್ಸವದಿಂದ ಬಿಜೆಪಿಗೆ ನಡುಕ, ಅದಕ್ಕೇ ಟೀಕೆ: ಎಂಬಿಪಾ
* ಸಾಮಾನ್ಯ ರೈತ ಕುಟುಂಬದಿಂದ ಬಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ
* ಸಿದ್ದು ದಾಖಲೆ ಸಂಖ್ಯೆಯ ಬಜೆಟ್ ಮಂಡಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದರು
* ಜನನಾಯಕರ ಅಮೃತ ಮಹೋತ್ಸವವನ್ನು ಜನರು ಹಾಗೂ ಬೆಂಬಲಿಗರು ಮಾಡುತ್ತಿರುವುದು ತಪ್ಪೇ?
ಬೆಂಗಳೂರು(ಜು.12): ಸಿದ್ದರಾಮಯ್ಯ ಅವರ ಜನ್ಮದಿನ ಅಮೃತ ಮಹೋತ್ಸವದ ಬಗ್ಗೆ ಬಿಜೆಪಿಗೆ ನಡುಕ ಶುರುವಾಗಿದೆ. ಎಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಾರೆಂಬ ಭಯ ಶುರುವಾಗಿದೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅನಗತ್ಯವಾಗಿ ಮಾತನಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
‘ಇದೇ ವೇಳೆ, ಸಿದ್ದರಾಮಯ್ಯ ಜನ ನಾಯಕ. ಸಿದ್ದರಾಮಯ್ಯ ಅವರ ಜನ್ಮದಿನ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ನೋಡಿದ ಬಳಿಕ ಕಟೀಲ್ ಮಾತನಾಡಲಿ. ಅದಕ್ಕೂ ಮೊದಲು ಅನಗತ್ಯವಾಗಿ ಮಾತನಾಡುವುದು ಬೇಡ’ ಎಂದು ಸವಾಲು ಎಸೆದರು.
ಬಿಜೆಪಿ ವಿರುದ್ಧ ಜನರು ಸಿಡಿದೇಳುವ ದಿನ ದೂರ ಇಲ್ಲ: ಎಂ.ಬಿ.ಪಾಟೀಲ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾವುದೇ ವ್ಯಕ್ತಿಯು 50, 75, 100 ವರ್ಷ ಪೂರೈಸುವುದು ಮೈಲುಗಲ್ಲ. ಸಿದ್ದರಾಮಯ್ಯ ಅವರು ಸಾಮಾನ್ಯ ರೈತ ಕುಟುಂಬದಿಂದ ಬಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ದಾಖಲೆ ಸಂಖ್ಯೆಯ ಬಜೆಟ್ ಮಂಡಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದರು. ಕೋಟ್ಯಂತರ ಜನ ಬೆಂಬಲಿಗರನ್ನು ಹೊಂದಿರುವ ಜನನಾಯಕರ ಅಮೃತ ಮಹೋತ್ಸವವನ್ನು ಜನರು ಹಾಗೂ ಬೆಂಬಲಿಗರು ಮಾಡುತ್ತಿರುವುದು ತಪ್ಪೇ?’ ಎಂದು ಪ್ರಶ್ನಿಸಿದರು.