ವಿಧಾನಸೌಧ ದ್ವಾರದಲ್ಲೇ ಜೀಪು ಗುದ್ದಿ 3 ಪೊಲೀಸರಿಗೆ ಗಾಯ
ವಾಹನ ಡಿಕ್ಕಿಯಾಗಿ ಮಹಿಳೆ ಕಾನ್ಸ್ಟೇಬಲ್ ಸೇರಿ ಮೂವರು ಪೊಲೀಸರಿಗೆ ಗಾಯ| ಅಡ್ಡಾದಿಡ್ಡಿಯಾಗಿ ಚಲಿಸಿದ ಕಾರು, ಕರ್ತವ್ಯ ನಿರತ ಪೊಲೀಸರಿಗೆ ಗುದ್ದಿ ಬಳಿಕ ವಿಧಾನಸೌಧದ ಗೇಟ್ಗೆ ಗುದ್ದಿದೆ|
ಬೆಂಗಳೂರು(ಜು.03): ವಿಧಾನಸೌಧ ಪ್ರವೇಶ ದ್ವಾರದಲ್ಲಿ ಕರ್ತವ್ಯ ನಿರತರಾಗಿದ್ದಾಗ ಕೃಷಿ ಇಲಾಖೆ ವಾಹನ ಡಿಕ್ಕಿಯಾಗಿ ಮಹಿಳೆ ಕಾನ್ಸ್ಟೇಬಲ್ ಸೇರಿ ಮೂವರು ಪೊಲೀಸರು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.
"
ಸಶಸ್ತ್ರ ಮೀಸಲು ಪಡೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ರಾಮು, ಹೆಡ್ ಕಾನ್ಸ್ಟೇಬಲ್ ಗಿರೀಶ್ ಹಾಗೂ ಕಾನ್ಸ್ಟೇಬಲ್ ಅನಿತಾ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮು ಅವರಿಗೆ ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಎಲ್ಲರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಅಧ್ಯಕ್ಷರಿದ್ದ ಕಾರು ಪಲ್ಟಿ: ಪವಾಡ ಸದೃಶ ಪಾರು
ವಿಧಾನಸೌಧದ ಪೂರ್ವ ಪ್ರವೇಶ ದ್ವಾರದಲ್ಲಿ ಪೊಲೀಸರು ಕರ್ತವ್ಯ ನಿರತರಾಗಿದ್ದರು. ಬೆಳಗ್ಗೆ 11.30ರ ಸುಮಾರಿಗೆ ವಿಧಾನಸೌಧದಲ್ಲಿ ಸಭೆ ಮುಗಿಸಿ ಕೃಷಿ ಇಲಾಖೆ ಅಧಿಕಾರಿ ಮರಳುತ್ತಿದ್ದರು. ಆ ವೇಳೆ ಅತಿವೇಗವಾಗಿ ಕಾರು ಓಡಿಸಿಕೊಂಡ ಬಂದ ಚಾಲಕ ಮಂಜುನಾಥ್, ಪ್ರವೇಶ ದ್ವಾರದ ಬಳಿ ನಿಯಂತ್ರಣ ಕಳೆದುಕೊಂಡಿದ್ದಾನೆ. ಇದರಿಂದ ಅಡ್ಡಾದಿಡ್ಡಿಯಾಗಿ ಚಲಿಸಿದ ಕಾರು, ಕರ್ತವ್ಯ ನಿರತ ಪೊಲೀಸರಿಗೆ ಗುದ್ದಿ ಬಳಿಕ ಗೇಟ್ಗೆ ಅಪ್ಪಳಿಸಿದೆ. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಯಿತು.
ಈ ಸಂಬಂಧ ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಕೃಷಿ ಇಲಾಖೆ ಕಾರು ಚಾಲಕ ಮಂಜುನಾಥ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.