ಹುತಾತ್ಮ ಗುರುವಿಗೆ ಹೆಲಿಕಾಪ್ಟರ್ ಏಕಿಲ್ಲ?: ರಸ್ತೆಯಲ್ಲಿ ಸಿಕ್ಕ ಗೌರವ ಆಗಸದಲ್ಲಿಲ್ಲ!
ಬೆಂಗಳೂರು-ಮಂಡ್ಯ ಜನಸಾಗರದ ಅದ್ಭುತ ದರ್ಶನ| ಪುಲ್ವಾಮಾ ಹುತಾತ್ಮ ಯೋಧ ಗುರು ಪಾರ್ಥಿವ ಶರೀರ ಸ್ವಗ್ರಾಮದತ್ತ| ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಜನರಿಂದ ಗುರುವಿಗೆ ಅಂತಿಮ ನಮನ| ರಕ್ಷಣಾ ಇಲಾಖೆಗೆ ಹೆಲಿಕಾಫ್ಟರ್ಗೆ ಮನವಿ ಮಾಡಿದ್ದ ರಾಜ್ಯ ಸರ್ಕಾರ| ಹೆಲಿಕಾಪ್ಟರ್ ನಿರಾಕರಣೆ ನಿರ್ಧಾರ ಸರಿಯಾಗಿಯೇ ಇದೆ|
ಬೆಂಗಳೂರು(ಫೆ.16): ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಕರೆತರಲು ಹೆಲಿಕಾಪ್ಟರ್ ಬಳಕೆ ಏಕೆ ಮಾಡಲಿಲ್ಲ ಎಂಬ ಪ್ರಶ್ನೆ ಇದೀಗ ಮೂಡಿದೆ.
"
ಈ ಕುರಿತು ಖುದ್ದು ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ತಾವು ರಕ್ಷಣಾ ಇಲಾಖೆಗೆ ಹೆಲಿಕಾಪ್ಟರ್ ನೀಡುವಂತೆ ಮನವಿ ಮಾಡಿದ್ದಾಗಿ ಹೇಳಿದ್ದಾರೆ. ಆದರೆ ಉಳಿದೆಲ್ಲಾ ಹುತಾತ್ಮರ ಕಳೆಬರಹವನ್ನು CRPF ವಾಹನದಲ್ಲೇ ಸ್ವಗ್ರಾಮಕ್ಕೆ ಕಳುಹಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಒದಗಿಸಲು ಸಾಧ್ಯವಿಲ್ಲ ಎಂದು ಪ್ರತ್ಯುತ್ತರ ನೀಡಲಾಗಿದೆ.
ಆದರೆ ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ರಸ್ತೆ ಮಾರ್ಗವಾಗಿ ತೆಗೆದುಕೊಂಡುವ ಹೋಗುವ CRPF ನಿರ್ಧಾರ ಸರಿಯಾಗಿಯೇ ಇದ್ದು, ಬೆಂಗಳೂರಿನಿಂದ ಮಂಡ್ಯದವರೆಗೂ ಹುತಾತ್ಮ ಗುರುವಿಗೆ ಸಿಕ್ಕ ಗೌರವ ಅಜರಾಮರವಾಗಿ ಉಳಿಯಲಿದೆ.
ರಸ್ತೆಯ ಇಕ್ಕೆಲಗಳಲ್ಲಿ ನೆರೆದಿರುವ ಅಪಾರ ಜನಸ್ತೋಮ, ಗುರುವಿನ ಪಾರ್ಥಿವ ಶರೀರ ಇಡಲಾಗಿರುವ ವಾಹನಕ್ಕೆ ಹೂಗಳ ಸುರಿಮಳೆಗೈಯುತ್ತಿದ್ದು, ವಾಹನದಲ್ಲೇ ಅಂತಿಮ ದರ್ಶನ ಪಡೆದು ಧನ್ಯರಾಗುತ್ತಿದ್ದಾರೆ. ಹುತಾತ್ಮ ಗುರು ಅಮರ್ ರಹೇ ಘೋಷಣೆ ಅದೇ ಹೆಲಿಕಾಪ್ಟರ್ ಹಾರಾಡುವ ಆಗಸವನ್ನೂ ಸೀಳುತ್ತಿದೆ.