ಕೆಎಂಎಫ್‌ ಮುಖ್ಯಸ್ಥರೊಂದಿಗೆ ಹಾಲಿನ ದರ ಏರಿಕೆ ಕುರಿತ ಸಿಎಂ ಸಭೆ ಮುಕ್ತಾಯ. ರೈತರು ಮತ್ತು ಗ್ರಾಹಕರಿಗೆ ಹೊರೆ ಆಗದಂತೆ ಸೂತ್ರ ರಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಎಂಎಫ್‌ಗೆ ಸೂಚನೆ ನೀಡಿದ್ದಾರೆ. 


ಬೆಂಗಳೂರು (ನ.21) : ರಾಜ್ಯದಲ್ಲಿ ಗ್ರಾಹಕರಿಗೆ ಹೊರೆಯಾಗದಂತೆ ಹಾಗೂ ಪಶುಪಾಲನೆ ಮಾಡುತ್ತಾ ಜೀವನ ಮಾಡುತ್ತಿರುವ ರೈತರಿಗೆ ಅನ್ಯಾಯವಾಗದಂತೆ ಸೂತ್ರ ರೂಪಿಸಬೇಕೆಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಮುಖ್ಯಸ್ಥರಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಕೆಎಂಎಫ್‌ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಹಾಲಿನ ದರ (Milk rate) ಏರಿಕೆಯ ಬಗ್ಗೆ ಪ್ರತಿಕ್ರಯಿಸಿ, ವಿವಿಧ ರಾಜ್ಯಗಳಲ್ಲಿರುವ ಹಾಲಿನ ದರ ಹಾಗೂ ಸಂಬಂಧಿಸಿದ ಸಂಪೂರ್ಣ ಮಾಹಿತಿ (Information) ಪಡೆದಿದ್ದೇನೆ. ಕೆಎಂಎಫ್ (KMF) ಸಂಸ್ಥೆಗೆ ತಗಲುತ್ತಿರುವ ವೆಚ್ಚ, ಹಾಲಿನ ದರ ಏರಿಕೆಗೆ (Rate hike) ಕಾರಣಗಳು, ಸಂಸ್ಥೆಯಲ್ಲಿ ಆಗುತ್ತಿರುವ ಸೋರಿಕೆಗಳು, ಈ ನಷ್ಟಗಳನ್ನು ತಡೆಗಟ್ಟಲು ಸಂಸ್ಥೆಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ. ಗ್ರಾಹಕ (Costomer) ಹಾಗೂ ರೈತನಿಗೆ (Farmer) ಅನುಕೂಲವಾಗುವ ಸೂತ್ರವನ್ನು (Formula) ಎರಡು ದಿನಗಳಲ್ಲಿ ರೂಪಿಸಿಕೊಂಡು, ಕೆಎಂಎಫ್ ನಿರ್ದೇಶಕರ ಮಂಡಳಿ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ತಿಳಿಸಲಾಗಿದೆ. ಆದರೆ, ದಿಢೀರನೆ 3 ರೂ. ದರ ಹೆಚ್ಚಳ ಮಾಡುವುದು ಬೇಡ. ಒಟ್ಟಾರೆ ರೈತರು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕೆಂದು ಸಲಹೆ ನೀಡಲಾಗಿದೆ ಎಂದರು.

ಹಾಲು ದರ ಏರಿಕೆಗೆ ಇಂದು ಸಭೆ: 2 ರು. ಹೆಚ್ಚಳಕ್ಕೆಬೊಮ್ಮಾಯಿ ಅನುಮೋದನೆ ?

ಗ್ರಾಹಕ ಹಾಗೂ ರೈತನ ಹಿತಚಿಂತನೆ ಸರ್ಕಾರದ ಕರ್ತವ್ಯ : ಕೆಎಂಎಫ್ ಕೂಡ ಸರ್ಕಾರದ ಒಂದು ಅಂಗವಾಗಿದ್ದು, ರೈತರಿಗೆ ಪ್ರೋತ್ಸಾಹ ಧನ, ಶಾಲಾ ಮಕ್ಕಳಿಗೆ ಹಾಲು ನೀಡಲಾಗುತ್ತಿದೆ. ಗ್ರಾಹಕರ ಹಾಗೂ ರೈತರ ಹಿತಚಿಂತನೆ ಮಾಡುವ ಕರ್ತವ್ಯ ಸರ್ಕಾರದ್ದಾಗಿದೆ. ಈ ಬಗ್ಗೆ ಕೆಎಂಎಫ್‌ಗೆ ಮಾರ್ಗದರ್ಶನ ನೀಡಲಾಗಿದೆ. ಹಾಲಿನ ದರ ಕಾಲಕಾಲಕ್ಕೆ ಬದಲಾವಣೆಯಾಗುತ್ತದೆ. ಈ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳೂ ಸ್ಪರ್ಧೆಯಲ್ಲಿವೆ. ಈ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕೆಂದು ಕೆಎಂಎಫ್ ಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಸಭೆಯ ಪ್ರಮುಖಾಂಶಗಳು:
* ಕೆಎಂಎಫ್‌ ಮುಖ್ಯಸ್ಥರೊಂದಿಗೆ ಹಾಲಿನ ದರ ಏರಿಕೆ ಕುರಿತ ಚರ್ಚೆ
* ವಿವಿಧ ರಾಜ್ಯಗಳಲ್ಲಿನ ಹಾಲಿದ ದರಗಳ ಬಗ್ಗೆ ಮಾಹಿತಿ ಸಂಗ್ರಹ
* ದಿಢೀರನೆ 3 ರೂ. ಹಾಲಿನ ದರ ಹೆಚ್ಚಳ ಮಾಡುವುದು ಬೇಡ
* ರೈತರು ಮತ್ತು ಗ್ರಾಹಕರಿಗೆ ಹೊರೆ ಆಗದಂತೆ ಸೂತ್ರ ರಚಿಸಲು ಸೂಚನೆ
* ಎರಡು ದಿನದಲ್ಲಿ ದರ ಪರಿಷ್ಕರಣೆ ಮಾಡುವಂತೆಯೂ ಸಲಹೆ