Asianet Suvarna News Asianet Suvarna News

ಅರಣ್ಯ ಇಲಾಖೆ ಸಸಿಗಳ ಬೆಲೆ ವಿಪರೀತ ಹೆಚ್ಚಳ: ಅನ್ನದಾತರ ಆಕ್ರೋಶ

ಅರಣ್ಯ ಇಲಾಖೆಯು ರೈತರಿಗೆ ವಿತರಿಸಲು ಬೆಳೆಸಿದ ವಿವಿಧ ಜಾತಿಯ ಸಸಿಗಳ ದರದಲ್ಲಿ ಭಾರೀ ಹೆಚ್ಚಳ ಮಾಡಿದೆ. ಆದರೆ ಸಸಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಮಾತ್ರ ಹೆಚ್ಚಳ ಮಾಡಿಲ್ಲ ಎಂದು ಅನ್ನದಾತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

The price of forest department saplings has increased drastically gvd
Author
First Published May 25, 2023, 9:14 AM IST

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ಮೇ.25): ಅರಣ್ಯ ಇಲಾಖೆಯು ರೈತರಿಗೆ ವಿತರಿಸಲು ಬೆಳೆಸಿದ ವಿವಿಧ ಜಾತಿಯ ಸಸಿಗಳ ದರದಲ್ಲಿ ಭಾರೀ ಹೆಚ್ಚಳ ಮಾಡಿದೆ. ಆದರೆ ಸಸಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಮಾತ್ರ ಹೆಚ್ಚಳ ಮಾಡಿಲ್ಲ ಎಂದು ಅನ್ನದಾತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ವಹಣೆ ವೆಚ್ಚ ಅಧಿಕವಾಗುತ್ತಿದೆ ಎಂಬ ನೆಪವೊಡ್ಡಿ ಸಸಿಗಳ ದರದಲ್ಲಿ ನಾಲ್ಕೈದು ಪಟ್ಟು ಬೆಲೆ ಹೆಚ್ಚಿಸಿದೆ.

ಹೀಗಾಗಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸಸಿ ಪಡೆಯಲು ಕೃಷಿಕರು ಇನ್ನು ಮುಂದೆ ಹೆಚ್ಚು ಹಣ ಪಾವತಿ ಮಾಡಬೇಕಿದೆ. ಆದರೆ ಇದಕ್ಕೆ ಸಮನಾಗಿ ಪ್ರೋತ್ಸಾಹಧನ ಹೆಚ್ಚಳ ಮಾಡಿಲ್ಲ ಎಂಬ ಕೂಗು ಕೇಳಿಬಂದಿದೆ. ಕಳೆದ ಸಾಲಿನಲ್ಲಿ 5 ಇಂಚು ಸುತ್ತಳತೆ, 8 ಇಂಚು ಎತ್ತರದ ಪ್ಯಾಕ್‌ ಮತ್ತು 6 ಇಂಚು ಸುತ್ತಳತೆ, 9 ಇಂಚು ಎತ್ತರದ ಪ್ಯಾಕ್‌ನಲ್ಲಿದ್ದ ಸಸಿಗಳಿಗೆ 1 ರು. ಮಾತ್ರ ದರ ನಿಗದಿ ಮಾಡಲಾಗಿತ್ತು. ಆದರೆ ಈಗ ಕ್ರಮವಾಗಿ 5 ಮತ್ತು 6 ರುಪಾಯಿ ಆಗಿದೆ. 

ಮೋದಿ ಪ್ರಧಾನಿಯಾಗಿ 9 ವರ್ಷ: ಬಿಜೆಪಿಯಿಂದ 1 ತಿಂಗಳ ಅಭಿಯಾನ

ಅಷ್ಟೇ ಅಲ್ಲ, ಕಳೆದ ಸಾಲಿನಲ್ಲಿ 8 ಇಂಚು ಸುತ್ತಳತೆ ಮತ್ತು 12 ಇಂಚು ಎತ್ತರದ ಪ್ಯಾಕೆಟ್‌ನಲ್ಲಿದ್ದ ಸಸಿಗಳಿಗೆ 3 ರು. ಇದ್ದಿದ್ದು, ಈಗ 23 ರುಪಾಯಿಗೆ ಹೆಚ್ಚಿಸಲಾಗಿದೆ. ಅರಣ್ಯ ಇಲಾಖೆ ಪ್ರತಿ ವರ್ಷ ಶ್ರೀಗಂಧ, ಸಾಗುವಾನಿ, ಸಿಲ್ವರ್‌, ಮಹಾಘನಿ, ಹೆಬ್ಬೇವು, ಕರಿಬೇವು, ನೇರಳೆ, ಸಂಪಿಗೆ, ಹೊಳೆಮತ್ತಿ ಸೇರಿದಂತೆ ಹಲವು ಜಾತಿಯ ಲಕ್ಷಾಂತರ ಸಸಿಗಳನ್ನು ನರ್ಸರಿಯಲ್ಲಿ ಬೆಳೆಸುತ್ತಿದ್ದು ಆಸಕ್ತ ರೈತರು ಸಸಿಗಳನ್ನು ಖರೀದಿಸಿ ತಮ್ಮ ಜಮೀನುಗಳಲ್ಲಿ ನೆಡುತ್ತಾರೆ. ರೈತರು ಆಧಾರ್‌ ಕಾರ್ಡ್‌, ಜಮೀನಿನ ಪಹಣಿ, ಬ್ಯಾಂಕ್‌ ಪಾಸ್‌ಬುಕ್‌ ಮತ್ತಿತರ ದಾಖಲೆಗಳನ್ನು ನೀಡಿ ಅರಣ್ಯ ಇಲಾಖೆಯಿಂದ ಕಡಿಮೆ ದರದಲ್ಲಿ ಸಸಿ ಖರೀದಿಸುತ್ತಿದ್ದರು.

3 ವರ್ಷಕ್ಕೆ 150 ರು. ಮಾತ್ರ: ಇಲಾಖೆಯಿಂದ ಖರೀದಿಸಿದ ಸಸಿಗಳನ್ನು ಬೆಳೆಸಲು ಮೂರು ವರ್ಷಕ್ಕೆ ಪ್ರತಿ ಸಸಿಗೆ ಒಟ್ಟು 150 ರು. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಎರಡು ವರ್ಷದಿಂದ ಇದನ್ನು ಹೆಚ್ಚಳ ಮಾಡಿಲ್ಲ. ಅದರೆ ಸಸಿಗಳ ದರವನ್ನು ಕಳೆದ 10 ವರ್ಷದಲ್ಲಿ ಹೆಚ್ಚಳ ಮಾಡಿಲ್ಲ ಎಂಬ ನೆಪವೊಡ್ಡಿ ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂಬ ಟೀಕೆ ಕೇಳಿಬಂದಿದೆ. ‘ಅಸಲಿಗೆ ಸಸಿಗಳನ್ನು ಬೆಳೆಸಲು ಹೆಚ್ಚು ಹಣ ವೆಚ್ಚವಾಗುತ್ತಿದೆ. ಆದರೆ ರಿಯಾಯಿತಿ ದರದಲ್ಲಿ ಕಡಿಮೆ ಬೆಲೆಗೇ ಸಸಿಗಳನ್ನು ನೀಡಲಾಗುತ್ತಿದೆ. ಸರ್ಕಾರದ ಆದೇಶದಂತೆ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ’ ಎಂದು ಇಲಾಖೆ ಮೂಲಗಳು ಸಮರ್ಥಿಸಿಕೊಂಡಿವೆ.

ಮೈಸೂರಿನಲ್ಲಿ ಕಬ್ಬಿಣದ ರಾಡ್‌‌ನಿಂದ ಹೊಡೆದು ಮಹಿಳೆಯ ಭೀಕರ ಹತ್ಯೆ: ಆರೋಪಿ ಪರಾರಿ

ಅರಣ್ಯ ಇಲಾಖೆ ಜನಸಾಮಾನ್ಯರನ್ನು ಬಳಸಿಕೊಂಡು ಗಿಡ-ಮರಗಳನ್ನು ಹೆಚ್ಚಾಗಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಅದನ್ನು ಬಿಟ್ಟು ವ್ಯಾಪಾರೀಕರಣ ಮಾಡಬಾರದು. ಸರ್ಕಾರ ಇಲಾಖೆಯ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಮೊದಲಿದ್ದ ದರಕ್ಕೇ ಸಸಿಗಳನ್ನು ನೀಡಬೇಕು.
-ಕೋಡಿಹಳ್ಳಿ ಚಂದ್ರಶೇಖರ್‌, ರೈತ ಮುಖಂಡ

Follow Us:
Download App:
  • android
  • ios