ಕನ್ನಡಕ್ಕೆ ತನ್ನ ಸರ್ವಸ್ವವನ್ನು ಸಮರ್ಪಣೆ ಮಾಡಿದ ಮ.ರಾಮಮೂರ್ತಿಯವರ ಮಡದಿ ಕಮಲಮ್ಮನವರು ಈಗ ತಮ್ಮ ಇಳಿ ವಯಸ್ಸಿನಲ್ಲಿ ವೃದ್ಧಾಪ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದು ಕನ್ನಡ ಸಾಹಿತ್ಯ ಪರಿಷತ್ತು ಅವರ ಚಿಕಿತ್ಸೆಗೆ ಧನ ಸಹಾಯ ಮಾಡಿರುವುದು ಮಾತ್ರವಲ್ಲದೆ ಅವರ ಕುರಿತು ವೈಯಕ್ತಿಕ ಕಾಳಜಿಯನ್ನೂ ಕೂಡ ವಹಿಸಿದೆ. ಯಾವುದೇ ಪ್ರಚಾರದ ದೃಷ್ಟಿಯಿಲ್ಲದೆ ಮ.ರಾಮಮೂರ್ತಿಯವರ ಮೇಲಿನ ಗೌರವದಿಂದ ನಿರಂತರವಾಗಿ ಕಮಲಮ್ಮನವರಿಗೆ ನೆರವು ನೀಡುತ್ತಾ ಬಂದಿದೆ.

ನಾಡೋಜ ಡಾ.ಮಹೇಶ ಜೋಶಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು

ಕನ್ನಡ ಸಮಾರಂಭಗಳಲ್ಲಿ ನಾವು ಉಪಯೋಗಿಸುವ ಕನ್ನಡ ಬಾವುಟವನ್ನು ಸೃಜಿಸಿದ ಮಹನೀಯ ಮ. ರಾಮಮೂರ್ತಿ. ಅವರು ಕನ್ನಡ ಬಾವುಟವನ್ನು ಮಾತ್ರ ರೂಪಿಸಲಿಲ್ಲ, ಅದನ್ನು ಎತ್ತಿ ಹಿಡಿದು ಕನ್ನಡಿಗರು ಗೌರವದಿಂದ ಬಾಳುವ ಹಾಗೆ ತಮ್ಮ ಕೊನೆಯ ಉಸಿರಿರುವವರೆಗೂ ಕನ್ನಡ ನಾಡು ನುಡಿಗಾಗಿ ಶ್ರಮಿಸಿದರು. 1960ರ ದಶಕದಲ್ಲಿ ಅನ್ಯಭಾಷಿಗರ ಪ್ರಾಬಲ್ಯದಿಂದ ಬೆಂಗಳೂರು ನಗರದಲ್ಲಿ ಕನ್ನಡಕ್ಕೆ ಹೀನಾಯ ಸ್ಥಿತಿ ಒದಗಿದಾಗ ಕನ್ನಡದ ವಾತಾವರಣವನ್ನು ಮೂಡಿಸಲು, ಕನ್ನಡಿಗರನ್ನು ಎಚ್ಚರಿಸಲು ಹುಟ್ಟಿಕೊಂಡದ್ದೇ ಕನ್ನಡ ಚಳವಳಿ. ಹೀಗೆ ಹೋರಾಟ ಮಾಡಲು ಪ್ರಾರಂಭಿಸಿದವರಲ್ಲಿ ಕೋಣಂದೂರು ಲಿಂಗಪ್ಪ, ಅನಕೃ, ಮೈ.ಸು. ನಟರಾಜ್, ಮೈ.ಸು. ಶೇಷಗಿರಿರಾವ್, ನಾಡಿಗೇರ ಕೃಷ್ಣರಾವ್, ಕರ್ಲಮಂಗಲಂ ಶ್ರೀಕಂಠಯ್ಯ ಮೊದಲಾದವರುಗಳ ಜೊತೆಗೆ ಕೈಜೋಡಿಸಿದವರು ಮ.ರಾಮಮೂರ್ತಿ.

ವೀರಕೇಸರಿ ಸೀತಾರಾಮಶಾಸ್ತ್ರಿಗಳ ಪುತ್ರ: ರಾಮಮೂರ್ತಿಯವರು 1918ರ ಮಾರ್ಚ್ 11ರಂದು ನಂಜನಗೂಡಿನಲ್ಲಿ ಜನಿಸಿದರು. ತಂದೆ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ವೀರಕೇಸರಿ ಸೀತಾರಾಮಶಾಸ್ತ್ರಿಗಳು. ತಾಯಿ ಸುಬ್ಬಮ್ಮನವರು. ಸಾಂಪ್ರದಾಯಿಕ ಮನೆತನದಲ್ಲಿ ಹುಟ್ಟಿದ ರಾಮಮೂರ್ತಿ ಅವರಿಗೆ ವೇದಾಧ್ಯಯನ ಬಾಲ್ಯದಿಂದಲೇ ನಡೆಯಿತು. ಪ್ರಾಥಮಿಕ ಶಾಲೆಯಲ್ಲಿ ಅವರಿಗೆ ಕುಮಾರವ್ಯಾಸ, ರಾಘವಾಂಕ, ಹರಿಹರ ಮೊದಲಾದವರ ಕಾವ್ಯಗಳ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡಿದವರು ಶಾಲಾ ಮಾಸ್ತರಾಗಿದ್ದ ಸುಬ್ರಹ್ಮಣ್ಯ ಅಯ್ಯರ್ ಅವರು.

ಈ ಬಾರಿಯ ಸಮ್ಮೇಳನಕ್ಕೆ ಐತಿಹಾಸಿಕ ಮಹತ್ವವಿದೆ: ಡಾ ಮಹೇಶ್‌ ಜೋಶಿ

ತಂದೆ ಸೀತಾರಾಮಶಾಸ್ತ್ರಿಗಳು ಗಾಂಧೀಜಿಯವರ ವಿಚಾರಧಾರೆಗಳಿಗೆ ಮನಸೋತು ಚಳವಳಿ ಹಾದಿ ಹಿಡಿದರು. ಚಳವಳಿ ಪ್ರಚಾರಕ್ಕಾಗಿ ಬೆಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಪ್ರಾರಂಭಿಸಿದ ಪತ್ರಿಕೆ ‘ವೀರಕೇಸರಿ’. ಚಳವಳಿಯಿಂದ ಕಾರಾಗೃಹವಾಸವನ್ನು ಅನುಭವಿಸಬೇಕಾಗಿ ಬಂದರೂ ಅವರು ಧೃತಿಗೆಡಲಿಲ್ಲ. ಮಾಧ್ಯಮಿಕ ಶಾಲೆಯ ನಂತರ ರಾಮಮೂರ್ತಿಯವರು ಬೆಂಗಳೂರಿನ ಗಾಂಧಿನಗರದಲ್ಲಿದ್ದ ಆರ್ಯ ವಿದ್ಯಾಶಾಲೆಗೆ ಸೇರಿದರು. ಅಂದಿನ ದಿನದಲ್ಲಿ ಆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಮೇರು ಬರಹಗಾರ ದೇವುಡು ನರಸಿಂಹ ಶಾಸ್ತ್ರಿಗಳು ಬಾಲಕ ರಾಮಮೂರ್ತಿಯವರಲ್ಲಿ ಕನ್ನಡ ಪ್ರೇಮವನ್ನು ಬಿತ್ತಿದರು. ಇದರಿಂದ ಪ್ರೇರಿತರಾಗಿ ಮ. ರಾಮಮೂರ್ತಿಯವರು ಬರೆದ ಮೊದಲ ಕಥೆ ‘ಗುರುದಕ್ಷಿಣೆ’. ಇದನ್ನು ಮಕ್ಕಳಿಗಾಗಿಯೇ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಹಿರಿಯ ಪತ್ರಕರ್ತ ಅಶ್ವತ್ಥನಾರಾಯಣರಾಯರು ತಮ್ಮ ‘ಮಕ್ಕಳ ಪುಸ್ತಕ’ ಪತ್ರಿಕೆಯಲ್ಲಿ ಪ್ರಕಟಿಸಿದರು.

ಪತ್ರಿಕೆಗಳನ್ನು ಹುಟ್ಟು ಹಾಕಿದ್ದರು: ತಂದೆಯವರು ಪ್ರಕಟಿಸುತ್ತಿದ್ದ ‘ವೀರಕೇಸರಿ’ ಪತ್ರಿಕೆ ಸಂಪೂರ್ಣವಾಗಿ ಸ್ವಾತಂತ್ರ್ಯ ಚಳವಳಿಯ ಪ್ರಚಾರ, ಆಂದೋಲನದಲ್ಲಿ ತೊಡಗಿಸಿಕೊಂಡಿದ್ದರಿಂದ ರಾಮಮೂರ್ತಿಯವರೂ ಈ ಪತ್ರಿಕೆಯಲ್ಲಿ ಆಸಕ್ತರಾಗಿ ತಂದೆಯವರ ಜೊತೆಗೆ ಕೈಜೋಡಿಸಿದರು. ಇದಕ್ಕಾಗಿ ಇಂಗ್ಲಿಷ್ ಭಾಷೆಯನ್ನು ನಾರಾಯಣಸ್ವಾಮಿ ಅಯ್ಯರ್ ಅವರಿಂದ ಕಲಿತು, ಇಂಗ್ಲಿಷ್‌ನಲ್ಲಿ ಬರುತ್ತಿದ್ದ ಸುದ್ದಿ ಸಂಗ್ರಹಗಳನ್ನು ಪತ್ರಿಕೆಗಾಗಿ ಅನುವಾದಿಸತೊಡಗಿದರು. ವೀರಕೇಸರಿ ಪತ್ರಿಕೆಯು ಕಾರಣಾಂತರದಿಂದ ಪ್ರಕಟಣೆಯನ್ನು ನಿಲ್ಲಿಸಿದ್ದರಿಂದ ರಾಮಮೂರ್ತಿಯವರೇ ‘ವಿನೋದಿನಿ’, ‘ಕಥಾವಾಣಿ’, ‘ವಿನೋದವಾಣಿ’ ಮುಂತಾದ ಪತ್ರಿಕೆಗಳನ್ನು ಹುಟ್ಟುಹಾಕಿದರು. ಸ್ವಾತಂತ್ರ್ಯ ಪೂರ್ವದ ಬಿಗಿ ನೀತಿಯ ಪತ್ರಿಕಾ ಕಾನೂನಿನಿಂದ ಕೋರ್ಟು ಮೆಟ್ಟಿಲು ಹತ್ತಬೇಕಾಗಿ ಬಂದರೂ ಧೈರ್ಯಗೆಡದೆ ಪತ್ರಿಕೆಯ ಧ್ಯೇಯೋದ್ದೇಶಗಳನ್ನು ವಿವರಿಸಿ ಗೆದ್ದು ಬಂದರು.

ಕನ್ನಡಕ್ಕಾಗಿ ಹಲವು ಕಾರ್ಯಕ್ರಮ: ಕನ್ನಡದ ವಾತಾವರಣವನ್ನು ಮೂಡಿಸಲು, ಸಾಂಸ್ಕೃತಿಕ ಕಾರ್ಯಕ್ರಮಗಳಾದ ರಾಮೋತ್ಸವ ಮುಂತಾದವುಗಳಲ್ಲಿ ಕನ್ನಡ ಕಲಾವಿದರಿಗೆ ಮನ್ನಣೆ ಸಿಗುವಂತೆ ಮಾಡಲು, ಬಿಡುಗಡೆಯಾದ ಕನ್ನಡ ಚಲನಚಿತ್ರಗಳಿಗೆ ಚಿತ್ರಮಂದಿರಗಳು ದೊರೆಯುವಂತೆ ಮಾಡಲು, ಚಲನಚಿತ್ರ ನಿರ್ಮಾಣದಲ್ಲಿ ಕನ್ನಡಗರಿಗೆ ಆದ್ಯತೆ ದೊರೆಯುವಂತಾಗಲು, ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶಗಳು ದೊರೆಯುವಂತಾಗಲು ‘ಕನ್ನಡ ಸಂಯುಕ್ತರಂಗ’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದಾಗ ಅನಕೃ ಅವರು ಅಧ್ಯಕ್ಷರಾಗಿ ಮ. ರಾಮಮೂರ್ತಿಯವರು ಕಾರ್ಯದರ್ಶಿಗಳಾಗಿ ಜವಾಬ್ದಾರಿ ಹೊರಬೇಕಾಯಿತು. ಇದರ ಮುಖವಾಣಿಯಾಗಿ ‘ಕನ್ನಡ ಯುವಜನ’ ಎಂಬ ಪತ್ರಿಕೆಯನ್ನು ಹೊರಡಿಸಿದರು.

150 ಪತ್ತೇದಾರಿ ಕಾದಂಬರಿ ಬರೆದರು: ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಬೆಂಗಳೂರಿನ ಸುತ್ತಮುತ್ತಲೂ ಕನ್ನಡೇತರರ ಹಾವಳಿ ಮಿತಿಮೀರಿದಾಗ, ಜನ ಸಾಮಾನ್ಯರಲ್ಲಿ ಕನ್ನಡದ ಅರಿವು ಮೂಡಿಸಲು ಇರುವ ಏಕೈಕ ಮಾರ್ಗವೆಂದರೆ ಕನ್ನಡವನ್ನು ಎಲ್ಲರೂ ಓದುವಂತಾಗಲು ಕುತೂಹಲಭರಿತ ಕಾದಂಬರಿಗಳ ಕ್ಷೇತ್ರವೂ ಒಂದು ಎಂದು ಚಿಂತಿಸಿದ ರಾಮಮೂರ್ತಿಯವರು, ಅನೇಕ ಪತ್ತೇದಾರಿ ಕಾದಂಬರಿಗಳ ರಚನೆಗೆ ಮುಂದಾದರು. 1950-60ರ ದಶಕದಲ್ಲಿ ಅವರು ಹಲವಾರು ಪತ್ತೇದಾರಿ ಕಾದಂಬರಿಗಳನ್ನು ರಚಿಸಿದರು. ವಿಪ್ಲವ, ಇಬ್ಬರು ರಾಣಿಯರು, ಚಿತ್ರಲೇಖ, ರಾಜದಂಡ, ವಿಷಕನ್ಯೆ, ಮರೆಯಾಗಿದ್ದ ವಜ್ರಗಳು ಮುಂತಾಗಿ ಅವರು ರಚಿಸಿದ ಪತ್ತೇದಾರಿ ಕಾದಂಬರಿಗಳ ಸಂಖ್ಯೆ 150ಕ್ಕೂ ಹೆಚ್ಚು. ಈ ಪತ್ತೇದಾರಿ ಕಾದಂಬರಿಗಳ ಜೊತೆಗೆ ಅವರು ಹಲವಾರು ಐತಿಹಾಸಿಕ ಕಾದಂಬರಿಗಳನ್ನೂ ರಚಿಸಿದ್ದು ಸಾವನದುರ್ಗದ (ಮಾಗಡಿ ಸಮೀಪ) ರಸವತ್ತಾದ ವರ್ಣನೆಯ ‘ಭಾಗ್ಯದ ಮದುವೆ’, ಬಾಗೇಪಲ್ಲಿ ಪಾಳೆಗಾರಿಕೆಯ ಸುತ್ತ ಹೆಣೆದ ಕೋಟೆ ಕೊತ್ತಲಗಳ ವರ್ಣನೆಯ ‘ಪ್ರೇಮಮಂದಿರ’ ಮಹತ್ವವಾದವು. ಇವಲ್ಲದೆ ‘ಹಿಪ್ಪರಗಿ’ ಸೀಮೆ ಮತ್ತು ‘ಇಬ್ಬರು ರಾಣಿಯರು’ ಮುಂತಾದ ಕಾದಂಬರಿಗಳು ವಿಪುಲವಾದ ಚಾರಿತ್ರಿಕ ವರ್ಣನೆಗಳಿಂದ ಕೂಡಿದ್ದರೆ, ಶಿವಮೊಗ್ಗ ಜಿಲ್ಲೆಯ ‘ನಗರ’ದಲ್ಲಿ ನಡೆದ ರೈತ ಬಂಡಾಯ ಕುರಿತ ‘ರಾಜದಂಡ’ ಚಾರಿತ್ರಿಕವಾಗಿ ಅದ್ವಿತೀಯ ಕಾದಂಬರಿ ಎನಿಸಿದೆ.

ಕನ್ನಡದ ದೀಪ ನಂದಿದ ಆ ದಿನ: ಆರಡಿ ಎತ್ತರದ ಆಜಾನುಬಾಹು. ದೃಷ್ಟಿನೋಟದಿಂದಲೇ ಎದುರಿಗೆ ನಿಂತವರನ್ನು ಸೆರೆ ಹಿಡಿದುಬಿಡುವ ಬೊಗಸೆ ಕಂಗಳು, ಕಂಚಿನ ಕಂಠ ಇವುಗಳು ಮ. ರಾಮಮೂರ್ತಿಯವರ ವಿಶೇಷವಾದರೆ, ವೇದಿಕೆ ಹತ್ತಿ ನಿಂತು ಅವರು ನಿರರ್ಗಗಳವಾಗಿ ಮಾಡುತ್ತಿದ್ದ ಭಾಷಣಗಳು ಕನ್ನಡಿಗರ ನರನಾಡಿಗಳನ್ನು ಕನ್ನಡಕ್ಕಾಗಿ ಪ್ರಚೋದಿಸುತ್ತಿದ್ದವು. ಪರಮಸಾಹಸಿಯಾದ ರಾಮಮೂರ್ತಿಯವರು ಕೃಷಿಕ ಜೀವನವನ್ನು ನಡೆಸಲು ಬಯಸಿ ಬೆಂಗಳೂರು-ಕನಕಪುರ ರಸ್ತೆಯ ತಲಘಟ್ಟಪುರದ ತಮ್ಮ ಜಮೀನಿನಲ್ಲಿ ನೀರಿನ ಆಸರೆಗಾಗಿ ಬಾವಿ ತೋಡಿಸುತ್ತಿದ್ದಾಗ, ಬಾವಿಯಲ್ಲಿ ನೀರು ಬಂದಿತೆಂಬ ಸಂತಸದಿಂದ ದಿವಾಕರ ಮತ್ತು ಮಂಜುನಾಥ ಎಂಬ ಮಕ್ಕಳಿಬ್ಬರೊಡನೆ ಬಾವಿಗಿಳಿದಾಗ, ಮೇಲಿಂದ ಮಣ್ಣು ಕುಸಿದು ಕೂಲಿಗಳೊಡನೆ ಮೂವರೂ ದುರ್ಮರಣಕ್ಕೀಡಾದರು. ಇದು ಕನ್ನಡ ನಾಡಿಗೇ ಬರಸಿಡಿಲಿನಂತೆ ಬಂದೆರಗಿದ ದುರಂತ. ಹೀಗೆ ಕನ್ನಡದ ದೀಪ ನಂದಿ ಹೋದದ್ದು ಡಿಸೆಂಬರ್ 25ರ 1967ರಲ್ಲಿ.

ಬೆಂಗಳೂರು ಏರ್ಪೋರ್ಟ್ ಜೊತೆ ಕೈಜೋಡಿಸಿದ ಕನ್ನಡ ಸಾಹಿತ್ಯ ಪರಿಷತ್: ಬಿಎಐಎಲ್‌ನಲ್ಲಿ ಮಂಡ್ಯ ಸಮ್ಮೇಳನದ ಮಾಹಿತಿ!

ಕನ್ನಡಕ್ಕೆ ತನ್ನ ಸರ್ವಸ್ವವನ್ನು ಸಮರ್ಪಣೆ ಮಾಡಿದ ಮ.ರಾಮಮೂರ್ತಿಯವರ ಮಡದಿ ಕಮಲಮ್ಮನವರು ಈಗ ತಮ್ಮ ಇಳಿ ವಯಸ್ಸಿನಲ್ಲಿ ವೃದ್ಧಾಪ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದು ಕನ್ನಡ ಸಾಹಿತ್ಯ ಪರಿಷತ್ತು ಅವರ ಚಿಕಿತ್ಸೆಗೆ ಧನ ಸಹಾಯ ಮಾಡಿರುವುದು ಮಾತ್ರವಲ್ಲದೆ ಅವರ ಕುರಿತು ವೈಯಕ್ತಿಕ ಕಾಳಜಿಯನ್ನೂ ಕೂಡ ವಹಿಸಿದೆ. ಯಾವುದೇ ಪ್ರಚಾರದ ದೃಷ್ಟಿಯಿಲ್ಲದೆ ಮ.ರಾಮ ಮೂರ್ತಿಯವರ ಮೇಲಿನ ಗೌರವದಿಂದ ನಿರಂತರವಾಗಿ ಕಮಲಮ್ಮನವರಿಗೆ ನೆರವು ನೀಡುತ್ತಾ ಬಂದಿದೆ.