ಭಯೋತ್ಪಾದಕರನ್ನು ಭಯೋತ್ಪಾದಕರಂತೇ ನೋಡಿ: ರವಿ, ಹಣ ಕಳ್ಳತನ ನೋಡಿದ್ದೇವೆ, ಮತ ಕಳ್ಳತನ ನೋಡಿಲ್ಲ: ಡಿ.ಕೆ.ಶಿವಕುಮಾರ್‌ 

ವಿಧಾನಸಭೆ(ಡಿ.28): ಮಂಗಳೂರಲ್ಲಿ ಸಂಭವಿಸಿದ ಕುಕ್ಕರ್‌ ಸ್ಪೋಟ ಪ್ರಕರಣವು ಸದನದಲ್ಲಿ ಪ್ರತಿಧ್ವನಿಸಿದ್ದು, ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ನಡುವೆ ಮಾತಿನ ಸಮರ, ಚರ್ಚೆಗೆ ಕಾರಣವಾಯಿತು. ಮಂಗಳವಾರ ಸಾರ್ವಜನಿಕ ಮಹತ್ವದ ವಿಷಯದ ಮೇಲಿನ ಚರ್ಚೆ ವೇಳೆ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ಮಂಗಳೂರು ಕುಕ್ಕರ್‌ ಬಾಂಬ್‌ ಪ್ರಕರಣವನ್ನು ಪ್ರಸ್ತಾಪಿಸಿದರು. ಘಟನೆ ಸಂಬಂಧ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು ನೀಡಿದ ಹೇಳಿಕೆಯನ್ನು ವಾಪಸ್‌ ಪಡೆದುಕೊಳ್ಳಬೇಕು ಮತ್ತು ಬೇಷರತ್‌ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್‌ ಸದಸ್ಯ ಡಿ.ಕೆ.ಶಿವಕುಮಾರ್‌ ಹೆಸರು ಪ್ರಸ್ತಾಪಿಸದೆ ಒತ್ತಾಯಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮದೇ ಪಕ್ಷದ ಇಬ್ಬರು ನಾಯಕರನ್ನು ಭಯೋತ್ಪಾದನೆಯಿಂದಾಗಿ ಕಳೆದುಕೊಂಡಿದ್ದಾರೆ. ಅವರನ್ನು ಗಮನದಲ್ಲಿಟ್ಟುಕೊಂಡು ಹೇಳಿಕೆ ನೀಡಬೇಕಾಯಿತು. ಕೇವಲ ಮತ ಬ್ಯಾಂಕ್‌ಗಾಗಿ ಸಿಂಪತಿ ಪಡೆದುಕೊಳ್ಳಲು ಒಂದು ಸಮುದಾಯವನ್ನು ಒಲೈಕೆ ಮಾಡುವುದು ಸರಿಯಲ್ಲ. ಭಯೋತ್ಪಾದಕರನ್ನು ಭಯೋತ್ಪಾದಕರಂತೆಯೇ ನೋಡಬೇಕು. ಪ್ರತಿಯೊಬ್ಬ ನಾಯಕರು ಭಯೋತ್ಪಾದಕರನ್ನು ವಿರುದ್ಧ ಶೂನ್ಯ ಸಹಿಷ್ಣುತೆ ತೋರಿದರೆ ಮಾತ್ರ ಭಯೋತ್ಪಾದನೆ ಹರಡುವಿಕೆಗೆ ಅವಕಾಶ ಸಿಗುವುದಿಲ್ಲ ಎಂದು ಹೇಳಿದರು.

ಮಂಗ್ಳೂರು ಸ್ಫೋಟ: ಗಾಯಾಳು ರಿಕ್ಷಾ ಚಾಲಕನಿಗೆ ಸರ್ಕಾರದ ಪರಿಹಾರ ಮರೀಚಿಕೆ

ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಈ ರಾಜ್ಯದಲ್ಲಿ ಎಲ್ಲ ರೀತಿಯ ಕಳ್ಳತನ ನೋಡಿದ್ದೇವೆ. ಹಣ ಕದಿಯುವವರು, ಒಡವೆ ಕದಿಯುವವರು, ಚಪ್ಪಲಿ ಕದಿಯುವವರು, ಬೇರೆ ವಸ್ತು ಕದಿಯುವವರನ್ನು ನೋಡಿದ್ದೇವೆ. ಆದರೆ, ಮತ ಕಳ್ಳತನ ಮಾಡುವುದನ್ನು ನೋಡಿರಲಿಲ್ಲ. ಈ ವಿಚಾರದ ದಾರಿ ತಪ್ಪಿಸಲು ಕುಕ್ಕರ್‌ ಬಾಂಬ್‌ ಪ್ರಕರಣ ಪ್ರಸ್ತಾಪಿಸಿ ದಿಕ್ಕು ತಪ್ಪಿಸಲಾಗಿದೆ. ಭಯೋತ್ಪಾದನೆಗೆ ಎಂದಿಗೂ ಕಾಂಗ್ರೆಸ್‌ ಬೆಂಬಲ ನೀಡುವುದಿಲ್ಲ. ಕಟುವಾಗಿ ಅದನ್ನು ವಿರೋದಿಸುತ್ತೇವೆ ಎಂದು ತಿರುಗೇಟು ನೀಡಿದರು.

ಪ್ರಕರಣದ ಆರೋಪಿ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆತನ ವಿಚಾರಣೆ ಮಾಡಿಲ್ಲ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತರು ಹೇಳಿಕೆ ನೀಡಿರುವಾಗ, ಪೊಲೀಸ್‌ ಮಹಾನಿರ್ದೇಶಕರು ಘಟನೆ ನಡೆದ ಮರು ದಿನವೇ, ಆರೋಪಿಯ ವಿಚಾರಣೆ ನಡೆಯುವ ಮುನ್ನವೇ ಇದನ್ನು ಭಯೋತ್ಪಾದಕ ಕೃತ್ಯ ಎಂದು ಘೋಷಿಸಿದರು. ಆ ಮೂಲಕ ಮತದಾರರ ಮಾಹಿತಿ ಕಳವು ವಿಚಾರ ಚರ್ಚೆ ಆಗುವಾಗ ಅದರ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ವಿಷಯಾಂತರ ಮಾಡಲು ಈ ಕುಕ್ಕರ್‌ ಪ್ರಕರಣವನ್ನು ಬಳಸಿಕೊಂಡಿದ್ದಾರೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದೆ ಎಂದು ಸ್ಪಷ್ಟನೆ ನೀಡಿದರು.

ಮತದಾರರ ವಿವರ ಕಳ್ಳತನ ಕೇಸು ಮುಚ್ಚಿ ಹಾಕಲ್ಲ: ಸಿಎಂ

ಮತದಾರರ ವೈಯಕ್ತಿಕ ವಿವರ ಕಳವು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ ಮತ್ತು ಭಯೋತ್ಪಾದನೆ ಮಟ್ಟಹಾಕುವಲ್ಲಿ ರಾಜಿಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಮತದಾರರ ವೈಯಕ್ತಿಕ ವಿವರ ಕಳವು ಪ್ರಕರಣ ಸಂಬಂಧ ಪೊಲೀಸ್‌, ಚುನಾವಣಾ ಆಯೋಗವು ತನಿಖೆ ನಡೆಸುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಖಚಿತ. ಆದರೆ, ಭಯೋತ್ಪಾದನೆ ವಿಚಾರದಲ್ಲಿ ಹಗುರವಾಗಿ ಮಾತನಾಡುವುದನ್ನು ಸಹಿಸುವುದಿಲ್ಲ. ಒಂದಕ್ಕೊಂದು ತಾಳೆ ಹಾಕುವುದು ಸರಿಯಲ್ಲ ಎಂದರು.