ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆಯಾಗಿದ್ದು, ದಶಕಗಳ ನಿಷ್ಠಾವಂತ ನಾಯಕ ಕೆಸಿ ವೇಣುಗೋಪಾಲ್ ಅವರಿಗೆ ಅವಕಾಶ ಕೈತಪ್ಪಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು/ತಿರುವನಂತಪುರಂ (ಮೇ 14): ಕೇರಳ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ವಿ.ಡಿ. ಸತೀಶನ್ ಅವರನ್ನು ಕೇರಳದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದ್ದು, ದಶಕಗಳಿಂದ ಪಕ್ಷಕ್ಕಾಗಿ ಶ್ರಮಿಸಿದ ಕೆಸಿ ವೇಣುಗೋಪಾಲ್ ಅವರಿಗೆ ಈ ಅವಕಾಶ ಕೈತಪ್ಪಿದೆ. ಈ ಬೆಳವಣಿಗೆಯು ಈಗ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕರ್ನಾಟಕದ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ನಿಷ್ಠಾವಂತ ರಾಜಕಾರಣಿಗೆ ಆದ ಅನ್ಯಾಯವೇ?

ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ದೀರ್ಘವಾದ ಪೋಸ್ಟ್ ಮಾಡಿರುವ ಟಬು ರಾವ್ ಅವರು, ಕೆಸಿ ವೇಣುಗೋಪಾಲ್ ಅವರ ತ್ಯಾಗ ಮತ್ತು ನಿಷ್ಠೆಯನ್ನು ಸ್ಮರಿಸಿದ್ದಾರೆ. 'ಕೆಸಿ ವೇಣುಗೋಪಾಲ್ ಅವರು ಮುಖ್ಯಮಂತ್ರಿಯಾಗಲು ಅತ್ಯಂತ ಅರ್ಹರಾಗಿದ್ದರು. ಆದರೆ ಅವರಿಗೆ ಈ ಅವಕಾಶ ಸಿಗದಿರುವುದು ನಿಜಕ್ಕೂ ಬೇಸರದ ಸಂಗತಿ. ಅವರು ಕೇವಲ 'ದೆಹಲಿ ನಾಯಕ' ಅಲ್ಲ, ಬದಲಾಗಿ ಯುವ ಕಾಂಗ್ರೆಸ್ ಹಂತದಿಂದಲೇ ತಳಮಟ್ಟದಲ್ಲಿ ಜನಬೆಂಬಲ ಹೊಂದಿರುವ ನಾಯಕ' ಎಂದು ಟಬು ರಾವ್ ಬರೆದುಕೊಂಡಿದ್ದಾರೆ.

ಪಕ್ಷದ ಬಲವರ್ಧನೆಗೆ ವೇಣುಗೋಪಾಲ್ ಶ್ರಮ:

ಕಳೆದ ಹಲವು ವರ್ಷಗಳಿಂದ ಎಐಸಿಸಿ ಸಂಘಟನಾ ಕಾರ್ಯದರ್ಶಿಯಾಗಿ ದೆಹಲಿಯಲ್ಲಿ ಹಗಲು-ರಾತ್ರಿ ಕೆಲಸ ಮಾಡಿದ ವೇಣುಗೋಪಾಲ್ ಅವರ ಕಾರ್ಯವೈಖರಿಯನ್ನು ಟಬು ರಾವ್ ಶ್ಲಾಘಿಸಿದ್ದಾರೆ. "ದೇಶದ ಮೂಲೆಮೂಲೆಗಳಿಂದ ಬಂದ ಜನರ ಸಮಸ್ಯೆಗಳನ್ನು ಆಲಿಸಿ, ಪಕ್ಷದ ಆಂತರಿಕ ಬಿಕ್ಕಟ್ಟುಗಳನ್ನು ಬಗೆಹರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ದೆಹಲಿ ರಾಜಕಾರಣದಲ್ಲಿ ಅವರು ತೊಡಗಿಸಿಕೊಂಡ ಕಾರಣದಿಂದಲೇ ಅವರ ಸ್ಥಳೀಯ ರಾಜಕೀಯ ಬದುಕಿನ ಮೇಲೆ ಪ್ರಭಾವ ಬೀರಿದೆ" ಎಂದು ಅವರು ವಿಶ್ಲೇಷಿಸಿದ್ದಾರೆ.

ಅಪ್ರಿಯರಾದ ನಾಯಕ:

ಪಕ್ಷಕ್ಕಾಗಿ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡಿದ ವ್ಯಕ್ತಿ ಇಂದು ಅನೇಕರಿಗೆ ಅಪ್ರಿಯನಾಗಿರುವುದು ದುಃಖಕರ ಎಂದು ಟಬು ರಾವ್ ಹೇಳಿದ್ದಾರೆ. 'ಇಂದಿನ ರಾಜಕೀಯ ಕಾಲಘಟ್ಟದಲ್ಲಿ ಪಕ್ಷಕ್ಕಾಗಿ ತ್ಯಾಗ ಮಾಡುವವರು ಮತ್ತು ತಳಮಟ್ಟದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರು ತಮ್ಮ ರಾಜಕೀಯ ನೆಲೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ. ಇದು ನಿಜಕ್ಕೂ ವಿಷಾದನೀಯ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Scroll to load tweet…

ಪಕ್ಷದ ಶಿಸ್ತಿನ ಸಿಪಾಯಿ:

ವೇಣುಗೋಪಾಲ್ ಅವರಿಗೆ ಸಿಎಂ ಸ್ಥಾನ ತಪ್ಪಿದ್ದರೂ, ಅವರು ಎಂದಿಗೂ ಪಕ್ಷದ ತೀರ್ಮಾನದ ವಿರುದ್ಧ ನಿಲ್ಲುವ ವ್ಯಕ್ತಿಯಲ್ಲ ಎಂಬುದನ್ನು ಟಬು ರಾವ್ ಒತ್ತಿ ಹೇಳಿದ್ದಾರೆ. 'ಅವರು ಅತ್ಯಂತ ವಿವೇಕಿ ಮತ್ತು ಶಿಸ್ತಿನ ರಾಜಕಾರಣಿ. ಏನೇ ಅನ್ಯಾಯವಾದರೂ ಅವರು ಪಕ್ಷದ ಚೌಕಟ್ಟನ್ನು ಮೀರದ ವ್ಯಕ್ತಿ' ಎಂದು ಹೇಳುವ ಮೂಲಕ ವೇಣುಗೋಪಾಲ್ ಅವರ ವ್ಯಕ್ತಿತ್ವಕ್ಕೆ ಬೆಂಬಲ ನೀಡಿದ್ದಾರೆ.

ಸದ್ಯ ಟಬು ರಾವ್ ಅವರ ಈ ಪೋಸ್ಟ್ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಹಿರಿಯ ನಾಯಕರ ನಿಷ್ಠೆಯನ್ನು ಪರಿಗಣಿಸುವ ಬಗ್ಗೆ ಕಾಂಗ್ರೆಸ್‌ನಲ್ಲಿ ಒಳಗೊಳಗೆ ಅಸಮಾಧಾನವಿದೆಯೇ ಎಂಬ ಪ್ರಶ್ನೆ ಎದ್ದಿದೆ.