ಜೀವದ ಹಂಗು ತೊರೆದು ರೈಲು ಚೈನ್ ಬಿಡಿಸಿದ ವಿಷ್ಣುಮೂರ್ತಿಗೆ ಶೌರ್ಯ ಪ್ರಶಸ್ತಿ ಗೌರವ!
ತಾವಾಯ್ತು ತಮ್ಮ ಕೆಲಸವಾಯ್ತು ಅನ್ನೋ ಕಾಲ ಇದು. ಇತರರ ಸಹಾಯಕ್ಕೆ, ನೆರವಿಗೆ ನಿಲ್ಲುವ ವಿಶಾಲ ಮನಸ್ಸು ಹಾಗೂ ಧರ್ಯ ಎಲ್ಲರಿಗೂ ಇರುವುದಿಲ್ಲ. ತಮ್ಮ ಕಷ್ಟ ಕಾರ್ಪಣ್ಯಗಳನ್ನು ಬದಿಗಿಟ್ಟು, ಜೀವದ ಹಂಗು ತೊರೆದು ಹಲವರ ಬದುಕಿಗೆ ಬೆಳಕಾದವರೂ ನಮ್ಮಲ್ಲಿದ್ದಾರೆ. ಹೀಗೆ ಜೀವವನ್ನೇ ಪಣಕ್ಕಿಟ್ಟು, ಸೇತುವೆ ಮೇಲೆ ರೈಲಿನ ಚೈನ್ ಬಿಡಿಸಿದ ಸಾಹಸಿಗನಿಗೆ ರೈಲ್ವೇ ಗಾರ್ಡ್ ಎನ್ ವಿಷ್ಣುಮೂರ್ತಿಗೆ ಸುವರ್ಣನ್ಯೂಸ್-ಕನ್ನಡ ಪ್ರಭ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ವಿಷ್ಣುಮೂರ್ತಿಕಿರು ಪರಿಚಯ ಇಲ್ಲಿದೆ.
ಬೆಂಗಳೂರು(ಡಿ.21): ಕಷ್ಟದಲ್ಲಿರುವ, ಜೀವನ್ಮರ ಹೋರಾಟದಲ್ಲಿರವರಿಗೆ ತಕ್ಷಣ ನೆರವಾಗಿ, ಅವರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿ ಸಾಹಸಿಗಳಿಗೆ ಸುವರ್ಣನ್ಯೂಸ್-ಕನ್ನಡ ಪ್ರಭ ಪ್ರತಿ ವರ್ಷ ಶೌರ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಹೀಗೆ ಸಾಹಸ ಮೆರೆದ ರೈಲ್ವೇ ಗಾರ್ಡ್ ಎನ್.ವಿಷ್ಣುಮೂರ್ತಿ ಪ್ರಸಕ್ತ ವರ್ಷದ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಎನ್.ವಿಷ್ಣುಮೂರ್ತಿ ಸಾಹಸಗಾಥೆ:
ಕಿಡಿಗೇಡಿಯೊಬ್ಬ ಚಲಿಸುತ್ತಿದ್ದ ರೈಲಿನ ಅಲಾರಾಂ ಚೈನ್ ಎಳೆದಿದ್ದರಿಂದ ಶ್ರೀರಂಗಪಟ್ಟಣದ ಸೇತುವೆ ಮೇಲೆ ರೈಲು ನಿಂತಿತ್ತು. ಆಗ ರೈಲಿನ ಗಾರ್ಡ್ ಎನ್.ವಿಷ್ಣುಮೂರ್ತಿ ಜೀವದ ಹಂಗು ತೊರೆದು ಈ ಅಪಾಯಕಾರಿ ಸೇತುವೆ ಮೇಲೆ ನಡೆದುಕೊಂಡೇ ಹೋಗಿ ಬೋಗಿಗಳ ನಡುವೆ ಸಿಲುಕಿದ್ದ ಅಲಾರಾಂ ಚೈನನ್ನು ಬಿಡಿಸಿದರು. ಅತ್ಯಂತ ಕ್ಲಿಷ್ಟಕರ, ಜೀವಕ್ಕೆ ಕಂಟಕವಾಗಿದ್ದ ಈ ಸೇತುವೆ ಮೇಲಿನ ವಿಷ್ಣುಮೂರ್ತಿ ಸಾಹಸವನ್ನು ಪ್ರಯಾಣಿಕರು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆಗೂ ಪಾತ್ರವಾಗಿತ್ತು.
40 ಪ್ರಯಾಣಿಕರ ಜೀವ ಉಳಿಸಿದ ಬಸ್ ಚಾಲಕ ತುಕಾರಾಮಗೆ ಶೌರ್ಯ ಪ್ರಶಸ್ತಿ!
ಪ್ರತಿ ರೈಲು ಸೇತುವೆಗಳು ಅಪಾಯಕಾರಿ. ಇದಕ್ಕೆ ಶ್ರೀರಂಗಪಟ್ಟಣ ರೈಲು ಸೇತುವೆ ಕೂಡ ಹೊರತಾಗಿರಲಿಲ್ಲ. ಈ ಸೇತುವೆ ಮೇಲಿನಿಂದ ಕೆಳಗೆ ನೋಡಿದರೆ ತಲೆ ತಿರುಗಿದ ಅನುಭವವಾಗುವುದು ಖಚಿತ. ಇಂತಹ ಪರಿಸ್ಥಿತಿಯಲ್ಲಿ ಎತ್ತರದ ಸೇತುವೆ ಮೇಲಿನ ಸರಳುಗಳ ಮೇಲೆ ನಡೆದುಕೊಂಡು ಹೋಗಿ ಚೈನ್ ಅನ್ನು ಬಿಡಿಸುವುದು ಸುಲ‘ದ ಮಾತಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಕುತ್ತಾಗುವ ಸಾಧ್ಯತೆ ಇತ್ತು. ಆದರೆ ಇದ್ಯಾವುದನ್ನು ಲೆಕ್ಕಿಸಿದೆ ಚೈನ್ ಬಿಡಿಸಿದ ಸಾಹಸಿಗ ಎನ್.ವಿಷ್ಣುಮೂರ್ತಿ.
ಊರು: ಶ್ರೀರಂಗಪಟ್ಟಣ, ಮಂಡ್ಯ
ವೃತ್ತಿ: ರೈಲ್ವೇ ಗಾರ್ಡ್
ಸಾಧನೆ: ಸೇತುವೆ ಮೇಲೆ ನಡೆದು ಚೈನ್ ಬಿಡಿಸಿ ಸಾಹಸ!