ವನ್ಯ ಜೀವಿ ಸಂರಕ್ಷಕ ರಘುರಾಮ ಗೌಡ; ಶೌರ್ಯ ಪ್ರಶಸ್ತಿ
ಈ ಭೂಮಿಯಲ್ಲಿರುವ ಪ್ರತಿಯೊಂದು ಜೀವಸಂಕುಲಕ್ಕೂ ಬದುಕುವ ಹಕ್ಕಿದೆ. ಆದರೆ ಬುದ್ದಿಜೀವಿ ಎಂದು ಕರೆಸಿಕೊಂಡಿರುವ ಮಾನವ ಕಾಡು ಸೇರಿದಂತೆ ವನ್ಯ ಪ್ರಾಣಿಗಳನ್ನು ವಿನಾಶದ ಅಂಚಿಗೆ ತಂದಿದ್ದಾನೆ. ಆದರೆ ಕೆಲವೇ ಕೆಲವು ಮಂದಿ ವನ್ಯ ಜೀವಿ, ಗಿಡ ಮರಗಳ ಕುರಿತು ಕಾಳಜಿ ವಹಿಸಿ ಅವುಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇಂತವರಲ್ಲಿ ತುಮಕೂರಿನ ರಘುರಾಮ್ ಗೌಡ ಒಬ್ಬರು. ಇವರ ವನ್ಯಜೀವಿ ಸಂರಕ್ಷಣೆಯನ್ನು ಗುರುತಿಸಿದ ಸುವರ್ಣನ್ಯೂಸ್ ಕನ್ನಡ ಪ್ರಭ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ರಘುರಾಮ್ ಗೌಡ್ ಅವರ ವನ್ಯಜೀವಿ ಸಂರಕ್ಷಣಾ ಕಾರ್ಯ ಹಾಗೂ ಕಿರು ಪರಿಚಯ ಇಲ್ಲಿದೆ.
ಬೆಂಗಳೂರು(ಡಿ.21): ವನ್ಯ ಜೀವಿಗಳನ್ನು ನಮ್ಮಂತೆ ಬದುಕುವ ಹಕ್ಕನ್ನು ಪಡೆದಿದೆ. ಅವುಗಳನ್ನು ಪ್ರೀತಿಯಿಂದ ಕಾಣುವ, ಸ್ವಾತಂತ್ರಕ್ಕೆ ಧಕ್ಕೆ ಬಾರದ ರೀತಿ ನಡೆದುಕೊಳ್ಳುವವರು ಕಡಿಮೆ. ಕಾಡು ದಾರಿಯಲ್ಲಿ ವಾಹನಕ್ಕೆ ಡಿಕ್ಕಿ ಹೊಡೆದು ಪ್ರಾಣ ಬಿಟ್ಟಿರುವ ವನ್ಯ ಜೀವಿಗಳ ಸಂಖ್ಯೆಗೆ ಲೆಕ್ಕವಿಲ್ಲ. ಕಾಡಿನಿಂದ ನಾಡಿಗೆ ಬಂದ ವನ್ಯ ಜೀವಿಗಳು ಮತ್ತೆ ತಮ್ಮ ಗೂಡು ಸೇರಿದ ಉದಾಹರಣೆ ಕಡಿಮೆ. ಆದರೆ ನಾಡಿನತ್ತ ಬಂದ ವನ್ಯ ಪ್ರಾಣಿಗಳನ್ನು ರಕ್ಷಿಸಿ ಮತ್ತೆ ಕಾಡಿಗೆ ಬಿಟ್ಟ ಸಾಹಸಿಯೇ ಕೊರಟಗೆರೆಯ ರಘುರಾಮ ಗೌಡ. ಇವರ ಕಳಕಳಿ ಹಾಗೂ ವನ್ಯ ಸಂರಕ್ಷಣೆ ಪ್ರೀತಿಯನ್ನು ಗುರುತಿಸಿ ಸುವರ್ಣನ್ಯೂಸ್-ಕನ್ನಡ ಪ್ರಭ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ರಘುರಾಮ ಗೌಡ ಸಾಧನೆ
ಗ್ರಾಮವಾಸಿಗಳಿಂದ ಹತ್ಯೆಗೆ ಒಳಗಾಗಬುಹದಾದ ವನ್ಯ ಪ್ರಾಣಿಗಳನ್ನು ರಘುರಾಮ ಗೌಡ ರಕ್ಷಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಇದುವರೆಗೆ ಸುಮಾರು 15 ಚಿರತೆಗಳನ್ನು ಪ್ರಾಣದ ಹಂಗು ತೊರೆದು ಕಾಪಾಡಿದ್ದಾರೆ. ಕೆಲವು ತಿಂಗಳ ಹಿಂದೆ ತುಮಕೂರಿನ ಜಯನಗರದ ಮನೆಯೊಂದರಕ್ಕೆ ಚಿರತೆ ನುಗ್ಗಿತ್ತು. ತಕ್ಷಣವೇ ಕಾರ್ಯ ಪ್ರವೃತ್ತರಾದ ರಘುರಾಮ ಗೌಡ ಚಿರತೆಯ ಜೊತೆ ಸುಮಾರು ಐದು ಗಂಟೆಗಳ ಕಾಲ ಸೆಣಸಾಡಿದ್ದರು. ಕೊನೆಗೆ ಅರಿವಳಿಕೆ ಮದ್ದು ಕೊಟ್ಟು ಚಿರತೆಯನ್ನು ಹೊತ್ತು ಹೊರಗೆ ತಂದ ಸಾಹಸಿ ಈ ರಘುರಾಮ ಗೌಡ.
ಚಿರತೆ ನುಗ್ಗಿದ ಮನೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ಮಾತ್ರವೇ ಇದ್ದರು. ಅವರಿಗೆ ತೊಂದರೆಯಾಗದಂತೆ ಚಿರತೆಯನ್ನು ಹೊರತಂದಿದ್ದಾರೆ. ಇದೇ ರೀತಿ ಕಾಡಿನಿಂದ ನಾಡಿಗೆ ಬಂದು ಗ್ರಾಮದವರ ಕೈಗೆ ಸಿಕ್ಕು ಥಳಿಥಕ್ಕೊಳಗಾದ ಹಲವು ವನ್ಯ ಪ್ರಾಣಿಗಳನ್ನು ಆರೈಕೆ ಮಾಡಿ ಮತ್ತೆ ಕಾಡಿಗೆ ಬಿಟ್ಟ ಸಂರಕ್ಷ ರಘುರಾಮ ಗೌಡ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಇವರ ಕಾರ್ಯವನ್ನು ಸುವರ್ಣನ್ಯೂಸ್ ಕನ್ನಡಪ್ರಭ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದೆ.
ಹೆಸರು: ರಘುರಾಮ ಗೌಡ
ಊರು ಕೊರಟಗೆರೆ, ತುಮಕೂರು
ಸಂಪರ್ಕ 9742921801
ವೃತ್ತಿ ಇಂಜಿನಿಯರ್
ಸಾಧನೆ ಕೊರಟಗೆರೆಯ ರಘುರಾಮ ಗೌಡ ವೃತ್ತಿಯಿಂದ ಇಂಜಿನಿಯರ್. ವನ್ಯಜೀವಿ ಸಂರಕ್ಷಣೆ ಪ್ರವೃತ್ತಿ.