ಬೆಂಗಳೂರಿನಲ್ಲಿ ಸೆಲ್ಕೋದಿಂದ ‘ಇಂಧನ ಮತ್ತು ಜೀವನ’ ಮಹತ್ವದ ಸಮಾವೇಶ!
ಶಕ್ತಿ ಸಂಪನ್ಮೂಲಗಳ ವಿಕೇಂದ್ರೀಕರಣಕ್ಕೆ ಬದ್ಧ ಸೆಲ್ಕೋ| ಸೆಲ್ಕೋ ಫೌಂಡೇಶನ್ ನಿಂದ ಎರಡು ದಿನಗಳ ಸಮಾವೇಶ| ಬೆಂಗಳೂರಿನ ಐಐಎಂ ನಲ್ಲಿ ಸೆಲ್ಕೋ ಸಂಸ್ಥೆಯಿಂದ ಎರಡು ದಿನಗಳ ಸಮಾವೇಶ| ಸಮಾವೇಶ ಉದ್ಘಾಟಿಸಲಿರುವ ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಎಲ್. ಕೆ. ಅತಿಕ್| ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್ ಯೋಜನೆಯ ಮುಖ್ಯಸ್ಥ ಆರ್.ರಮಣನ್ ಉದ್ಘಾಟನಾ ಭಾಷಣ|
ಬೆಂಗಳೂರು(ಏ.25): ವಿದ್ಯುತ್ ಸೇರಿದಂತೆ ಎಲ್ಲಾ ಶಕ್ತಿ ಸಂಪನ್ಮೂಲಗಳ ಸಮಾನ ಹಂಚಿಕೆಗಾಗಿ ಟೊಂಕ ಕಟ್ಟಿ ನಿಂತಿರುವ ಸೆಲ್ಕೋ ಸಂಸ್ಥೆ, ಎರಡು ದಿನಗಳ ‘ನವೀಕರಿಸಬಹುದಾದ ಶಕ್ತಿ ಸಂಪನ್ಮೂಲ ಮತ್ತು ಜೀವನೋಪಾಯ’ ವಿಷಯದ ಮೇಲೆ ಸಮಾವೇಶವನ್ನು ಹಮ್ಮಿಕೊಂಡಿದೆ.
ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್'ಮೆಂಟ್(ಐಐಎಂ) ನಲ್ಲಿ ಏ.26 ಮತ್ತು ಏ.27ರಂದು ಎರಡು ದಿನಗಳ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಾಗಾರದಲ್ಲಿ ಶಕ್ತಿ ಸಂಪನ್ಮೂಲಗಳ ಕ್ರೂಢೀಕರಣಕ್ಕಾಗಿ ಶ್ರಮಿಸುತ್ತಿರುವ 30ಕ್ಕೂ ಅಧಿಕ ಖಾಸಗಿ ಸಂಸ್ಥೆಗಳು ಭಾಗವಹಿಸಲಿವೆ ಎಂದು ಸೆಲ್ಕೋ ಸಂಸ್ಥೆ ತಿಳಿಸಿದೆ.
ಸಮಾವೇಶವನ್ನು ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಎಲ್. ಕೆ. ಅತಿಕ್ ಉದ್ಘಾಟಿಸಲಿದ್ದಾರೆ. ಇನ್ನು ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್ ಯೋಜನೆಯ ಮುಖ್ಯಸ್ಥ ಆರ್.ರಮಣನ್ ಉದ್ಘಾಟನಾ ಭಾಷಣ ಮಾಡಲಿದ್ದಾರೆ.
ಬಡತನ ಮತ್ತು ಪರಿಸರ ಅಸಮತೋಲನ ಸದ್ಯ ಮಾನವ ಜಗತ್ತು ಎದುರಿಸುತ್ತಿರುವ ಎರಡು ಬಹುದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ಶಕ್ತಿ ಸಂಪನ್ಮೂಲಗಳ ಸರಿಯಾದ ಹಂಚಿಕೆಯೇ ಪರಿಹಾರವಾಗಬಲ್ಲದು ಎಂಬುದು ಸೆಲ್ಕೋ ಸಂಸ್ಥೆಯ ವಾದ.
ಭೌಗೋಳಿಕ ಅಸಮಾನತೆಯಿಂದಾಗಿ ಎದುರಾಗಿರುವ ಈ ಸಮಸ್ಯೆಗಳಿಗೆ, ಎಲ್ಲರಿಗೂ ನೈಸರ್ಗಿಕ ಮತ್ತು ಮಾನವ ನಿರ್ಮಿತ ಶಕ್ತಿ ಸಂಪನ್ಮೂಲ ದೊರಕುವಂತೆ ಮಾಡುವ ಮೂಲಕ ಪರಿಹಾರ ಕಂಡುಹಿಡಿಯಲು ಸೆಲ್ಕೋ ಸಂಸ್ಥೆ ಶ್ರಮಿಸುತ್ತಿದೆ.