Asianet Suvarna News Asianet Suvarna News

ಸೀಡಿ ಕೇಸ್ : ಯುವತಿ ಗೊತ್ತು - 100 ಕೋಟಿ ಕೊಟ್ರೆ ಆರೋಪ ಒಪ್ಪಿಕೊಳ್ತೀನಿ ಎಂದ ಶಂಕಿತ ಕಿಂಗ್‌ಪಿನ್

ಶಂಕಿತ ಸೀಡಿ ಕೇಸ್ ಕಿಂಗ್‌ ಪಿನ್  ನರೇಶ್ ಗೌಡ ವಿಡಿಯೋ ರಿಲೀಸ್ ಮಾಡಿದ್ದು  ಯುವತಿ ಜೊತೆ ಸಂಪರ್ಕ ಇದ್ದಿದ್ದು ನಿಜ ಎಂದು ಒಪ್ಪಿಕೊಂಡಿದ್ದು, ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದು ಹೇಳಿದ್ದಾನೆ. 

Suspected CD Case Kingpin Naresh Gowda Releases video snr
Author
Bengaluru, First Published Mar 19, 2021, 7:45 AM IST

ಬೆಂಗಳೂರು (ಮಾ.19):  ‘ಮಾಜಿ ಸಚಿವರ ರಾಸಲೀಲೆ ವಿಡಿಯೋ ಬಹಿರಂಗದಲ್ಲಿ ನನ್ನ ಪಾತ್ರ ಎಳ್ಳಷ್ಟೂಇಲ್ಲ. ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ. ಆ ಯುವತಿ ನನ್ನ ಸಂಪರ್ಕದಲ್ಲಿ ಇದ್ದದ್ದು ನಿಜ. ನನ್ನ ಮೇಲೆ ಆರೋಪಿಸಿದಂತೆ 100 ಕೋಟಿ ನೀಡಿದರೆ ಸಿ.ಡಿ. ಬಹಿರಂಗ ಆರೋಪವನ್ನು ನಾನೇ ಒಪ್ಪಿಕೊಂಡುಬಿಡುತ್ತೇನೆ..!’

ಇವು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರದ್ದು ಎನ್ನಲಾದ ಸಿ.ಡಿ. ಸ್ಫೋಟದ ಆರೋಪ ಹೊತ್ತು ತಲೆಮರೆಸಿಕೊಂಡಿರುವ ‘ಮಾಸ್ಟರ್‌ ಮೈಂಡ್‌’ ಎನ್ನಲಾದ ಕನ್ನಡದ ಖಾಸಗಿ ಸುದ್ದಿವಾಹಿನಿಯೊಂದರ ಸ್ಟಿಂಗ್‌ ಆಪರೇಷನ್‌ ವರದಿಗಾರ ನರೇಶ್‌ಗೌಡ ಗುರುವಾರ ಬಿಡುಗಡೆ ಮಾಡಿರುವ ವಿಡಿಯೋ ಹೇಳಿಕೆ.

ಅಲ್ಲದೆ, ಮುಂದಿನ ಐದರಿಂದ ಎಂಟು ದಿನಗಳಲ್ಲಿ ತನಿಖಾಧಿಕಾರಿ ಮುಂದೆ ಹಾಜರಾಗಿ ವಿಚಾರಣೆಯನ್ನು ಎದುರಿಸುತ್ತೇನೆ ಎಂದೂ ತಿಳಿಸಿದ್ದಾನೆ.

ರಾಸಲೀಲೆ ಸಿಡಿ ಕೇಸ್ : ಮತ್ತೊಂದು ವಿಡಿಯೋ ರಿಲೀಸ್ .

ಸಿ.ಡಿ. ಬೆಳಕಿಗೆ ಬಂದ ನಂತರ ಭೂಗತನಾಗಿರುವ ನರೇಶ್‌ ಗೌಡನಿಗೆ ರಾಜ್ಯ-ಹೊರರಾಜ್ಯಗಳಲ್ಲಿ ಎಸ್‌ಐಟಿ ಪೊಲೀಸರು ಹುಡುಕಾಟ ನಡೆಸಿರುವ ಮಧ್ಯೆ ದಿಢೀರನೇ ಸಾಮಾಜಿಕ ಜಾಲತಾಣದ ಮೂಲಕ ಪ್ರತ್ಯಕ್ಷನಾಗಿ ಎಂಟು ನಿಮಿಷಗಳ ವಿಡಿಯೋ ಹೇಳಿಕೆ ಬಿಡುಗಡೆಗೊಳಿಸಿದ್ದಾನೆ.

ತನ್ನ ಮೇಲೆ ಹೊರಿಸಿರುವ ಆರೋಪಗಳನ್ನು ಬಲವಾಗಿ ನಿರಾಕರಿಸಿರುವ ನರೇಶ್‌ ಗೌಡ, ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರಿಂದ ಐದು ಕೋಟಿ ರು. ಪಡೆದಿಲ್ಲ. ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಅನ್ಯಾಯಕ್ಕೊಳಗಾಗಿದ್ದ ಯುವತಿ ನ್ಯಾಯ ಕೊಡಿಸುವಂತೆ ನನ್ನ ಬಳಿಗೆ ಬಂದಿದ್ದಳು ಎಂದು ಸ್ಪಷ್ಟಪಡಿಸಿದ್ದಾನೆ.

ನರೇಶ್‌ಗೌಡ ಹೇಳಿದ್ದೇನು?

ರಮೇಶ್‌ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣದಲ್ಲಿ ನನ್ನ ಹೆಸರು ತಳಕು ಹಾಕಿಕೊಂಡಿದೆ. ನನಗೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಇಡೀ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಹುನ್ನಾರ ನಡೆದಿದೆ. ಈಗ ತನಿಖಾಧಿಕಾರಿ ಮುಂದೆ ಬಂದರೆ ನನಗೆ ಏನಾಗುತ್ತದೆ ಎಂಬುದು ಗೊತ್ತಿದೆ. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಆ ಯುವತಿ ಜತೆ ಸಂಪರ್ಕದಲ್ಲಿ ಇದ್ದದ್ದು ಸತ್ಯ. ನನ್ನ ಸ್ನೇಹಿತನಿಂದ ನಂಬರ್‌ ಪಡೆದು ಆಕೆಯೇ ನನಗೆ ಕರೆ ಮಾಡಿದ್ದಳು. ‘ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ನನಗೆ ಮೋಸ ಮಾಡಿದ್ದಾರೆ. ನನಗೆ ನ್ಯಾಯ ಕೊಡಿಸಿ’ ಅಂತ ಆ ಯುವತಿ ಕೇಳಿಕೊಂಡಿದ್ದಳು. ನಿಮ್ಮ ಆರೋಪಕ್ಕೆ ಪುರಾವೆಯಾಗಿ ಯಾವುದಾದರೂ ಆಡಿಯೋ, ವಿಡಿಯೋ ಕ್ಲಿಪಿಂಗ್‌ ಇದ್ದರೆ ತೆಗೆದುಕೊಂಡು ಬನ್ನಿ ಎಂದು. ಆನಂತರ ಯುವತಿ ಜತೆ 15ರಿಂದ 20 ಬಾರಿ ಮಾತನಾಡಿದ್ದೇನೆ. ನನ್ನ ಮಗಳ ನಾಮಕರಣಕ್ಕೂ ಆಕೆ ಬಂದಿದ್ದಳು. ಆದರೆ, ನನಗೆ ಯಾವುದೇ ದಾಖಲೆ ಅಥವಾ ವಿಡಿಯೋಗಳನ್ನು ಆಕೆ ನೀಡಿರಲಿಲ್ಲ. ಕಾರ್ಯದೊತ್ತಡದಲ್ಲಿ ನಾನು ಆ ವಿಚಾರ ಮರೆತುಬಿಟ್ಟಿದ್ದೆ. ಆದರೆ, ರಾಸಲೀಲೆ ವಿಡಿಯೋ ಬಿಡುಗಡೆಯಾಗಿ ನನ್ನ ಮೊಬೈಲ್‌ಗೂ ಬಂದ ಮೇಲೆಯೇ ಆ ವಿಚಾರ ನನಗೆ ಗೊತ್ತಾಯಿತು. ಸಿ.ಡಿ. ಬಹಿರಂಗದಲ್ಲಿ ನನ್ನ ಪಾತ್ರ ಎಳ್ಳಷ್ಟೂಇಲ್ಲ ಎಂದು ನರೇಶ್‌ ಗೌಡ ಹೇಳಿದ್ದಾನೆ.

ಮೂರು ವರ್ಷಗಳ ಹಿಂದೆ ತೆಗೆದುಕೊಂಡಿರುವ ಬ್ಯಾಂಕ್‌ ಸಾಲಕ್ಕೆ ಪ್ರತಿ ತಿಂಗಳು 15 ಸಾವಿರ ರು. ಇಎಂಐ ಕಟ್ಟುತ್ತಿದ್ದೇನೆ. ತಿಂಗಳ ಸಂಬಳ ತಡವಾದರೆ ಚೆಕ್‌ ಬೌನ್ಸ್‌ ಆಗುತ್ತಿದ್ದವು. ಕ್ರೆಡಿಟ್‌ ಕಾರ್ಡ್‌ಗಳಿಗೆ ದುಡ್ಡು ಕಟ್ಟೋದಕ್ಕೆ ಹಣ ಇಲ್ಲದೆ ಬಡ್ಡಿ ಕಟ್ಟಿದ್ದೇನೆ. ನನ್ನ ಹುಟ್ಟೂರಿನಲ್ಲಿರುವ ಮನೆ ಮಳೆ ಬಂದರೆ ಸೋರುತ್ತದೆ. ನನ್ನ ವಿರುದ್ಧ ಕೋಟಿ ಕೋಟಿ ರು. ಹಣ ತೆಗೆದುಕೊಂಡಿರುವ ಆರೋಪ ಬಂದಿದೆ. ನನಗೆ 100 ಕೋಟಿ ರು. ಕೊಟ್ಟರೆ ಈಗ ನನ್ನ ಮೇಲೆ ಹೊರಿಸಿರುವ ಆರೋಪಗಳನ್ನು ಒಪ್ಪಿಕೊಂಡುಬಿಡುತ್ತೇನೆ ಎಂದು ಸವಾಲು ಹಾಕಿದ್ದಾನೆ.

ವೃತ್ತಿ ಬದುಕಿನಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ. ನಾನು ರಮೇಶ್‌ ಜಾರಕಿಹೊಳಿ ಅವರಿಂದ ಐದು ಕೋಟಿ ರು. ಪಡೆದಿರುವುದನ್ನು ಸಾಬೀತುಪಡಿಸಿದರೆ ಯಾವುದೇ ಶಿಕ್ಷೆ ವಿಧಿಸಿದರೂ ಅನುಭವಿಸಲು ಸಿದ್ಧನಿದ್ದೇನೆ. ಮುಂದಿನ ಐದರಿಂದ ಎಂಟು ದಿನಗಳಲ್ಲಿ ತನಿಖಾಧಿಕಾರಿ ಮುಂದೆ ಬಂದು ವಿಚಾರಣೆ ಎದುರಿಸುತ್ತೇನೆ. ಈ ಪ್ರಕರಣದಲ್ಲಿ ಅನ್ಯಾಯಕ್ಕೊಳಗಾದ, ಶೋಷಿತಳಾದ ಯುವತಿಯನ್ನು ಸಂತ್ರಸ್ತೆಯಂತೆ ನೋಡುವ ಬದಲು ರಮೇಶ್‌ ಜಾರಕಿಹೊಳಿ ಅವರನ್ನು ಸಂತ್ರಸ್ತನಂತೆ ತೋರಿಸಲಾಗುತ್ತದೆ ಎಂದು ನರೇಶಗೌಡ ಕಿಡಿಕಾರಿದ್ದಾನೆ.

ನರೇಶ್‌ ಹೇಳಿದ್ದು...

1. ರಮೇಶ್‌ ಜಾರಕಿಹೊಳಿ ಕೇಸಲ್ಲಿ ನನ್ನ ಹೆಸರು ಕೇಳಿ ನಗಬೇಕೇ, ಅಳಬೇಕೋ ಗೊತ್ತಾಗ್ತಿಲ್ಲ

2. ಪ್ರಕರಣಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ. ನನ್ನನ್ನು ಸಿಲುಕಿಸುವ ಯತ್ನ ನಡೆದಿದೆ

3. ಸ್ನೇಹಿತನಿಂದ ನಂಬರ್‌ ಪಡೆದು ಯುವತಿ ಕರೆ ಮಾಡಿದ್ದಳು. 15-20 ಸಲ ಮಾತಾಡಿದ್ದೇವೆ

4. ರಮೇಶ್‌ ಜಾರಕಿಹೊಳಿ ಮೋಸ ಮಾಡಿದ್ದಾರೆ. ನ್ಯಾಯ ಕೊಡಿಸಿ ಅಂದಳು. ದಾಖಲೆ ಕೇಳಿದೆ

5. ಆಕೆ ನೀಡಿರಲಿಲ್ಲ. ಕೆಲಸದೊತ್ತಡ, ಮಗಳ ನಾಮಕರಣ ಬ್ಯುಸಿಯಲ್ಲಿ ಆ ವಿಚಾರ ಮರೆತಿದ್ದೆ

6. ನನ್ನ ಮಗಳ ನಾಮಕರಣಕ್ಕೆ ಆಕೆಯೇ ಕೇಳಿ ಬಂದಿದ್ದಳು. ಎಲ್ಲ ಪಕ್ಷದ ಗಣ್ಯರು ಬಂದಿದ್ದರು

7. ರಾಸಲೀಲೆ ವಿಡಿಯೋ ಬಿಡುಗಡೆ ಆಗಿ ನನ್ನ ಮೊಬೈಲ್‌ಗೂ ಬಂದ ಮೇಲೆ ವಿಚಾರ ತಿಳೀತು

8. ಸೀಡಿ ಬಹಿರಂಗದಲ್ಲಿ ನನ್ನ ಪಾತ್ರ ಎಳ್ಳಷ್ಟೂಇಲ್ಲ. ಹಣ ಪಡೆದದ್ದು ಸಾಬೀತಾದರೆ ಶಿಕ್ಷೆಗೆ ಸಿದ್ಧ

Follow Us:
Download App:
  • android
  • ios