Asianet Suvarna News Asianet Suvarna News

ಪಿಯುಸಿ ಫೇಲ್ ಆದ ಹುಡುಗ : ಕೃಷಿಯಲ್ಲಿ ಪ್ರಯೋಗಗಳ ಮೂಲಕಲೇ ಯಶಸ್ಸು ಕಂಡ

ಯುವಕ ಸುನಿಲ್ ರೆಡ್ಡಿ ಸಾವಯವ ಶುಂಠಿ ಬೆಳೆ ಮೂಲಕ ಸಾಧನೆ ಮಾಡಿದ್ದಾರೆ. ಬೇರೆಲ್ಲ ಬೆಳೆಗಳನ್ನೂ ಸಾವಯವ ಮೂಲಕ ಬೆಳೆಯೋದು ಅಂಥಾ ಸವಾಲಲ್ಲ. ಆದರೆ ಶುಂಠಿಯಂಥಾ ಬೆಳೆಗೆ ರಸಗೊಬ್ಬರ, ಕ್ರಿಮಿನಾಶಕವಿಲ್ಲದೇ ಬೆಳೆಸೋದು ಅಷ್ಟು ಸುಲಭವಲ್ಲ. 

Sunil Reddy  Got Raita Ratna Suvarna Award 2020  snr
Author
Bengaluru, First Published Feb 12, 2021, 12:16 PM IST

ರೈತ ರತ್ನ ಸುನಿಲ್ ರೆಡ್ಡಿ

ವಿಭಾಗ: ಬೆಳೆವೈದ್ಯ
    
ಊರು, ಜಿಲ್ಲೆ: ಚಿಟಗುಪ್ಪ, ಬೀದರ್ ಜಿಲ್ಲೆ

 ಬೀದರ್ (ಫೆ.12): ಪಿಯುಸಿ ಫೇಲ್ ಆದ ಹುಡುಗ ತನ್ನ ಆಸಕ್ತಿಯ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಹೊಸ ಪ್ರಯೋಗಗಳ ಮೂಲಕಲೇ ಯಶಸ್ಸು ಸಾಧಿಸಿದ ಕತೆಯಿದು. ಯುವಕ ಸುನಿಲ್ ರೆಡ್ಡಿ ಸಾವಯವ ಶುಂಠಿ ಬೆಳೆ ಮೂಲಕ ಸಾಧನೆ ಮಾಡಿದ್ದಾರೆ. ಬೇರೆಲ್ಲ ಬೆಳೆಗಳನ್ನೂ ಸಾವಯವ ಮೂಲಕ ಬೆಳೆಯೋದು ಅಂಥಾ ಸವಾಲಲ್ಲ. ಆದರೆ ಶುಂಠಿಯಂಥಾ ಬೆಳೆಗೆ ರಸಗೊಬ್ಬರ, ಕ್ರಿಮಿನಾಶಕವಿಲ್ಲದೇ ಬೆಳೆಸೋದು ಅಷ್ಟು ಸುಲಭವಲ್ಲ. 

ಇವರಿಗಿರುವುದು ಒಟ್ಟು 8 ಎಕರೆ ಜಮೀನು. ಸ್ವಲ್ಪ ಭಾಗದಲ್ಲಿ ಟೊಮ್ಯಾಟೋ, ಹೂ ಕೋಸು, ಮೆಣಸಿನ ಕಾಯಿ, ಹಾಗಲ, ಸೌತೆಕಾಯಿಯಂಥಾ ತರಕಾರಿ ಬೆಳೆಯುತ್ತಾರೆ. ಜೊತೆಗೆ ೧ ಎಕರೆ ಪ್ರದೇಶದಲ್ಲಿ ಕಾಡಿನ ವಾತಾವರಣ ನಿರ್ಮಿಸಿದ್ದು ಶ್ರೀಗಂಧ ಹಾಗೂ ಸೀಬೆಕಾಯಿ ಗಿಡಗಳಿವೆ. ಎಂಟು ಗುಂಟೆ ಭೂಮಿಯಲ್ಲಿ ಶುಂಠಿ ಹಾಕಿದ್ದಾರೆ. ಶುಂಠಿಗೆ ಎಲೆಚುಕ್ಕಿ, ಬೂದಿ ರೋಗ, ಗಡ್ಡೆ ಕೊಳೆ ರೋಗಗಳು ಬಂದು ಅರ್ಧಕ್ಕರ್ಧ ಬೆಳೆ ನಾಶವಾಗೋದು ಮಾಮೂಲಿ. ಆದರೆ ಸುನಿಲ್ ಸಾವಯವ ರೀತಿಯಿಂದ ಬೆಳೆದ ಶುಂಠಿಯಲ್ಲಿ ಒಂದು ಗಡ್ಡೆಯೂ ಹಾಳಾಗಿಲ್ಲ, ರೋಗಕ್ಕೆ ತುತ್ತಾಗಿಲ್ಲ. ಹಟ್ಟಿ ಗೊಬ್ಬರ ಹಾಕುವ ಜೊತೆಗೆ ಅನೇಕ ಬಗೆಯ ಕಷಾಯಗಳನ್ನು ಶುಂಠಿ ಬೆಳೆಗೆ ಸಿಂಪಡಿಸುತ್ತಾರೆ. ಅವುಗಳಲ್ಲಿ ಬೇವಿನ ಬೀಜದ ಕಷಾಯ, ಬಿಲ್ವಪತ್ರೆ, ಅಲೊವೆರ ಕಷಾಯಗಳು ಬಲು ಮುಖ್ಯ. ಕೂಡುಕುಟುಂಬದಲ್ಲಿ ಎಲ್ಲರ ಸಹಕಾರದೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸುನಿಲ್ ಮುಂದಿನ ದಿನಗಳಲ್ಲಿ ಎಲ್ಲ ಬೆಳೆಗಳನ್ನೂ ಸಾವಯವದ ಮೂಲಕವೇ ಬೆಳೆಯುವ ಕನಸು ಕಾಣುತ್ತಿದ್ದಾರೆ. 

ಪಿಯುಸಿ ಫೇಲ್ ಆದ ಹುಡುಗ : ಕೃಷಿಯಲ್ಲಿ ಪ್ರಯೋಗಗಳ ಮೂಲಕಲೇ ಯಶಸ್ಸು ಕಂಡ ...

ಸಾಧನೆಯ ವಿವರ: ಶುಂಠಿ ಬೆಳೆಯನ್ನು ಸಂಪೂರ್ಣ ಸಾವಯವ ರೀತಿಯಲ್ಲಿ ಬೆಳೆದಿದ್ದಾರೆ. ಈ ಬೆಳೆಯನ್ನು ಕ್ರಿಮಿಗಳಿಂದ ರಕ್ಷಿಸಲು ಬೇವಿನ ಬೀಜದ ಕಷಾಯ, ಬಿಲ್ವಪತ್ರೆ, ಅಲೊವೆರ ದ್ರಾವಣ ಸಿದ್ಧಪಡಿಸಿ ಬೆಳೆಗಳಿಗೆ ಹಾಯಿಸಿದ್ದಾರೆ. ಇದರಿಂದ ಶುಂಠಿ ಬೆಳೆ ಸಂಪೂರ್ಣ ರೋಗ ಮುಕ್ತವಾದದ್ದು ಸಾಧನೆ. ಸುನಿಲ್ ಈ ಮೂಲಕ ಶುಂಠಿಯಂಥಾ ಬೆಳೆಯನ್ನೂ ಸಾವಯವ ಪದ್ಧತಿ ಮೂಲಕ ಬೆಳೆಯಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ. ಇವರ ಕೃಷಿಯಿಂದ ಇತರೇ ಕೃಷಿಕರೂ ಸ್ಫೂರ್ತಿ ಪಡೆದಿದ್ದಾರೆ. ಇದರ ಜೊತೆಗೆ ತಮ್ಮ ಪೂರ್ವಜರಿಂದ ಬಂದಿರುವ ರತ್ನ ಸಾಗರ ಎಂಬ ಬತ್ತವನ್ನು ಪೋಷಿಸಿಕೊಂಡು ತಳಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಅತೀದೊಡ್ಡ ಗಾತ್ರ ಹೀರೇಕಾಯಿ ಬೆಳೆದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಗೌರವಕ್ಕೆ ಪಾತ್ರವಾಗಿದ್ದರು. ಇವರ ಜಮೀನಿನಲ್ಲೇ ಕ್ಷೇತ್ರೋತ್ಸವದಂಥಾ ಕೃಷಿ ಸಂಬಂಧಿತ ಕಾರ್ಯಕ್ರಮಗಳು ಜರುಗಿದ್ದವು. 

ರೈತ ರತ್ನ ಪ್ರಶಸ್ತಿ ಬಗೆಗಿನ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗಮನಾರ್ಹ ಅಂಶ:  ಈವರೆಗೆ ಅತ್ಯಧಿಕ ರಾಸಾಯನಿಕ ಬಳಸಿ ಬೆಳೆಯುತ್ತಿದ್ದ ಶುಂಠಿಯನ್ನು ಸಂಪೂರ್ಣ ಸಾವಯವ ಕೃಷಿಯಾಗಿ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಶುಂಠಿ ಬೆಳೆಯಿಂದ ನೆಲ ಬರಡಾಗುತ್ತದೆ ಎಂಬ ಮಾತಿಗೂ ಅತಿಯಾದ ರಾಸಾಯನಿಕ ಬಳಕೆ ಕಾರಣ. ಆದರೆ ಈಗ ಶುಂಠಿಯಂಥಾ ಬೆಳೆಯನ್ನು ಸಾವಯವದಲ್ಲಿ ಯಾವ ರೋಗವೂ ಹತ್ತಿರ ಸುಳಿಯದಂತೆ ಬೆಳೆಸಬಹುದು, ಸಾವಯವದಲ್ಲಿ ಶುಂಠಿ ಬೆಳೆ ಚೆನ್ನಾಗಿ ಬರುತ್ತದೆ, ನೆಲವನ್ನು ಹೆಚ್ಚು ಘಾಸಿ ಮಾಡದೇ, ಭೂಮಿಯ ಸತ್ವ ಕಡಿಮೆ ಮಾಡದೇ ಶುಂಠಿ ಬೆಳೆಯಬಹುದು ಎಂದು ಸಾಧಿಸಿ ತೋರಿಸಿ ಇತರ ಕೃಷಿಕರಿಗೂ ಮಾದರಿಯಾಗಿದ್ದಾರೆ ಸುನಿಲ್

Follow Us:
Download App:
  • android
  • ios