ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರವು ಪ್ರತಿ ಟನ್ ಕಬ್ಬಿಗೆ ₹3300 ದರ ನಿಗದಿಪಡಿಸಿದ್ದರೂ, ಸಕ್ಕರೆ ಕಾರ್ಖಾನೆಗಳು ಈ ದರವನ್ನು ನೀಡಲು ನಿರಾಕರಿಸುತ್ತಿವೆ. ಅಫಜಲ್ಪುರದ ಕೆಪಿಆರ್ ಕಾರ್ಖಾನೆಯು ಈ ಹಿಂದೆ ಒಪ್ಪಿದ್ದ ದರದಿಂದ ಹಿಂದೆ ಸರಿದು, ಕಡಿಮೆ ದರ ಘೋಷಿಸಿರುವುದು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಲಬುರಗಿ (ನ.18): ಜಿಲ್ಲೆಯ ಕಬ್ಬು ರೈತರಿಗೆ ಸರ್ಕಾರ ನಿಗದಿ ಮಾಡಿದ ಕಬ್ಬಿನ ದರ ಕೈಗೆಟುಕದೆ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.
ಪ್ರತಿ ಟನ್ ಕಬ್ಬಿಗೆ ₹3300 ನೀಡಲು ಸಕ್ಕರೆ ಕಾರ್ಖಾನೆಗಳು ಒಪ್ಪುತ್ತಿಲ್ಲ!
ಪ್ರತಿ ಟನ್ ಕಬ್ಬಿಗೆ ₹3300 ದರದಂತೆ ಕಬ್ಬು ಖರೀದಿಸಿರೆಂದು ಕಾರ್ಖಾನೆಗಳಿಗೆ ಸರ್ಕಾರವೇ ಸೂಚಿಸಿದ್ದರೂ ಪ್ರಭಾವಿ ಸಚಿವ ಪ್ರಿಯಾಂಕ್ ಖರ್ಗೆ ಉಸ್ತುವಾರಿಯ ಕಲಬುರಗಿಯಲ್ಲೇ ಜಿಲ್ಲಾಡಳಿತ, ಜನನಾಯಕರು ಸಭೆ ನಡೆಸಿ ಟನ್ ಕಬ್ಬಿಗೆ ಸರ್ಕಾರದ ದರ ₹3300 ನೀಡಲು ಇಲ್ಲಿರುವ ಕಲಬುರಗಿ ಹಾಗೂ ಯಾದಗಿರಿಯ 6 ಸಕ್ಕರೆ ಕಾರ್ಖಾನೆಗಳವರು ಒಪ್ಪುತ್ತಿಲ್ಲ.
ಉಲ್ಟಾ ಹೊಡೆದ ಕಾರ್ಖಾನೆ, ರೈತರು ಆಕ್ರೋಶ:
ಕಬ್ಬಿಗೆ ದರ ನಿಗದಿಪಡಿಸೋ ವಿಚಾರದಲ್ಲಿ ರೈತರಿಗೆ ಟನ್ ಕಬ್ಬಿಗೆ ₹3160 ನೀಡುವುದಾಗಿ ಮುಂಚೆ ಹೇಳಿದ್ದ ಅಫಜಲ್ಪುರ ತಾಲೂಕಿನ ಚಿಣಮಗೇರಿ ಬಳಿಯ ಕೆಪಿಆರ್ ಕಾರ್ಖಾನೆ ಇದೀಗ ತಾನೂ ಈ ದರ ನೀಡಲಾಗದು. ಟನ್ಗೆ ₹3000 ನೀಡುವುದಾಗಿ ಹೇಳಿದೆ. ರೈತರು ಅಫಜಲ್ಪುರದಲ್ಲಿ 7 ದಿನ ನಡೆಸಿದ ಹೋರಾಟದ ಫಲವಾಗಿ ₹3160 ನಿಗದಿಪಡಿಸಿದ್ದ ಕಾರ್ಖಾನೆ ಇದೀಗ ತನ್ನ ನಿಲುವಿಗೆ ಉಲ್ಟಾ ಹೊಡೆದಿರೋದು ಇಲ್ಲಿನ ರೈತರನ್ನು ಕೆರಳಿಸಿದೆ.'
