ಬೆಂಗಳೂರಿನಲ್ಲಿ ಡಾ.ವಿಷ್ಣುವರ್ಧನ್‌ ಅವರ ಪೋಸ್ಟರ್‌ ಮುಂದೆ ರೀಲ್ಸ್‌ ಮಾಡುವಾಗ ಅಪಹಾಸ್ಯ ಮಾಡಿದ್ದ ನಾಲ್ವರು ಪಿಯುಸಿ ವಿದ್ಯಾರ್ಥಿಗಳ ವಿಡಿಯೋ ವೈರಲ್ ಆಗಿತ್ತು. ವಿಷ್ಣು ಅಭಿಮಾನಿಗಳ ದೂರಿನ ಮೇರೆಗೆ, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಜೆ.ಪಿ. ನಗರ ಪೊಲೀಸ್ ಠಾಣೆಯಲ್ಲಿ ಕ್ಷಮೆ ಕೋರಿದ್ದರಿಂದ ವಿವಾದ ಅಂತ್ಯ

ಬೆಂಗಳೂರು (ಫೆ.15): ಕನ್ನಡ ಚಿತ್ರ ರಂಗದ ಮೇರು ನಟ ದಿ.ಡಾ.ವಿಷ್ಣುವರ್ಧನ್‌ ಅವರ ಪೋಸ್ಟ್ ಮುಂದೆ ‘ರೀಲ್ಸ್‌’ ಹುಚ್ಚಿಗೆ ಅಪಹಾಸ್ಯ ಮಾಡಿದ್ದ ತಪ್ಪಿಗೆ ಪೊಲೀಸರ ಮುಂದೆ ಖಾಸಗಿ ಕಾಲೇಜಿನ ನಾಲ್ವರು ಪಿಯುಸಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕ್ಷಮೆ ಕೋರುವ ಮೂಲಕ ವಿವಾದ ಪರ್ಯಾವಸಗೊಂಡ ಘಟನೆ ಶನಿವಾರ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೆ.ಪಿ. ನಗರ ಹತ್ತಿರದ ಸೆಂಟ್ರಲ್‌ ಮಾಲ್ ಬಳಿಕ ಹಾಕಲಾಗಿದ್ದ ವಿಷ್ಣುವರ್ಧನ್‌ ಅವರ ಪೋಸ್ಟರ್ ಮುಂದೆ ನಿಂತು ಸಿಹಿ ತಿನ್ನಿಸುವಂತೆ ನಟಿಸಿ ವಿದ್ಯಾರ್ಥಿಗಳು ಅಪಹಾಸ್ಯ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ವೈರಲ್ ಆಗಿತ್ತು. ಈ ವಿಡಿಯೋ ವಿರುದ್ಧ ಕೆರಳಿದ ವಿಷ್ಣುವರ್ಧನ್ ಅಭಿಮಾನಿಗಳು, ಕಿಡಿಗೇಡಿಗಳ ಪತ್ತೆಗೆ ಜೆ.ಪಿ.ನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ವಿಡಿಯೋ ಆಧರಿಸಿ ತನಿಖೆಗಿಳಿದ ಪೊಲೀಸರು, ಅದರಲ್ಲಿನ ದೃಶ್ಯಾವಳಿಯಲ್ಲಿದ್ದ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಅಂತೆಯೇ ಶನಿವಾರ ಜೆ.ಪಿ. ನಗರ ಠಾಣೆಗೆ ಪೋಷಕರ ಜತೆ ವಿದ್ಯಾರ್ಥಿಗಳು ಹಾಜರಾಗಿದ್ದರು. ಕೊನೆಗೆ ತಾವು ತಿಳಿಯದೆ ತಪ್ಪು ಮಾಡಿದ್ದೇವೆ. ನಮಗೂ ಕನ್ನಡ ಭಾಷೆ ಹಾಗೂ ಕಲಾವಿದರ ಮೇಲೆ ಅಭಿಮಾನವಿದೆ. ತಮ್ಮ ಮಕ್ಕಳನ್ನು ಕ್ಷಮಿಸುವಂತೆ ಪೋಷಕರು ಮನವಿ ಮಾಡಿದರು. ಈ ಕೋರಿಕೆಗೆ ಪೊಲೀಸರು ಹಾಗೂ ವಿಷ್ಣುವರ್ಧನ್ ಅಭಿಮಾನಿಗಳು ಸಮ್ಮತಿಸಿದ್ದಾರೆ. ಕೊನೆಗೆ ಈ ರೀತಿ ತಪ್ಪು ಮಾಡುವುದಿಲ್ಲ ಎಂದು ಕ್ಷಮಾಪಣೆ ಬರೆಸಿಕೊಂಡು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಪೊಲೀಸರು ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

YouTube video player