ಸುಳ್ಳು ಸುದ್ದಿಗಳು ಸಮಾಜಕ್ಕೆ ಅಪಾಯಕಾರಿ. ಹಾಗಾಗಿ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಸದ್ಯದಲ್ಲೇ ಹೊಸ ಕಾನೂನು ಜಾರಿಗೆ ತರುವ ಸಂಬಂಧ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್‌ 

ತುಮಕೂರು(ಜು.29): ಸುಳ್ಳು ಸುದ್ದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಸದ್ಯದಲ್ಲೇ ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆ ಕಾನೂನು ತರುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

Add Asianetnews Kannada as a Preferred SourcegooglePreferred

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸುಳ್ಳು ಸುದ್ದಿಗಳು ಸಮಾಜಕ್ಕೆ ಅಪಾಯಕಾರಿ. ಹಾಗಾಗಿ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಸದ್ಯದಲ್ಲೇ ಹೊಸ ಕಾನೂನು ಜಾರಿಗೆ ತರುವ ಸಂಬಂಧ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದರು.

ಸೈಬರ್‌ ಕ್ರೈಂ ಹಾಗೂ ಫೇಕ್‌ ನ್ಯೂಸ್‌ ತಡೆಗಟ್ಟಲು ರೂಪುರೇಷೆಗೆ ಸಿದ್ಧತೆ: ಸಚಿವ ಪರಮೇಶ್ವರ್‌

ಪತ್ರಿಕೋದ್ಯಮ ಕೇವಲ ಒಂದು ವೃತ್ತಿಯಲ್ಲ, ಸಮಾಜದ ದೊಡ್ಡ ಜವಾಬ್ದಾರಿ. ಬಂದೂಕಿಗಿಂತಲೂ ಪೆನ್ನು ಹೆಚ್ಚು ಪವರ್‌ಫುಲ್‌. ಇದನ್ನು ಪತ್ರಕರ್ತರು ಸಮಾಜದ ಒಳಿತಿಗೆ, ಶೋಷಿತರು, ಅಶಕ್ತರ ಬದುಕು ಉತ್ತಮಗೊಳ್ಳುವಂತೆ ಮಾಡಲು ಬಳಸಬೇಕು ಎಂದರು.

ಪರಾಮರ್ಶಿಸಿ ಕೇಸು ದಾಖಲಿಸಿ: ಇಂದು ನೈಜ ಪತ್ರಕರ್ತರಿಗಿಂತ ಬ್ಲ್ಯಾಕ್‌ಮೇಲ್‌ ಪತ್ರಕರ್ತರ ಸಂಖ್ಯೆ ಹೆಚ್ಚಳವಾಗಿದೆ. ನಕಲಿ ಸುದ್ದಿ, ಪೋಸ್ಟರ್‌ಗಳನ್ನು ಟ್ರೋಲ್‌ ಮಾಡುವವರ ವಿರುದ್ಧ ಕೇಸ್‌ ಹಾಕುವಂಥ ಕೆಲಸ ಸರ್ಕಾರ ಮಾಡಬೇಕು. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಪೊಲೀಸರು ಪತ್ರಕರ್ತರ ವಿರುದ್ಧ ದೂರು ಬಂದಾಗ ಒಮ್ಮೆ ಆ ದೂರು, ಘಟನೆ ಬಗ್ಗೆ ಪರಾಮರ್ಶಿಸಿ ನಂತರ ಕೇಸು ದಾಖಲಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಆ ಪತ್ರಕರ್ತ ಕೇಸುಗಳ ಮಧ್ಯೆ ಸಿಲುಕಿ ಆಚೆ ಬರಲು ಒದ್ದಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಗೃಹ ಸಚಿವ ಡಾ.ಪರಮೇಶ್ವರ್‌ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದರು.