ಕೇಂದ್ರ ಸಿಬ್ಬಂದಿ ನೇಮಕ ಆಯೋಗ ಪರೀಕ್ಷೆ ಸೇರಿ ತಾನು ನಡೆಸುವ ಕೆಲ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗುವುದು ಎನ್ನುವ ಕೇಂದ್ರ ಸರ್ಕಾರದ ಭರವಸೆ ಹುಸಿಯಾಗಿದೆ. ಎಸ್‌ಎಸ್‌ಸಿಯ 20 ಸಾವಿರ ಹುದ್ದೆಗಳ ನೇಮಕ ಪರೀಕ್ಷೆಯನ್ನು ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಮಾತ್ರ ನಡೆಸುವುದಾಗಿ ಹೇಳಿರುವುದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಕೇಂದ್ರ ಸರ್ಕಾರದ ವಿರುದ್ ಟೀಕೆಗಳ ಸುರಿಮಳೆಯಾಗುತ್ತಿದೆ. 

ಬೆಂಗಳೂರು (ಅ.8): ಕೇಂದ್ರ ಸಿಬ್ಬಂದಿ ನೇಮಕ ಆಯೋಗ 20 ಸಾವಿರ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದೆ. ಆದರೆ, ಪರೀಕ್ಷೆಗಳನ್ನು ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಮಾತ್ರವೇ ಮಾಡುವುದಾಗಿ ಹೇಳಿರುವುದು ವಿರೋಧಕ್ಕೆ ಕಾರಣವಾಗಿದೆ. ಈ ಕುರಿತಾಗಿ ಕನ್ನಡ ಪರ ಸಂಘಟನೆಗಳು ಹಾಗೂ ಕೆಲವು ಪಕ್ಷಗಳು ದೊಡ್ಡ ಮಟ್ಟದ ವಿರೋಧ ವ್ಯಕ್ತಪಡಿಸಿದೆ. ಸೋಶಿಯಲ್‌ ಮೀಡಿಯಾದಲ್ಲೂ ಈ ಕುರಿತಾಗಿ ಟೀಕೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. 20 ಸಾವಿರ ಹುದ್ದೆಗೆ ನೇಮಕಾತಿಗಾಗಿ ಪರೀಕ್ಷೆ ನಡೆಯುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಯಾವ ರಾಜ್ಯಕ್ಕೆ ಬೇಕಾದರೂ ಕಳಿಸಬಹುದು. ಆದರೆ, ಪರೀಕ್ಷೆಯಲ್ಲಿ ಕನ್ನಡ ಸೇರಿ ಯಾವುದೇ ಪ್ರಾದೇಶಿಕ ಭಾಷೆಗೆ ಅವಕಾಶವಿಲ್ಲ. ಹಿಂದಿ ಹೇರಿಕೆ, ಭಾಷಾ ತಾರತಮ್ಯಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಈ ವಿಚಾರದಲ್ಲಿ ನಮಗೆ ಎರಡು ಬೇಡಿಕೆಗಳಿವೆ. ಒಂದು ಕನ್ನಡದಲ್ಲಿಯೇ ಪರೀಕ್ಷೆ ನಡೆಯಬೇಕು ಅದರೊಂದಿಗೆ ಕರ್ನಾಟಕದ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು. ಇಂಥ ಬದಲಾವಣೆ ತಂದ ನಂತರವೇ ಆಯೋಗ ಪರೀಕ್ಷೆ ನಡೆಸಬೇಕು ಎಂದು ಹೇಳಿದ್ದಾರೆ.

ಇನ್ನು ಸೋಶಿಯಲ್‌ ಮೀಡಿಯಾದಲ್ಲೂ (Social Media) ಈ ಕುರಿತಾಗಿ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ಪರ ಹೋರಾಟಗಾರರು ಎಸ್‌ಎಸ್‌ಸಿ ಪರೀಕ್ಷೆಯನ್ನು (SSC Exam In Kannada) ಕನ್ನಡದಲ್ಲೂ ನಡೆಸುವಂತೆ ಸೋಶಿಯಲ್‌ ಮೀಡಿಯಾದಲ್ಲಿ ಒತ್ತಾಯ ಮಾಡಿದ್ದಾರೆ.

"ಎಸ್‌ಎಸ್‌ಸಿ ಪರೀಕ್ಷೆಗಳೂ ಕನ್ನಡದಲ್ಲೂ ನಡೆಯಬೇಕು, ಕೇಳುವುದು ನಮ್ಮ ಹಕ್ಕು ಕೊಡಬೇಕಾದದ್ದು ನಿಮ್ಮ ಕರ್ತವ್ಯ, ಮೋಸ ಮಾಡುವುದೇ ದೆಹಲಿ ಸರ್ಕಾರದ ನಡೆಯಾಗಬಾರದು. ಕನ್ನಡದಲ್ಲೂ ಎಸ್‌ಎಸ್‌ಸಿ ಪರೀಕ್ಷೆಗಳು ನಡೆಯಲಿ' ಎಂದು ಸಚಿನ್‌ ಗಂಗೇರ್‌ (@SachinGanger3) ವ್ಯಕ್ತಿ ಟ್ವೀಟ್‌ ಮಾಡಿದ್ದಾರೆ.

Scroll to load tweet…


ಯಾರೂ ಕೂಡ ಹಿಂದಿಯನ್ನು ವಿರೋಧಿಸುತ್ತಿಲ್ಲ. ಆದರೆ, ಹಿಂದಿಯ ಹೇರಿಕೆ ಮಾಡುತ್ತಿರುವುದಕ್ಕೆ ವಿರೋಧವಿದೆ. ಎಸ್‌ಎಸ್‌ಸಿ ಎನ್ನುವುದು ಯಾವ ರೀತಿಯ ಪರೀಕ್ಷೆ ಎಂದರೆ, ಇಡೀ ಭಾರತೀಯರು ಇದನ್ನು ಬರೆಯಬಹುದು. ಆರೆ, ಇದನ್ನು ಬರೀ ಇಂಗ್ಲೀಷ್‌ ಹಾಗೂ ಹಿಂದಿಯಲ್ಲಿ ಮಾಡುವುದೇಕೆ? ಕನ್ನಡ, ತೆಲುಗು, ಮಲಯಾಳಂನಲ್ಲಿ ಏಕಿಲ್ಲ? ಕನ್ನಡ, ತಮಿಳು ಹಾಗೂ ತೆಲುಗು ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಹೇಗೆ ಬರೆಯಲು ಸಾಧ್ಯ ಎಂದು ಶಕ್ರುದ್ದೀನ್‌ ಫಾರೂಕ್‌ (@Farookfar) ಎನ್ನುವ ವ್ಯಕ್ತಿ ಬರೆದಿದ್ದಾರೆ.

"ಓಕೆ ಈಗ ಎಲ್ಲರೂ ಎಸ್‌ಎಸ್‌ಸಿ ಮಾತ್ರವಲ್ಲ ಎಲ್ಲಾ ಪರೀಕ್ಷೆಯೂ ಕನ್ನಡದಲ್ಲಿರಬೇಕು ಎಂದು ಬೇಡಿಕೆ ಇಡೋಣ. ಐಬಿಪಿಎಸ್‌, ರೈಲ್ವೇ, ಯುಪಿಎಸ್‌ಸಿ, ಎಸ್‌ಎಸ್‌ಸಿ, ಆರ್‌ಪಿಎಫ್‌ ಎಲ್ಲಾ ಪರೀಕ್ಷೆ ಕೂಡ ಕನ್ನಡದಲ್ಲಿರಲಿ. ಮೂರು ಹೊತ್ತು, ಹಿಂದು, ಮುಸ್ಲಿಂ, ಟಿಪ್ಪು, ಶಿವಾಜಿ ಅನ್ನೋದ್‌ ಬಿಟ್ಟು ಕನ್ನಡದಲ್ಲಿ ಪರೀಕ್ಷೆ ನಡೆಸಿ ಎಂದು ಬೇಡಿಕೆ ಇಡೋಣ' ಎಂದು ರಾಜಶೇಖರ (@Rajashekhar08) ಎನ್ನುವ ವ್ಯಕ್ತಿ ಟ್ವೀಟ್‌ ಮಾಡಿದ್ದಾರೆ.

20000 ಕೇಂದ್ರ ನೌಕರಿ: ಕನ್ನಡ ನಿರ್ಲಕ್ಷ್ಯ ವಿವಾದ

ಎಸ್‌ಎಸ್‌ಸಿ ಆರಂಭವಾದ ದಿನದಿಂದಲೂ ತನ್ನ ಪರೀಕ್ಷೆಯನ್ನು ಹಿಂದಿ ಹಾಗೂ ಇಂಗ್ಲೀಷ್‌ ಬಿಟ್ಟು ಬೇರೆ ಭಾಷೆಗಳಲ್ಲಿ ಮಾಡಿಲ್ಲ. ದೇವೇಗೌಡ ಅವರು ಪ್ರಧಾನಿ ಆಗಿದ್ದಾಗ ಕುಮಾರಸ್ವಾಮಿ ಈ ವಿಚಾರ ಮಾತನಾಡಿರಲಿಲ್ಲ. 2004 ರಿಂದ 2014ರ ಅವಧಿಯ ವರೆಗೆ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಆಗಲೂ ಇದರ ಪ್ರಸ್ತಾಪವಾಗಿರಲಿಲ್ಲ. ಈಗ ಮಾತ್ರ ಹಿಂದಿ ಹೇರಿಕೆ ಎಂದು ಹೇಳುತ್ತಿದ್ದಾರೆ. ಈಗ ಮಾತ್ರ ಕುಮಾರಸ್ವಾಮಿ ಅವರಿಗೆ ಕನ್ನಡ ಭಾಷೆಯ ಪ್ರೀತಿ ವ್ಯಕ್ತವಾಗಿದ್ದೇಕೆ ಎಂದು ವಿನಯ್‌ ಕುಮಾರ್‌ (@IamV2V) ಎನ್ನುವ ವ್ಯಕ್ತಿ ಬರೆದಿದ್ದಾರೆ.

ಹಿಂದಿ ರಾಷ್ಟ್ರಭಾಷೆ ಮಾಡುವ ಕುರಿತು Rahul Gnadhiಗೆ ಪ್ರಶ್ನೆ: ರಾಹುಲ್‌ ಹೇಳಿದ್ದೇನು

ತ್ರಿಭಾಷಾ ಸೂತ್ರಕ್ಕೆ ವ್ಯವಸ್ಥಿತವಾಗಿ ಸಮಾಧಿ ಕಟ್ಟಲಾಗುತ್ತಿದೆ ಎಂದು ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.