ಖ್ಯಾತ ಗಾಯಕನಿಂದ ರೋಹಿಣಿ ಸಿಂಧೂರಿ ಪತಿ ವಿರುದ್ಧ ಒತ್ತುವರಿ ಆರೋಪ, ಭೂ ವ್ಯಾಜ್ಯ ಕೋರ್ಟ್ನಲ್ಲಿದೆಯೆಂದ ಕುಟುಂಬ
ಬಾಲಿವುಡ್ ಖ್ಯಾತ ಗಾಯಕ ಹಾಗೂ ನಟ ಲಕ್ಕಿ ಅಲಿ ತಮ್ಮ ಬೆಂಗಳೂರಿನ ಜಮೀನನ್ನು ಭೂ ಮಾಫಿಯಾ ಮೂಲಕ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕುಟುಂಬದ ಸದಸ್ಯರು ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದು, ಈ ಅರೋಪ ಸುಳ್ಳೆಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಬೆಂಗಳೂರು (ಡಿ.5): ಬಾಲಿವುಡ್ ಖ್ಯಾತ ಗಾಯಕ ಹಾಗೂ ನಟ ಲಕ್ಕಿ ಅಲಿ ತಮ್ಮ ಬೆಂಗಳೂರಿನ ಜಮೀನನ್ನು ಭೂ ಮಾಫಿಯಾ ಮೂಲಕ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕುಟುಂಬದ ಸದಸ್ಯರು ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದು, ತಮ್ಮ ಕುಟುಂಬ ಮತ್ತು ಮಕ್ಕಳು ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿದ್ದಾರೆ. ನಾನು ಸದ್ಯ ದುಬೈನಲ್ಲಿ ಇದ್ದೇನೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸುಧೀರ್ ರೆಡ್ಡಿ ಅವರು ತಮ್ಮ ಪತ್ನಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಸಹಾಯದಿಂದ ಅತಿಕ್ರಮಣ ಮಾಡಿದ್ದಾರೆ ಎಂದು ಅಲಿ ಆರೋಪಿಸಿದ್ದಾರೆ. ಈ ಬಗ್ಗೆ ಡಿಜಿಪಿ ಪ್ರವೀಣ್ ಸೂದ್ ಗೆ ಸರಣಿ ಟ್ವೀಟ್ ಮಾಡಿರುವ ಲಕ್ಕಿ ಅಲಿ, ಯಲಹಂಕ ಬಳಿಯ ಕೆಂಚೇನಹಳ್ಳಿ ಬಳಿ ಇರುವ ತನ್ನ ಆಸ್ತಿಯನ್ನು ಸುಧೀರ್ ರೆಡ್ಡಿ ಹಾಗು ಮಧು ರೆಡ್ಡಿ ಎಂಬುವವರು ಒತ್ತುವರಿ ಮಾಡಿಕೊಂಡಿದ್ದು, ಎಸಿಪಿಯವರಿಗೆ ದೂರು ನೀಡಿದ್ರೂ ಯಾವುದೇ ಪ್ರತಿಕ್ರಿಯೆ ಮಾಡಿಲ್ಲ ಎಂದಿದ್ದಾರೆ. ಇದು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ನನ್ನ ಕಾನೂನು ಸಲಹೆಗಾರರು ನನಗೆ ತಿಳಿಸುತ್ತಿದ್ದಾರೆ. ನಾವು ಕಳೆದ 50 ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದೇವೆ ಎಂದು ಅವರು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಸ್ಥಳೀಯ ಪೊಲೀಸರಿಂದ ನನಗೆ ಯಾವುದೇ ಸಹಾಯ ಸಿಗುತ್ತಿಲ್ಲ, ಅವರು ವಾಸ್ತವದಲ್ಲಿ ಅತಿಕ್ರಮಣದಾರರನ್ನು ಬೆಂಬಲಿಸುತ್ತಿದ್ದಾರೆ ಮತ್ತು ನಮ್ಮ ಪರಿಸ್ಥಿತಿ ಮತ್ತು ನಮ್ಮ ಭೂಮಿಯ ಕಾನೂನು ಸ್ಥಿತಿಯ ಬಗ್ಗೆ ಅಸಡ್ಡೆ ಹೊಂದಿದ್ದಾರೆ. ಡಿಸೆಂಬರ್ 7 ರಂದು ಅಂತಿಮ ನ್ಯಾಯಾಲಯದ ವಿಚಾರಣೆಯ ಮೊದಲು ಸುಳ್ಳು ಆಸ್ತಿಯನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿರುವ ಅವರ ಈ ಕಾನೂನುಬಾಹಿರ ಚಟುವಟಿಕೆಯನ್ನು ನಿಲ್ಲಿಸಲು ನಾನು ನಿಮ್ಮ ಸಹಾಯವನ್ನು ಕೋರುತ್ತೇನೆ. ಇದನ್ನು ಸಾರ್ವಜನಿಕರಿಗೆ ಕೊಂಡೊಯ್ಯುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲದಿರುವುದರಿಂದ ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಲಕ್ಕಿ ಅಲಿ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಟ್ವೀಟ್ ಮಾಡಿದ್ದಾರೆ.
ಆಡಿಯೋ ವೈರಲ್: ಕಾನೂನು ಕುಣಿಕೆಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ
ಮಧುಸೂದನ್ ರೆಡ್ಡಿಯಿಂದಲೇ ಅಲಿ ವಿರುದ್ಧ ದಾಖಲಾಗಿತ್ತು ದೂರು:
ಬಾಲಿವುಡ್ ಹಾಡುಗಾರ ಲಕ್ಕಿಯಿಂದ ಆರೋಪಕ್ಕೊಳಗಾದ ಮಧುಸೂದನ್ ರೆಡ್ಡಿಯಿಂದಲೇ ಅಲಿ ವಿರುದ್ಧ ಈ ಹಿಂದೆ ದೂರು ದಾಖಲಾಗಿತ್ತು. ಕಳೆದ ತಿಂಗಳ 30ರಂದು ದೂರು ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಮಕ್ಸೂದ್ ಅಲಿ ಹಾಗೂ ಇತರರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. 2012ರಲ್ಲಿ ಮನ್ಸೂರ್ ಅಲಿಯಿಂದ ತಾನು ಪ್ರಾಪರ್ಟಿ ಖರೀದಿಸಿ ಸ್ವಾಧೀನದಲ್ಲಿರುತ್ತದೆ. ನ್ಯಾಯಾಲಯದಲ್ಲಿ ತಾತ್ಕಾಲಿಕ ತಡೆಯಾಜ್ಞೆ ಇದ್ದರೂ ಮಕ್ಸೂದ್ ಅಲಿ, ಮಸೂದ್ ಅಲಿ ಅತಿಕ್ರಮ ಪ್ರವೇಶ ಆರೋಪ ಮಾಡುತ್ತಿದ್ದಾರೆ. ಈ ವೇಳೆ ಹಲ್ಲೆ ಮಾಡಿದ್ದಾಗಿ ಮಧುಸೂದನ್ ರೆಡ್ಡಿ ದೂರು ದಾಖಲಿಸಿದ್ದಾರೆ. ಜೊತೆಗೆ ಇದೇ ವೇಳೆ ಲಕ್ಕಿ ಆಲಿಯಿಂದಲೂ ಸಹ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
Mysuru: ಜಿಲ್ಲಾ ತರಬೇತಿ ಸಂಸ್ಥೆಯ ವಸ್ತುಗಳನ್ನು ಮರಳಿಸಿ: ರೋಹಿಣಿ ಸಿಂಧೂರಿಗೆ 4ನೇ ಬಾರಿ ಪತ್ರ
ಇನ್ನು ಈ ಬಗ್ಗೆ ಮಧುಸೂದನ್ ರೆಡ್ಡಿ ಹೇಳಿಕೆ ನೀಡಿದ್ದು, ಲಕ್ಕಿ ಅಲಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ. 2012ರಲ್ಲಿ ಲಕ್ಕಿ ಅಲಿ ಸಹೋದರ ಮನ್ಸೂರ್ ಅಲಿಯಿಂದ ನನ್ನ ತಂದೆ ಜಾಗ ಖರೀದಿಸಿದ್ದರು. ಆಗಿನಿಂದಲೂ ಹಲವು ಮಾರ್ಗಗಳಲ್ಲಿ ನಮಗೆ ತಕರಾರು ಮಾಡುತ್ತಿದ್ದಾರೆ. ಈ ಸಂಬಂಧ ನಾವು 2016ರಲ್ಲಿ ಕೊರ್ಟ್ ಗೆ ಹೊಗಿದ್ದೇವೆ. ಕೋರ್ಟ್ ಸಹ ಇಂಜೆಕ್ಷನ್ ಆರ್ಡರ್ ಸಹ ನೀಡಿದೆ. ಲಕ್ಕಿ ಅಲಿ ವಿರುದ್ಧವಾಗಿ ಅಂದರೆ ನ್ಯಾಯಾಲಯ ನಮ್ಮ ಪರವಾಗಿ ಆರ್ಡರ್ ಮಾಡಿತ್ತು. 2022 ಮೂರು ತಿಂಗಳ ಹಿಂದೆ ತಂದೆ ತೀರಿಕೊಂಡರು. ಈ ಕಾರಣ ನಾನು ಅಮೇರಿಕಾದಿಂದ ಮರಳಿ ಬಂದೆ. ನನ್ನ ತಾಯಿಯ ಆಸೆಯ ಜಾಗವನ್ನು ನಾವು ನೋಡಲು ಹೊಗಿದ್ದೆವು. ಈ ವೇಳೆ ಲೋಡೆಡ್ ಗನ್ ಮತ್ತು ಗೂಂಡಾಗಳಿಂದ ನಮಗೆ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಮಕ್ಸೂದ್ ಅಲಿ ವಿರುದ್ಧ ಠಾಣೆಗೆ ಎಫ್ ಐ ಆರ್ ಸಹ ನೀಡಿದ್ದೇನೆ. ಕೊರ್ಟ್ ನಲ್ಲಿ ಕಂಟೆಂಪ್ಟ್ ಆಫ್ ಕೊರ್ಟ್ ನ ಪ್ರೊಸೀಡಿಂಗ್ಸ್ ಸಹ ಮಾಡಲಿದ್ದೇನೆ. ನನ್ನ ಮತ್ತು ನನ್ನ ಕುಟುಂಬವನ್ನು ಮಾಫಿಯದವರು ಎಂದಿರುವುದು ಹಾಸ್ಯಾಸ್ಪದ. ನಾನು 20 ವರ್ಷದಿಂದ ಯುಎಸ್ ನಲ್ಲಿದ್ದೇನೆ. ರೋಹಿಣಿ ಸಿಂಧೂರಿಗೂ ಇದಕ್ಕೂ ಸಂಬಂಧ ಇಲ್ಲ. ಇದು ನಮ್ಮ ಕುಟುಂಬದ ಜಾಗ ಅದಕ್ಕಾಗಿ ನಾವು ಹೋರಾಟ ಮಾಡುತಿದ್ದೇವೆ. ಸೆಲೆಬ್ರಿಟಿ ಆಗಿರೊದ್ರಿಂದ ಪಬ್ಲಿಕ್ ಸಿಂಪತಿ ಗಳಿಸುವ ತಂತ್ರ ಮಾಡುತಿದ್ದಾರೆ. ಇಂಜೆಕ್ಷನ್ ಆರ್ಡರ್ ಇದ್ದರು ನಮಗೂ ನಮ್ಮ ಕುಟುಂಬಕ್ಕೆ ತೊಂದರೆ ಕೊಡುವ ಕೆಲಸ ಲಕ್ಕಿ ಅಲಿಯಿಂದ ನಡೆಯುತ್ತಿದೆ ಎಂದು ಮಧುಸೂದನ್ ರೆಡ್ಡಿ ಹೇಳಿದ್ದಾರೆ.