ಹುಡುಗಿಯೊಬ್ಬಳನ್ನು ಪ್ರೀತಿಸಿದ ಹುಡುಗ ಆಕೆಯ ಒಡಲಿನಲ್ಲಿ ಪ್ರೇಮದ ಉಡುಗೊರೆಯನ್ನೂ ಇಟ್ಟಿದ್ದ. ಹಿಂಗಾಯ್ತಲ್ಲ ಮದುವೆ ಆಗೋಣ ಎಂದರೆ ಈ ಗರ್ಭಕ್ಕೆ ನಾನು ಕಾರಣನಲ್ಲ ಎಂದು ತಗಾದೆ ತೆಗೆದಿದ್ದ.  

ಚಿಕ್ಕಬಳ್ಳಾಪುರ (ಜು.21): ಅವರಿಬ್ಬರದು ಎರಡು ವರ್ಷದ ಪ್ರೀತಿ, ಪರಸ್ಪರ ಇಷ್ಟಪಟ್ಟು ಊರೂರು ಸುತ್ತಾಡಿದ್ದರು. ಆದರೆ, ಪ್ರೀತಿ ಯಾವಾಗ ದೈಹಿಕ ಸಂಪರ್ಕಕ್ಕೆ ತಿರುಗಿತು ಅನ್ನೋದು ಅವರಿಗೂ ಗೊತ್ತಾಗಲಿಲ್ಲ. ಇದರ ಫಲವಾಗಿ ಆಕೆ ಆರು ತಿಂಗಳ ಗರ್ಭಿಣಿಯಾಗಿದ್ದಳು. ಮದುವೆಗೂ ಮುನ್ನವೇ ಗರ್ಭಿಣಿ ಆಗಿದ್ದೇನೆ. ಈಗ ಮದುವೆ ಆಗೋಣ ಎಂದು ಪ್ರೀತಿಸಿದ ಹುಡುಗನಲ್ಲಿ ಕೇಳಿದರೆ, ಆತ ಪ್ಲೇಟ್‌ ಚೇಂಜ್‌ ಮಾಡಿದ್ದ. ಕಾವಲಿ ಮೇಲಿನ ದೋಸೆ ಮಗುಚಿ ಹಾಕುವ ರೀತಿಯಲ್ಲಿ, ನೀನು ಗರ್ಭಣಿ ಆಗೋದಕ್ಕೆ ನಾನು ಕಾರಣ ಅಲ್ಲವೇ ಅಲ್ಲ. ನಿನ್ನ ಗರ್ಭಕ್ಕೆ ನಾನೇ ಕಾರಣ ಅನ್ನೋದಕ್ಕೆ ನಿನ್ನಲ್ಲಿ ಏನಾದರೂ ಸಾಕ್ಷ್ಯ ಇದ್ಯಾ ಅಂತೆಲ್ಲಾ ಪ್ರಶ್ನೆ ಮಾಡಿದ್ದಾನೆ. ಕೊನೆಗೆ, ಆಗೋದು ಆಗಿದೆ, ಗರ್ಭಪಾತನಾದರೂ ಮಾಡಿಸ್ಕೋ ಅಂತಾ ಬಿಟ್ಟಿ ಸಲಹೆ ಬೇರೆ ಕೊಟ್ಟಿದ್ದಾನೆ. ಆಕಾಶವೇ ತಲೆ ಮೇಲೆ ಬಿದ್ದಂತೆ ಅನಿಸಿದಾಗ ಯುವತಿ ನೇರವಾಗಿ ಸಂಘಸಂಸ್ಥೆಗಳ ಮೊರೆ ಇಟ್ಟಿದ್ದರು. ಮಾತನಾಡುವ ನೆಪದಲ್ಲಿ ಹುಡುಗನನ್ನು ಪ್ರವಾಸಿ ಮಂದಿರದಲ್ಲಿ ಕರೆಯಲಾಗಿತ್ತು. ಹಿಗ್ಗಾಮುಗ್ಗಾ ಥಳಿಸಿದ ಜನರು ಆತನಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಲ್ಲದೆ, ಇಡೀ ಮದುವೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಇಡೀ ಘಟನೆ ನಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ.

ಶಿಡ್ಲಘಟ್ಟ ತಾಲೂಕಿನ ಇಟ್ಟಪ್ಪನಹಳ್ಳಿ ಗ್ರಾಮದ ಮಹಿಳೆ ವನಿತಾ ಹಾಗೂ ಚಿಕ್ಕಕಿರುಗುಂಬಿ ಗ್ರಾಮದ ಚೇತನ್ ಕಳೆದ ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇತ್ತೀಚೆಗೆ ಪ್ರಿಯತಮೆ ವನಿತಾ ಆರು ತಿಂಗಳ ಗರ್ಭಣಿ ಎನ್ನೋದು ಗೊತ್ತಾಗಿದೆ. ಇದರ ಬೆನ್ನಲ್ಲಿಯೇ ಪ್ರಿಯತಮೆಯ ಗರ್ಭಪಾತ ಮಾಡಿಸಲು ಆತ ಪದೇ ಪದೇ ಇತ್ತಾಯ ಮಾಡುತ್ತಿದ್ದ. ಗರ್ಭಪಾತ ಮಾಡಿಲು ಆಸ್ಪತ್ರೆಗೆ ಕರೆದೊಯ್ದಿದ್ದ ವೇಳೆ ಪ್ರಿಯತಮೆ ಕೂಡ ಥಳಿಸಿದ್ದಾಳೆ. ಇನ್ನು ಈ ವಿಚಾರ ಪೋಷಕರಿಗೆ ತಿಳಿದ ಬಳಿಕ ಅವರೂ ಕೂಡ ಚೇತನ್‌ಗೆ ಥಳಿಸಿದ್ದಾರೆ. ಮದುವೆಯಿಂದ ಜಾರಿಕೊಳ್ಳಲು ಚೇತನ್‌ ಯತ್ನಿಸಿದಾಗ ಕೆಲವು ಮಹಿಳಾ ಸಂಘಟನೆಗಳು ಈತನನ್ನು ರಾಜಿ ಪಂಚಾಯಿತಿಗೆ ಕರೆಸಿದ್ದವು. ಬಳಿಕ ಪೊಲೀಸ್‌ ಠಾಣೆ ಎದುರಿಗೆ ಇರುವ ಪ್ರವಾಸಿ ಮಂದಿರದಲ್ಲಿ ಚೇತನ್‌ ಮೇಲೆ ಹಲ್ಲೆ ಮಾಡಿ ಮದುವೆ ಮಾಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಗುರುವಾರ ಸಂಜೆ ಪ್ರವಾಸಿ ಮಂದಿರದ ಬಳಿಕ ರಾಜಿ ಪಂಚಾಯ್ತಿಗೆ ಚೇತನ್‌ನನ್ನು ಕರೆಸಲಾಗಿತ್ತು. ಈ ವೇಳೆ ಮಹಿಳಾ ಸಂಘಟನೆಗಳ ಸದ್ಯರು ಕೂಡ ಅಲ್ಲಿಗೆ ಬಂದಿದ್ದರು. ಅವರ ಮುಂದೆಯೂ ಚೇತನ್‌ ತಾನೇ ಗರ್ಭಿಣಿ ಮಾಡಿದೆ ಅನ್ನೋದಕ್ಕೆ ಸಾಕ್ಷ್ಯ ಏನಿದೆ ಎಂದು ಕೇಳಿದಾಗ, ಎದುರಿಗಿದ್ದವರಿಗೆ ರೇಗಿ ಹೋಗಿದೆ. ಚೇತನ್‌ನ ಕೆನ್ನೆಗೆ ಎರಡೇಟು ಹಾಕಿದ ಮಹಿಳೆಯರು, ನಮ್ಮೆದುರು ಮದುವೆ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ಶೀಘ್ರದಲ್ಲೇ ಒಳ ಉಡುಪು ಮಾರುಕಟ್ಟೆಗೆ ರಿಲಯನ್ಸ್ ರಿಟೇಲ್ ಪ್ರವೇಶ; ಕೇವಲ 85ರೂ.ಗೆ ಉತ್ಪನ್ನಗಳ ಮಾರಾಟ

ಆದರೆ, ಮದುವೆ ಅಂದರೆ, ಮಂಗಳವಾದ್ಯಗಳಿರಬೇಕು, ತಾಳಿ ಇರಬೇಕು. ಇದೆಲ್ಲವನ್ನೂ ಅಲ್ಲಿಯೇ ರೆಡಿ ಮಾಡಲಾಯಿತು. ತೆಲುಗು ಗೀತೆಗಳನ್ನು ಹಾಕಿ ಅದನ್ನೇ ಮಂಗಳವಾದ್ಯ ಮಾಡಿದ್ದಾರೆ. ಇನ್ನು ಮದುವೆ ಆಗಿದೆ ಅನ್ನೋದಕ್ಕೆ ಸಾಕ್ಷಿ ಎನ್ನುವಂತೆ ಕಾಗದ ಪತ್ರದ ಮೇಲೆ ವಧು-ವರರೊಂದಿಗೆ ಇದ್ದ ಕೆಲವರು ಕೂಡ ಸಹಿ ಮಾಡಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳೆ ಕೊಡಗಿನ ಮಗಳು, 10 ವರ್ಷದಲ್ಲಿ 1500 ಕೋಟಿ!

ಈ ನಡುವೆ ಮದುವೆ ನೋಂದಣಿ ಮಾಡಿಕೊಳ್ಳಲು ಚಿಕ್ಕಬಳ್ಳಾಪುರದ ಕಚೇರಿಗೆ ಹೋದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಯಾಕೆಂದರೆ, ಚೇತನ್‌ಗೆ ಇದು ಮೊದಲ ಮದುವೆಯಾಗಿರಲಿಲ್ಲ. ಚೇತನ್‌ಗೆ ಈಗಾಗಲೇ ಒಂದು ಮದುವೆಯಾಗಿದೆ ಅನ್ನೋದು ತಿಳಿದಾಗ ಮಹಿಳಾ ಸಂಘಟನೆಯ ಸದಸ್ಯರು ಕೂಡ ಏನು ಮಾಡಬೇಕೆಂದು ತೋಚದೆ ಗಲಿಬಿಲಿಯಾಗಿದ್ದರು.