ಹೈಕಮಾಂಡ್‌ಗೆ ನೀಡಿದ ಮಾತಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಕ್ಕೆ ಒಪ್ಪಿ ರಾಜೀನಾಮೆ ನೀಡಿದ್ದಾರೆ. ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿನ ಅಧಿಕಾರ ಜಗಳದ ನಡುವೆ, ಸಿದ್ದರಾಮಯ್ಯರ ಈ ನಡೆ ಕಾಂಗ್ರೆಸ್‌ಗೆ ಹೊಸ ಮಾದರಿಯಾಗಿದ್ದು, ಅವರು 'ವಚನ ಪಾಲಕ'ನಾಗಿ ಹೊರಹೊಮ್ಮಿದ್ದಾರೆ.

ಬೆಂಗಳೂರು (ಮೇ.28): ದೇಶದ ಇತರೆ ರಾಜ್ಯಗಳಲ್ಲಿ ‘ಅಧಿಕಾರ ಹಂಚಿಕೆ’ ಜಗಳದಿಂದಲೇ ಕಾಂಗ್ರೆಸ್ ನೆಲಕಚ್ಚುತ್ತಿರುವ ಹೊತ್ತಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ದೇಶದ ರಾಜಕಾರಣಕ್ಕೇ ಹೊಸ ಮಾದರಿಯಾಗಿ ನಿಂತಿದ್ದಾರೆ. ಹೈಕಮಾಂಡ್‌ಗೆ ಕೊಟ್ಟ ಮಾತಿನಂತೆ, ಒಂದು ಕ್ಷಣವೂ ಯೋಚಿಸದೆ ಅಧಿಕಾರ ಹಸ್ತಾಂತರಕ್ಕೆ ಒಪ್ಪಿ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರ ನಡೆಗೆ ಎಐಸಿಸಿ ನಾಯಕರು ಅಕ್ಷರಶಃ ದಿಗ್ಭ್ರಮೆಗೊಂಡಿದ್ದಾರೆ. ರಾಜಕೀಯದಲ್ಲಿ ಕೊಟ್ಟ ಮಾತಿಗೆ ತಪ್ಪಿ ನಡೆಯದ ‘ನಂಬಿಕೆ ರಾಮಯ್ಯ’ ಇಂದು ರಾಜ್ಯ ರಾಜಕಾರಣದ ‘ಪುಣ್ಯಕೋಟಿ’ಯಾಗಿ ಹೊರಹೊಮ್ಮಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಛತ್ತೀಸ್‌ಗಢದಲ್ಲಿ ಪ್ರಿಯಾಂಕಾ ಗಾಂಧಿ ಸಾಕ್ಷಿಯಾಗಿದ್ದರೂ ಒಪ್ಪಂದ ಮುರಿದಿದ್ದ ಬಘೇಲ್!

ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಅಧಿಕಾರ ಹಂಚಿಕೆಯ ಸೂತ್ರ ಎನ್ನುವುದು ಅತ್ಯಂತ ದೊಡ್ಡ ತಲೆನೋವಾಗಿತ್ತು. ಇದಕ್ಕೆ ದೃಷ್ಟಾಂತ ಎಂಬಂತೆ ಛತ್ತೀಸ್‌ಗಢದಲ್ಲಿ ಭೂಪೇಶ್ ಬಘೇಲ್ ಮತ್ತು ಟಿ.ಎಸ್. ಸಿಂಗ್ ದೇವ್ ನಡುವೆ 30-30 ತಿಂಗಳುಗಳ ಕಾಲ ಅಧಿಕಾರ ಹಂಚಿಕೊಳ್ಳುವ ಒಪ್ಪಂದ ನಡೆದಿತ್ತು. ಖುದ್ದು ಪ್ರಿಯಾಂಕಾ ಗಾಂಧಿ ಅವರೇ ಈ ಒಪ್ಪಂದಕ್ಕೆ ಸಾಕ್ಷಿಯಾಗಿದ್ದರು. ಆದರೆ, ಭೂಪೇಶ್ ಬಘೇಲ್ ಕೊನೆಯ ತನಕವೂ ಸಿಂಗ್ ದೇವ್ ಅವರಿಗೆ ಅಧಿಕಾರ ಬಿಟ್ಟುಕೊಡಲೇ ಇಲ್ಲ. ಪರಿಣಾಮವಾಗಿ, ಎರಡನೇ ಬಾರಿಗೆ ಸುಲಭವಾಗಿ ಗೆಲ್ಲಬೇಕಿದ್ದ ಕಾಂಗ್ರೆಸ್ ಪಕ್ಷ, ಅಲ್ಲಿನ ನಾಯಕರ ಜಗಳದಿಂದಾಗಿ ಕೊನೆಗೂ ಸೋತು ಸುಣ್ಣವಾಯಿತು.

ರಾಜಸ್ಥಾನದಲ್ಲಿ ಖರ್ಗೆ ಅವರನ್ನೇ ಸತಾಯಿಸಿದ್ದ ಮೂಲ ಕಾಂಗ್ರೆಸ್ಸಿಗ ಗೆಹ್ಲೋಟ್!

ಇನ್ನೊಂದೆಡೆ ರಾಜಸ್ಥಾನದಲ್ಲಿ ಮೂರು ಬಾರಿ ಸಿಎಂ ಆಗಿದ್ದ ಮೂಲ ಕಾಂಗ್ರೆಸ್ಸಿಗ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಭೀಕರ ಅಧಿಕಾರದ ಆಟ ನಡೆದಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಖುದ್ದಾಗಿ ಜೈಪುರಕ್ಕೆ ಹೋಗಿ ಶಾಸಕಾಂಗ ಪಕ್ಷದ (CLP) ಸಭೆ ಕರೆದರೂ, ಗೆಹ್ಲೋಟ್ ತಮ್ಮ ಬೆಂಬಲಿಗ ಶಾಸಕರು ಸಭೆಗೆ ಬರದಂತೆ ನೋಡಿಕೊಂಡಿದ್ದರು. ಅಧಿಕಾರ ಬಿಡಲು ಒಪ್ಪದ ಕಾರಣ ಸಚಿನ್ ಪೈಲಟ್ ಮತ್ತು ಕೆಲವು ಶಾಸಕರು ರೆಸಾರ್ಟ್ ಸೇರಬೇಕಾಯಿತು. ಈ ಆಂತರಿಕ ಕಚ್ಚಾಟದಿಂದ ಹೈಕಮಾಂಡ್‌ಗೆ ಭಾರಿ ಮುಖಭಂಗವಾಗಿ, ಕೊನೆಗೂ ರಾಜಸ್ಥಾನದಲ್ಲೂ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು.

ಮೂಲ ಕಾಂಗ್ರೆಸ್ಸಿಗರು ಪಕ್ಷ ಸೋಲಿಸಿದ್ರು; ‘ವಲಸಿಗ’ ಸಿದ್ದರಾಮಯ್ಯ ಗೆಲ್ಲಿಸಿದ್ರು!

ಇತಿಹಾಸವನ್ನು ತಿರುವಿ ಹಾಕಿದರೆ, ಕಾಂಗ್ರೆಸ್ ಪಕ್ಷದ ರಕ್ತ ಹಂಚಿಕೊಂಡು ಬಂದಿದ್ದೇವೆ ಎನ್ನುವ ಮೂಲ ಕಾಂಗ್ರೆಸ್ಸಿಗರು ದೇಶಾದ್ಯಂತ ಅಧಿಕಾರಕ್ಕಾಗಿ ಹಠ ಹಿಡಿದು ಪಕ್ಷವನ್ನು ಸೋಲಿಸಿದರು. ಆದರೆ, ಜೆಡಿಎಸ್‌ನಿಂದ ಬಂದ ‘ವಲಸೆ ಕಾಂಗ್ರೆಸ್ಸಿಗ’ ಎಂದು ಕರೆಯಲ್ಪಡುವ ಸಿದ್ದರಾಮಯ್ಯ ಮಾತ್ರ ಪಕ್ಷವನ್ನು ಮೂರು ಬಾರಿ (ಮೈತ್ರಿ ಸರ್ಕಾರ ಸೇರಿದಂತೆ) ಅಧಿಕಾರಕ್ಕೆ ತಂದಿದ್ದಾರೆ. ಕೇವಲ ಅಧಿಕಾರಕ್ಕೆ ತರುವುದು ಮಾತ್ರವಲ್ಲ, 'ರಾಹುಲ್ ಗಾಂಧಿ ಅವರು ನನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ, ಅದರಂತೆ ನಾನು ಅಧಿಕಾರ ಹಸ್ತಾಂತರ ಮಾಡುತ್ತೇನೆ' ಎಂದು ಹೇಳಿ, ನುಡಿದಂತೆ ನಡೆದು ತೋರಿಸಿದ್ದಾರೆ.

ಹೈಕಮಾಂಡ್‌ಗೆ ಶಾಕ್ ಕೊಟ್ಟ ವಚನ ಪಾಲಕ!

ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಸೂತ್ರದ ಕಥೆಯೂ ರಾಜಸ್ಥಾನದಂತೆಯೇ ಆಗಬಹುದು ಎಂದು ಹೈಕಮಾಂಡ್ ಆತಂಕದಲ್ಲಿತ್ತು. ಆದರೆ, ಹೈಕಮಾಂಡ್ ಮುಖಂಡರು ಸೂಚನೆ ನೀಡಿದ ತಕ್ಷಣ ಸಿದ್ದರಾಮಯ್ಯ ಅವರು ಯಾವುದೇ ಹಠ ಹಿಡಿಯದೆ, ಒಂದು ಕ್ಷಣವೂ ಯೋಚಿಸದೆ ಸಿಎಂ ಸ್ಥಾನ ತ್ಯಜಿಸಿದ್ದಾರೆ. ರಾಜಕೀಯ ಲಾಬಿಗಳು, ಹಠಮಾರಿ ಧೋರಣೆಗಳ ನಡುವೆ ಸಿದ್ದರಾಮಯ್ಯ ಅವರ ಈ ಸತ್ಚಾರಿತ್ರ್ಯದ ನಡೆ ಕಂಡು ಹೈಕಮಾಂಡ್ ನಾಯಕರೇ ಒಂದು ಕ್ಷಣ ಶಾಕ್ ಆಗಿದ್ದಾರೆ ಮತ್ತು ಫುಲ್ ಖುಷಿಯಾಗಿದ್ದಾರೆ. ರಾಜಕೀಯ ಲಾಭಕ್ಕಾಗಿ ಕೊಟ್ಟ ವಚನಗಳನ್ನು ಗಾಳಿಗೆ ತೂರುವ ಇಂದಿನ ದಿನಗಳಲ್ಲಿ, ಹೈಕಮಾಂಡ್‌ನ ಗೌರವ ಮತ್ತು ನಂಬಿಕೆಯನ್ನು ಕಾಪಾಡಿ ‘ವಚನ ಪಾಲಕ’ನಾಗಿ ನಿಂತ ಸಿದ್ದರಾಮಯ್ಯ ನಿಜಕ್ಕೂ ರಾಜಕಾರಣದ ಸೌಮ್ಯ ಚಹರೆಯಾಗಿ ಉಳಿದುಬಿಟ್ಟಿದ್ದಾರೆ.