ಸಂಗಮೇಶ್ ವಿರುದ್ಧ ಷಡ್ಯಂತ್ರ, ಕಾಂಗ್ರೆಸ್ಸಿಂದ ಹೋರಾಟ: ಸಿದ್ದರಾಮಯ್ಯ
ವಿಧಾನಸಭೆ ಒಳಗೂ, ಹೊರಗೂ ಧ್ವನಿ ಎತ್ತುತ್ತೇವೆ| ರಾಜಕೀಯ ಸೇಡಿನಿಂದ ಸಂಗಮೇಶ್ ಪುತ್ರನ ವಿರುದ್ಧ ಕೊಲೆ ಯತ್ನ ಕೇಸು| ಅಧಿಕಾರ ಎಂಬುದು ಯಾರಿಗೂ ಶಾಶ್ವತ ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು| ಹೋರಾಟ ಮುಂದುವರೆಸುತ್ತೇವೆ: ಸಿದ್ದು|
ಬೆಂಗಳೂರು(ಮಾ.07): ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರ ಪುತ್ರನನ್ನು ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿರುವ ಬಗ್ಗೆ ವಿಧಾನಸಭೆಯಲ್ಲಿ ಗಂಭೀರ ಹೋರಾಟ ನಡೆಸುತ್ತೇವೆ. ಅಷ್ಟೇ ಅಲ್ಲದೆ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಎದುರೂ ಪ್ರತಿಭಟನೆ ನಡೆಸುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಸೇಡಿನಿಂದ ಸಂಗಮೇಶ್ ಹಾಗೂ ಅವರ ಕುಟುಂಬದ ಸದಸ್ಯರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ. ಇದೀಗ ಚಿತ್ರದುರ್ಗದಲ್ಲಿ ಸಂಗಮೇಶ್ ಪುತ್ರನನ್ನು ಬಂಧಿಸಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಚಿತ್ರದುರ್ಗ: ಶಾಸಕ ಸಂಗಮೇಶ್ ಪುತ್ರನ ಬಂಧನ
ಕಬಡ್ಡಿ ಪಂದ್ಯಾವಳಿ ವೇಳೆ ನಡೆದಿರುವ ವಾಗ್ವಾದಕ್ಕೆ ಕೊಲೆ ಯತ್ನ ಆರೋಪದ ಅಡಿ 307 ಸೆಕ್ಷನ್ನಡಿ ಪ್ರಕರಣ ದಾಖಲಿಸಿದ್ದಾರೆ. ಕಬಡ್ಡಿ ಆಡುವ ವೇಳೆ ಯಾವ ಕೊಲೆ ಯತ್ನ ನಡೆಸುತ್ತಾರೆ? ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪ ಅವರು ಷಡ್ಯಂತ್ರದಿಂದ ಪ್ರಕರಣ ದಾಖಲಿಸಿದ್ದಾರೆ. ಅಧಿಕಾರ ಎಂಬುದು ಯಾರಿಗೂ ಶಾಶ್ವತ ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಈ ವಿಚಾರವನ್ನು ವಿಧಾನಸಭೆಯಲ್ಲಿ ಗಂಭೀರ ರೀತಿಯಲ್ಲಿ ಕೈಗೆತ್ತಿಕೊಳ್ಳುತ್ತೇವೆ. ಶಿವಮೊಗ್ಗದಲ್ಲೂ ಹೋರಾಟ ಮುಂದುವರೆಸುತ್ತೇವೆ ಎಂದರು.