Asianet Suvarna News Asianet Suvarna News

Breaking: ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

ಶ್ರವಣಬೆಳಗೊಳದ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನರಾಗಿದ್ದಾರೆ.  ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಬೆಳ್ಳೂರು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರ ವಿಧಿವಶರಾಗಿದ್ದಾರೆ.

Shravanabelagola Sri Charukirthi Bhattarak Swamiji passes away Akb
Author
First Published Mar 23, 2023, 8:28 AM IST

ಹಾಸನ: ಶ್ರವಣಬೆಳಗೊಳದ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿಏರುಪೇರಾದ ಹಿನ್ನೆಲೆ ಬೆಳ್ಳೂರು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರ ವಿಧಿವಶರಾಗಿದ್ದಾರೆ.ಅನಾರೋಗ್ಯದ ಹಿನ್ನೆಲೆ ಅವರನ್ನು ಆ್ಯಂಬುಲೆನ್ಸ್ ಮೂಲಕ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ಸ್ವಾಮೀಜಿ ನಿಧನ ವಿಚಾರ ತಿಳಿದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬೆಳ್ಳೂರು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಸ್ವಸ್ಥಿ ಶ್ರಿ ಚಾರುಕೀರ್ತಿ ಅನ್ನುವ ಬಿರುದಾಂಕಿತ ಜೈನಭಟ್ಟಾರಕ ಸ್ವಾಮೀಜಿಗಳು  ದೇಶಾದ್ಯಂತ ಅಪಾರಭಕ್ತವರ್ಗವನ್ನು ಹೊಂದಿದ್ದಾರೆ. 



ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯಲ್ಲಿ ಶ್ರವಣಬೆಳಗೊಳದ ಗೊಮ್ಮಟೇಶ್ವರ...

ಮೇ 3, 1949ರಲ್ಲಿ ರತ್ನವರ್ಮರಾಗಿ ಕಾರ್ಕಳದ ವರಂಗ ಗ್ರಾಮದಲ್ಲಿ ಜನಿಸಿದ್ದ ಸ್ವಾಮೀಜಿಯವರಿಗೆ 75 ವರ್ಷವಾಗಿತ್ತು. ಸಂಸ್ಕೃತ, ಪ್ರಾಕೃತ ಕನ್ನಡದಲ್ಲಿ ಪಾಂಡಿತ್ಯ ಹೊಂದಿದ್ದ ಇವರು ಜೈನ ತತ್ವಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿದ್ದರು. ಅಲ್ಲದೇ ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂಎ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದರು. ಡಿ.12, 1969ರಂದು ಸ್ವಾಮೀಜಿಗಳಾದರು. 1970ರಲ್ಲಿ ಶ್ರವಣಬೆಳಗೊಳದ ಮಠದ ಪೀಠಾಧಿಪತಿಗಳಾದರು. ಹೊಯ್ಸಳ ವಂಶದಿಂದ ನೀಡಿದ ಚಾರುಕೀರ್ತಿ ಸ್ವಾಮೀಜಿ ಎಂಬ ಪಟ್ಟವನ್ನು ಇವರಿಗೂ ನೀಡಲಾಯಿತು. ಜೈನರ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಾಭಿಷೇಕವು ಇವರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯುತ್ತಿತ್ತು. 1981,1993, 2006 ಹಾಗೂ 2018ರ ಮಹಾಮಸ್ತಾಭಿಷೇಕ ಯಶಸ್ವಿಯಾಗಿ ನೆರವೇರಿಸಿದ ಕೀರ್ತಿ ಇವರದ್ದು.

ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡಿರುವ ಈ ಸ್ವಾಮೀಜಿಯವರು ಎಂಜೀನಿಯರಿಂಗ್, ಮೆಡಿಕಲ್ ಪದವಿಗಳಿಗೆ ಕಡಿಮೆ ಫೀ ಪಡೆದು ಅನೇಕರಿಗೆ ವಿದ್ಯಾದಾನ ಮಾಡಿರುವ ಕೀರ್ತಿಗೆ ಪಾತ್ರರಾಗಿದ್ದಾರೆ. 

ಶ್ರವಣ ಬೆಳಗೊಳ ಎಂದರೆ ವಿರಾಗಿ ಪೂರ್ತಿಯ ಜೊತೆ ನೆನಪಾಗುವ ಇನ್ನೋರ್ವ ಚೇತನ  ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು. ಪೀಠಕ್ಕೆ ಬಂದು ಅರ್ಧ ಶತಮಾನವೇ ಆಗುತ್ತಿದ್ದರೂ ಅವರೆಂದು ನಕರಾತ್ಮಕ ಕಾರಣಕ್ಕೆ ಸುದ್ದಿಯಾದವರಲ್ಲ. ಯಾವುದೇ ಚರ್ಚೆ ಟೀಕೆಗೆ ಗುರಿಯಾದವರಲ್ಲ. ಟಿವಿ ಡಿಬೆಟ್‌ಗಳಲ್ಲಿ ಎಂದಿಗೂ ಕಾಣಿಸಿಕೊಂಡಿಲ್ಲ.  ಇವರು ಕಾಣಿಸುತ್ತಿದ್ದಿದ್ದು ಟಿವಿಯಲ್ಲಿ ಕೇವಲ ಮಹಾಮಸ್ತಾಕಾಭಿಷೇಕದಿಂದ ಮಾತ್ರ.   ಮತ್ತೊಮ್ಮೆ ಈ ಸ್ವಾಮೀಜಿಯವರನ್ನು ನೋಡಲು ಮತ್ತೆ 12 ವರ್ಷಗಳೇ ಕಾಯಬೇಕಾಗಿರುತ್ತಿತ್ತು.  ಎಲ್ಲವನ್ನೂ ಬಿಟ್ಟು ಸ್ವಾಮೀಜಿಯಾಗುವ ಕೆಲ ಸ್ವಾಮೀಜಿಗಳು ಪೀಠಾಕ್ಕೇರಿದ ನಂತರ ಎಲ್ಲವೂ ಬೇಕು ಎನ್ನಲು ಶುರು ಮಾಡುತ್ತಾರೆ. ಅಂತಹ ಸ್ವಾಮೀಜಿಗಳ ನಡುವೆ ಈ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತುಂಬಾ ಶ್ರೇಷ್ಠರಾಗಿ ಉಳಿಯುತ್ತಾರೆ.   

ಕಳೆದ ಮಹಾಮಸ್ತಾಕಭಿಷೇಕದ ನಂತರ ಅವರು  ಕನಿಷ್ಠ ರಾಜ್ಯ ರಾಜಧಾನಿ ಬೆಂಗಳೂರಿಗೂ ಬಂದಿರಲಿಲ್ಲ. ಯಾವುದರ ಗೊಡವೆಯೂ ಇಲ್ಲದಂತೆ ತಾವಾಯಿತು ತಮ್ಮ ಕಾಯಕವಾಯ್ತು ಎಂಬಂತಿದ್ದರು. ತಮ್ಮ ವ್ಯಕ್ತಿತ್ವದಿಂದಾಗಿ ವಿರಾಗಿಮೂರ್ತಿಯ ಸರಿಸಮಾನಕ್ಕೆ ತೂಗುವ ಸ್ವಾಮೀಜಿಯವರಿಗೆ ಹೊರರಾಜ್ಯಗಳಲ್ಲಿ ಅಪಾರ ಭಕ್ತ ಗಣವಿದೆ. ಇವರ ನಿಧನಕ್ಕೆ ಭಕ್ತವರ್ಗ ಸಂತಾಪ ವ್ಯಕ್ತಪಡಿಸಿದೆ.

Follow Us:
Download App:
  • android
  • ios