ಆರ್‌ಎಸ್‌ಎಸ್‌ ಪ್ರಮುಖ ಹುದ್ದೆಗೆ ದತ್ತಾತ್ರೇಯ ಹೊಸ ಬಾಳೆ ಅವರ ಆಯ್ಕೆಯಾಗಿದೆ. ಈ ಬೆನ್ನಲ್ಲೇ ಸಂಘಟನೆಯು ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾಗಿ ಮಾಹಿತಿ ನೀಡಿದ್ದಾರೆ. 

ಬೆಂಗಳೂರು (ಮಾ.21): ಕೋವಿಡ್‌ ವಿರುದ್ಧದ ಹೋರಾಟ ಮತ್ತು ಶ್ರೀರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದಲ್ಲಿ ಅಭೂತಪೂರ್ವ ಸ್ಪಂದನೆಗಾಗಿ ಸಮಾಜವನ್ನು ಶ್ಲಾಘಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಆರ್‌ಎಸ್‌ಎಸ್‌ನ ನೂತನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"

ಶನಿವಾರ ನಗರದ ಹೊರವಲಯದಲ್ಲಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಸಂಕಷ್ಟಕಾಲದಲ್ಲಿ ಇಡೀ ದೇಶ ಒಂದಾಗಿ ನಿಂತಿತು ಮತ್ತು ಈ ಮಹಾಮಾರಿಯನ್ನು ಎದುರಿಸುವಲ್ಲಿ ಅದ್ಬುತ ಯಶಸ್ಸು ಕಾಣಿಸಿತು. ಸಮಾಜದ ಈ ಒಗ್ಗಟ್ಟಿನ ಸ್ಪಂದನೆಯನ್ನು ಅಖಿಲ ಭಾತರ ಪ್ರತಿನಿಧಿ ಸಭಾ ಗುರುತಿಸಿ ಶ್ಲಾಘಿಸುವ ನಿರ್ಣಯವನ್ನು ಅಂಗೀಕರಿಸಿದೆ. ದೇಶ ತನ್ನ ಶ್ರೇಷ್ಠ ಸಾಮರ್ಥ್ಯವನ್ನು, ಹೊಂದಿಕೊಳ್ಳುವ ಗುಣ ಮತ್ತು ಕಾಳಜಿಯನ್ನು ಪ್ರದರ್ಶಿಸಿತು. ಕಷ್ಟದ ಸಮಯದಲ್ಲಿ ದೇಶದ ಜನತೆ ಸ್ವಾವಲಂಬಿಯಾಗುವ ಪ್ರಯತ್ನವನ್ನೂ ಮಾಡಿದರು. ಮುಂದಿನ ತಲೆಮಾರಿನ ಜನರು ಎಂತಹ ಕಷ್ಟವನ್ನಾದರೂ ಎದುರಿಸಬಲ್ಲರು ಮತ್ತು ಯಶಸ್ವಿಯಾಗಬಲ್ಲರು ಎನ್ನುವ ವಿಶ್ವಾಸ ಇದೆ ಎಂದರು.

ಅಂತರ್ಜಾತಿ ವಿವಾಹಕ್ಕೆ RSS ಬೆಂಬಲ: ದತ್ತಾತ್ರೇಯ ಹೊಸಬಾಳೆ

ಸ್ವಯಂ ಸೇವಕರು ಕೋವಿಡ್‌ ಸಂಕಷ್ಟದ ಕಾಲದಲ್ಲಿ ಸಮಾಜ ಸೇವೆಯನ್ನು ಮಾಡಿದರು. ಲಕ್ಷಾಂತರ ಜನರ ದಿನನಿತ್ಯದ ಜೀವನಕ್ಕೆ ಅವಶ್ಯಕವಾದ ಆಹಾರ, ಔಷಧಿ ಸೇರಿದಂತೆ ಅನೇಕ ವಸ್ತುಗಳನ್ನು ತಲುಪಿಸುವ ಕೆಲಸವನ್ನು ಮಾಡಿದರು. ಸಮಾಜದ ಋುಣ ತೀರಿಸುವ ಅವಕಾಶ ಯಾವಾಗ ದೊರಕಿದರೂ ಸ್ವಯಂ ಸೇವಕರು ಎಂದಿಗೂ ಹಿಂದೆ ಹೆಜ್ಜೆ ಇಡುವುದಿಲ್ಲ ಎಂದು ಹೇಳಿದ ಅವರು, ಕೊರೋನಾ ಕಾರಣದಿಂದಾಗಿ ಸಂಘದ ಕೆಲಸದಲ್ಲಿ ಸ್ವಲ್ಪ ತೊಡಕುಂಟಾಯಿತು. ನಿತ್ಯ ಶಾಖೆಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಆದರೂ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎರಡನೆಯದಾಗಿ ಶ್ರೀರಾಮಂದಿರ ನಿಧಿ ಸಮರ್ಪಣಾ ಅಭಿಯಾನದಲ್ಲಿ ಅಭೂತಪೂರ್ವ ಸ್ಪಂದನೆ ಸಿಕ್ಕಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ನಿರ್ಣಯ ಕೈಗೊಳ್ಳಲಾಯಿತು. ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 2021ರ ಆ.5ರಂದು ಶಂಕುಸ್ಥಾಪನೆ ನೆರವೇರಿಸಲಾಯಿತು. ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸುವಲ್ಲಿ ಆರ್‌ಎಸ್‌ಎಸ್‌ ಭಾಗಿಯಾಗಿದೆ. ಸಂಕ್ರಾಂತಿಯಿಂದ ಆರಂಭಗೊಂಡ 44 ದಿನಗಳ ಸಂಪರ್ಕ ಅಭಿಯಾನದಲ್ಲಿ ಸಂಘ ಪಾಲ್ಗೊಂಡಿತು. ಈ ಸಂದರ್ಭದಲ್ಲಿ ಸಮಾಜದ ಸ್ಪಂದನೆ ಐತಿಹಾಸಿಕವಾಗಿದೆ. 12 ಕೋಟಿ ಕುಟುಂಬಗಳನ್ನು ಸಂಪರ್ಕಿಸಲಾಗಿದ್ದು, 5.5 ಲಕ್ಷ ಊರುಗಳಲ್ಲಿ ಹಣ ಸಂಗ್ರಹ ಅಭಿಯಾನ ನಡೆಯಿತು. ಅಯೋಧ್ಯೆಗೆ ಹೋಗಲು ಸಾಧ್ಯವಾಗದವರು ಇದಕ್ಕೆ ಕೈ ಜೋಡಿಸಿದ್ದಾರೆ. ಬಡವರು-ಶ್ರೀಮಂತರು ಎಂಬ ಭೇದ ಇಲ್ಲದೆ ನಿಧಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.