ದೆಹಲಿಯ ಭಕ್ತರೊಬ್ಬರು 2 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿದ, 700 ಶ್ಲೋಕಗಳಿರುವ ಚಿನ್ನದ ಭಗವದ್ಗೀತೆಯನ್ನು ಉಡುಪಿ ಶ್ರೀಕೃಷ್ಣನಿಗೆ ಅರ್ಪಿಸಲಿದ್ದಾರೆ. ಪಲಿಮಾರು ಮಠದ ವಿಶ್ವಗೀತಾ ಪರ್ಯಾಯದ ಸಮಾರೋಪ ಅಂಗವಾಗಿ ಜನವರಿ 8 ರಂದು ಈ ಸ್ವರ್ಣ ಗೀತೆಯನ್ನು ಚಿನ್ನದ ರಥದಲ್ಲಿ ಮೆರವಣಿಗೆ ಮಾಡಿ ಸಮರ್ಪಿಸಲಾಗುವುದು.

ಉಡುಪಿ (ಜ.04): ಮಧ್ವನಗರಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮತ್ತೊಂದು ಐತಿಹಾಸಿಕ ಹಾಗೂ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ದೆಹಲಿಯ ಶ್ರೀಕೃಷ್ಣ ಭಕ್ತರೊಬ್ಬರು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಿರುವ ಅಪ್ಪಟ ಚಿನ್ನದ ಹಾಳೆಗಳ 'ಭಗವದ್ಗೀತೆ'ಯನ್ನು ಜನವರಿ 8ರಂದು ಉಡುಪಿ ಕೃಷ್ಣನಿಗೆ ಅರ್ಪಿಸಲಾಗುವುದು.

ವಿಶ್ವಗೀತಾ ಪರ್ಯಾಯ ಸಮಾರೋಪದ ವಿಶೇಷ

ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ 'ವಿಶ್ವಗೀತಾ ಪರ್ಯಾಯ'ದ ಸಮಾರೋಪದ ಅಂಗವಾಗಿ ಈ ವಿಶೇಷ ಹೊನ್ನಿನ ಕಾಣಿಕೆಯನ್ನು ಕೃಷ್ಣನ ಸನ್ನಿಧಿಯಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ. ಭಗವದ್ಗೀತೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ಆಧ್ಯಾತ್ಮಿಕ ಲೋಕದಲ್ಲಿ ಹೊಸ ಮೈಲಿಗಲ್ಲಾಗಲಿದೆ.

700 ಶ್ಲೋಕಗಳ ಸ್ವರ್ಣ ಸಂಪುಟ

ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿನ್ನದ ಭಗವದ್ಗೀತೆಯನ್ನು ಅತ್ಯಂತ ಕಲಾತ್ಮಕವಾಗಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಭಗವದ್ಗೀತೆಯ ಎಲ್ಲಾ 18 ಅಧ್ಯಾಯಗಳ 700 ಶ್ಲೋಕಗಳನ್ನು ಚಿನ್ನದ ಹಾಳೆಗಳ ಮೇಲೆ ಅಂದವಾಗಿ ಮುದ್ರಿಸಲಾಗಿದೆ. ಪ್ರತಿಯೊಂದು ಅಕ್ಷರವೂ ಭಕ್ತಿಯ ಸಂಕೇತವಾಗಿ ಕಂಗೊಳಿಸುತ್ತಿದ್ದು, ಇದು ಮಠದ ಇತಿಹಾಸದಲ್ಲಿಯೇ ಅಪರೂಪದ ಕಾಣಿಕೆಯಾಗಿ ಉಳಿಯಲಿದೆ.

ಚಿನ್ನದ ರಥದಲ್ಲಿ ಮೆರವಣಿಗೆ

ಜನೆವರಿ 8ರಂದು ನಡೆಯಲಿರುವ ಈ ಸಮಾರಂಭದಲ್ಲಿ ಚಿನ್ನದ ಭಗವದ್ಗೀತೆಯನ್ನು ಚಿನ್ನದ ರಥದಲ್ಲಿ ಇರಿಸಿ ಭವ್ಯವಾಗಿ ಮೆರವಣಿಗೆ ಮಾಡಲಾಗುವುದು. ನಂತರ ಶಾಸ್ತ್ರೋಕ್ತವಾಗಿ ಕೃಷ್ಣನಿಗೆ ಅರ್ಪಿಸಲಾಗುವುದು. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿದಂತೆ ದೇಶದ ವಿವಿಧ ಭಾಗಗಳ ಗಣ್ಯರು ಹಾಗೂ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.