ಬೆಂಗಳೂರಿನ ಯಲಹಂಕ ಕ್ಷೇತ್ರದ ವಾರ್ಡ್‌ಗೆ 'ಆಕಾಶ್' ಎಂದು ಮರುನಾಮಕರಣ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೆಸರಿಗೆ ಶಾಸಕ ಎಸ್.ಆರ್. ವಿಶ್ವನಾಥ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಡಿಸಿಎಂ ಡಿಕೆ ಶಿವಕುಮಾರ್  ಪುತ್ರನ ಹೆಸರಿರಬಹುದು, ಕೂಡಲೇ ಹೆಸರನ್ನು ಬದಲಿಸುವಂತೆ ಆಗ್ರಹಿಸಿದ್ದಾರೆ.

ಬೆಂಗಳೂರು (ನ.21): ಬೆಂಗಳೂರು ನಗರದ ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಒಂದು ವಾರ್ಡ್‌ಗೆ 'ಆಕಾಶ್' ಎಂದು ಮರುನಾಮಕರಣ ಮಾಡಿರುವ ಕುರಿತು ತೀವ್ರ ವಿವಾದ ಭುಗಿಲೆದ್ದಿದೆ. ಈ ನಾಮಕರಣಕ್ಕೆ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕೂಡಲೇ ಹೆಸರನ್ನು ಬದಲಿಸುವಂತೆ ಆಗ್ರಹಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಕಾಶ್ ಯಾರು? ಇವರ ಸಾಧನೆ ಏನು?

ಯಲಹಂಕ ವ್ಯಾಪ್ತಿಯಲ್ಲಿನ 3ನೇ ವಾರ್ಡ್‌ಗೆ ಹೊಸದಾಗಿ 'ಆಕಾಶ್' ಎಂಬ ಹೆಸರನ್ನು ಇಡಲಾಗಿದೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಎಸ್ ಆರ್ ವಿಶ್ವನಾಥ್, 'ಆಕಾಶ್ ಎಂದರೆ ಯಾರು? ಇವರ ಸಾಧನೆಯಾದರೂ ಏನು? ಇದು ಯಾವ ವ್ಯಕ್ತಿಗೆ ಸಂಬಂಧಿಸಿದ ಹೆಸರು?' ಎಂದು ಪ್ರಶ್ನಿಸಿದ್ದಾರೆ.

ನನಗೆ ಬಂದ ಸುದ್ದಿಗಳ ಪ್ರಕಾರ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಪುತ್ರನ ಹೆಸರು ಕೂಡ ಆಕಾಶ್ ಎಂಬುದಾಗಿ ತಿಳಿದುಬಂದಿದೆ. ಆದರೆ, ಡಿಕೆ ಶಿವಕುಮಾರ್ ಅವರು ಈ ರೀತಿಯ ವೈಯಕ್ತಿಕ ಹೆಸರುಗಳನ್ನು ಇಡಲು ಒಪ್ಪುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.

ನಾಮಕರಣ ಬದಲಾವಣೆಗೆ ಒತ್ತಾಯ:

ಯಲಹಂಕದ 3ನೇ ವಾರ್ಡ್‌ಗೆ ಇಡಲಾಗಿರುವ 'ಆಕಾಶ್' ಎಂಬ ಹೆಸರನ್ನು ಕೂಡಲೇ ತೆಗೆದು, ಅದನ್ನು ವೆಂಕಟಾಲ ಅಥವಾ ಮಾರುತಿ ನಗರ ವಾರ್ಡ್ ಎಂದು ಮರುನಾಮಕರಣ ಮಾಡಬೇಕು ಎಂದು ಎಸ್ ಆರ್ ವಿಶ್ವನಾಥ್ ಆಗ್ರಹಿಸಿದ್ದಾರೆ.

ಅಲ್ಲದೆ, ಈ ಮರುನಾಮಕರಣ ಪ್ರಕ್ರಿಯೆಯಲ್ಲಿ ಮೊದಲಿದ್ದ 1ನೇ ವಾರ್ಡ್‌ಗೆ ರಾಜ ಕೆಂಪೇಗೌಡ ವಾರ್ಡ್ ಮತ್ತು 2ನೇ ವಾರ್ಡ್‌ಗೆ ಚೌಡೇಶ್ವರಿ ವಾರ್ಡ್ ಎಂದು ತಿದ್ದುಪಡಿ ಮಾಡಲು ಸಹ ಅವರು ಒತ್ತಾಯಿಸಿದ್ದಾರೆ.

ಜಿಬಿಎ ವಾರ್ಡ್‌ಗಳ ಮರುನಾಮಕರಣ ವಿಚಾರದಲ್ಲಿ ಡಿಕೆ ಶಿವಕುಮಾರ್ ಅವರ ಪುತ್ರನ ಹೆಸರನ್ನು ಇಡಲಾಗಿದೆ ಎಂಬ ಆರೋಪವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಆಡಳಿತ ಪಕ್ಷ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.