ಯುವ ನಿಧಿ ಯೋಜನೆಯಡಿ ಪದವಿ, ಸ್ನಾತಕೋತ್ತರ, ಡಿಪ್ಲೋಮಾ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ನೋಂದಣಿ ಆರಂಭವಾಗಿದ್ದು, ಸೇವಾಸಿಂಧು, ಗ್ರಾಮ್ ಒನ್, ಬಾಪೂಜಿ ಸೇವಾ ಕೇಂದ್ರ ಮುಂತಾದ ಕಡೆ ಅರ್ಜಿ ಸಲ್ಲಿಸಬಹುದು. ಬೆಂಗಳೂರಿನಲ್ಲಿ 2 ಲಕ್ಷ ಪದವೀಧರರಿದ್ದು, ಕೇವಲ 20 ಸಾವಿರ ನೋಂದಣಿ ಮಾಡಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 18005997154 ಸಂಪರ್ಕಿಸಿ.

ಬೆಂಗಳೂರು (ಡಿ.13): ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾದ 'ಯುವ ನಿಧಿ' ಯೋಜನೆಯಡಿ ನೋಂದಾಯಿಸಿಕೊಳ್ಳಲು ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಪ್ರಸಕ್ತ ಸಾಲಿನಲ್ಲಿ ತೇರ್ಗಡೆಯಾದ ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲೋಮಾ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ್.ಜಿ ತಿಳಿಸಿದರು.

ಬೆಂಗಳೂರು ನಗರ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಯುವ ನಿಧಿ ಯೋಜನೆಯ ಅಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳನ್ನು ನೋಂದಾಯಿಸುವ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಕರೆಯಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗೆ ಪರೀಕ್ಷೆ ತಯಾರಿ ನಡೆಸಲು ಹಾಗೂ ಉದ್ಯೋಗ ಸಿಗುವವರೆಗೆ ಯುವ ನಿಧಿ ಯೋಜನೆಯು ಸಹಾಯವಾಗಲಿದ್ದು, ಪ್ರತಿಯೊಬ್ಬರು ಈ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು. ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲಾತಿಗಳನ್ನು ನ್ಯಾಡ್ ಪೋರ್ಟನಲ್ಲಿ ತ್ವರಿತಗತಿಯಲ್ಲಿ ಅಳವಡಿಸಿ, ಯುವ ನಿಧಿ ನೋಂದಣಿಗೆ ಅನುಕೂಲವಾಗುವಂತೆ ಕ್ರಮ ವಹಿಸಿಬೇಕು. ಎಲ್ಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಹೆಲ್ಪ್ ಡೆಸ್ಕ್ ಹಾಗೂ ಅಧಿಕೃತ ವೆಬ್ ಸೈಟ್ ಗಳಲ್ಲಿ ಯುವ ನಿಧಿಯ ಬಗ್ಗೆ ಪ್ರಚಾರ ಮಾಡಬೇಕು ಎಂದು ಸೂಚಿಸಿದರು.

ಇದನ್ನೂ ಓದಿ: 2025-26ರ ಕರ್ನಾಟಕ ಶಾಲಾ ರಜಾದಿನಗಳ ಪಟ್ಟಿ ಬಿಡುಗಡೆ

ರಾಜ್ಯದ 5 ಲಕ್ಷ ಪದವೀಧರರಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ರಾಜ್ಯದಲ್ಲೇ ಹೆಚ್ಚು ಅಂದರೆ 2 ಲಕ್ಷ ಪದವೀಧರರು ಹೊರ ಬರುತ್ತಿದ್ದಾರೆ. ಇವರಲ್ಲಿ ಶೇ.10ರಷ್ಟು ಅಂದರೆ 20 ಸಾವಿರ ಪದವೀಧರರು ಮಾತ್ರ ಯುವ ನಿಧಿ ಯೋಜನೆಯಡಿ ನೋಂದಣಿ ಮಾಡಿಸಿದ್ದಾರೆ. ಯುವ ನಿಧಿ ಯೋಜನೆಯ ನೋಂದಣಿಯನ್ನು ಹೆಚ್ಚಿಸಲು ಕ್ರಮವಹಿಸಬೇಕು ಎಂದು ಹೇಳಿದರು.

2024ನೇ ವರ್ಷದಲ್ಲಿ ತೇರ್ಗಡೆಯಾದ ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲೋಮಾ ಅಭ್ಯರ್ಥಿಗಳು ಅರ್ಹರಾಗಿದ್ದು, ಸೇವಾ ಸಿಂಧು ಪೋರ್ಟಲ್: https://sevasindhugs.karnataka.gov.in ಅಥವಾ ಗ್ರಾಮ್ ಒನ್ ಸೇವಾ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ: 18005997154 ಅನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು. ಇನ್ನು ಈ ಅರ್ಜಿ ಲಿಂಕ್ ಬಳಸಿ ಕರ್ನಾಟಕ ರಾಜ್ಯದ ಯಾವುದೇ ಭಾಗದ, ಯಾವುದೇ ಜಿಲ್ಲೆ, ತಾಲೂಕಿನ ವಿದ್ಯಾರ್ಥಿಗಳೂ ಕೂಡ ಹೆಸರು ನೋಂದಣಿ ಮಾಡಿಸಬಹುದು.