ಕೊರೋನಾ ಮಹಾಮಾರಿಯ ಅಬ್ಬರ ಇನ್ನಷ್ಟು ಜೋರಾಗಿದ್ದು, ಭಾನುವಾರ ದಾಖಲೆಯ 19,067 ಪ್ರಕರಣ ದೃಢಪಟ್ಟಿದೆ ಹಾಗೂ 81 ಮಂದಿ ಮೃತರಾಗಿದ್ದಾರೆ. 

 ಬೆಂಗಳೂರು (ಏ.19): ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ಹಿಡಿತ ಇನ್ನಷ್ಟು ಬಿಗಿಗೊಳ್ಳುತ್ತಿದ್ದು, ಭಾನುವಾರ ದಾಖಲೆಯ 19,067 ಪ್ರಕರಣ ದೃಢಪಟ್ಟಿದೆ ಹಾಗೂ 81 ಮಂದಿ ಮೃತರಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸೋಂಕಿನ ಪ್ರಕರಣ, ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಜನರಲ್ಲಿ ಆತಂಕಕಾರಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"

ಹೊಸ ಸೋಂಕಿನ ಪ್ರಕರಣಗಳೊಂದಿಗೆ ರಾಜ್ಯದ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 1.16 ಲಕ್ಷ ತಲುಪಿದೆ. ಈ ಪೈಕಿ 620 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4,603 ಮಂದಿ ಗುಣಮುಖರಾಗಿದ್ದಾರೆ.

ಭಾನುವಾರ ದಾಖಲೆಯ 1.45 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದೆ. ರಾಜ್ಯದ ಪಾಸಿಟಿವಿಟಿ ದರ ಶೇ.13.09ಕ್ಕೆ ಜಿಗಿದಿದೆ. ಈವರೆಗೆ ಒಟ್ಟು 2.35 ಕೋಟಿ ಕೋವಿಡ್‌ ಪರೀಕ್ಷೆ ನಡೆದಿದೆ.

ನಿಲ್ಲದ ಕೊರೋನಾ ಕಾಟ: ಇಂದಿನಿಂದ ಈ ನಗರಗಳಲ್ಲಿ ನೈಟ್‌ ಕರ್ಫ್ಯೂ ಜಾರಿ..!

ಬೆಂಗಳೂರಲ್ಲೇ 60 ಸಾವು: ಮರಣವನ್ನಪ್ಪಿರುವ 81 ಮಂದಿಯಲ್ಲಿ 60 ಮಂದಿ ಬೆಂಗಳೂರು ನಗರ ವ್ಯಾಪ್ತಿಯವರು. ಉಳಿದಂತೆ ಮೈಸೂರು, ಧಾರವಾಡ ತಲಾ 3, ಬಳ್ಳಾರಿ, ಕೊಪ್ಪಳ, ಉತ್ತರ ಕನ್ನಡ, ವಿಜಯಪುರ, ಯಾದಗಿರಿ ತಲಾ 2, ತುಮಕೂರು, ಮಂಡ್ಯ, ಚಾಮರಾಜನಗರ, ಬೀದರ್‌ ಮತ್ತು ಬೆಳಗಾವಿಯಲ್ಲಿ ತಲಾ ಒಬ್ಬರು ಸೋಂಕಿನಿಂದ ಮರಣವನ್ನಪ್ಪಿದ್ದಾರೆ.

24ಜಿಲ್ಲೆಗಳಲ್ಲಿ ಶತಕ: ರಾಜ್ಯದ 30 ಜಿಲ್ಲೆಗಳಲ್ಲಿ 6 ಜಿಲ್ಲೆಗಳಲ್ಲಿ ಮಾತ್ರ 100ಕ್ಕಿಂತ ಕಡಿಮೆ ಪ್ರಕರಣ ವರದಿಯಾಗಿದ್ದು ಉಳಿದ 24 ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಹೊಸ ಪ್ರಕರಣ ವರದಿಯಾಗಿದೆ. ಬೆಂಗಳೂರಿನಲ್ಲಿ ದಾಖಲೆಯ 12,793 ಪ್ರಕರಣ ದಾಖಲಾಗಿದೆ. ಉಳಿದಂತೆ ಮೈಸೂರು 777, ಕಲಬುರಗಿ 671, ತುಮಕೂರು 494, ಬೀದರ್‌ 469, ಹಾಸನ 348, ಮಂಡ್ಯ 338, ದಕ್ಷಿಣ ಕನ್ನಡ 272, ಧಾರವಾಡ 265, ಬೆಂಗಳೂರು ಗ್ರಾಮಾಂತರ 245, ಬಳ್ಳಾರಿ 238, ವಿಜಯಪುರ 200, ಚಿಕ್ಕಬಳ್ಳಾಪುರ 190, ಕೋಲಾರ 175, ಉಡುಪಿ 152, ಶಿವಮೊಗ್ಗ 156, ದಾವಣಗೆರೆ 133, ಬೆಳಗಾವಿ 129, ರಾಮನಗರ 122, ಉತ್ತರ ಕನ್ನಡ ಮತ್ತು ಬಾಗಲಕೋಟೆ ತಲಾ 104, ಚಿತ್ರದುರ್ಗ ಮತ್ತು ಚಾಮರಾಜನಗರ ತಲಾ 102 ಪ್ರಕರಣ ಧೃಢಪಟ್ಟಿದೆ. ಕೊಡಗಿನಲ್ಲಿ 44 ಪ್ರಕರಣ ಬೆಳಕಿಗೆ ಬಂದಿದ್ದು ರಾಜ್ಯದ ಕನಿಷ್ಠ ಪ್ರಕರಣವಾಗಿದೆ.

ರಾಜ್ಯದಲ್ಲಿ ಈವರೆಗೆ ಒಟ್ಟು 11.61 ಲಕ್ಷ ಕೋವಿಡ್‌ ಪ್ರಕರಣ ವರದಿಯಾಗಿದ್ದು 10.14 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಒಟ್ಟು 13,351 ಮಂದಿ ಮೃತಪಟ್ಟಿದ್ದಾರೆ.