ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ(ಏ.5): ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಬಿಜೆಪಿ ‌ಕಾರ್ಯಕರ್ತ ಸಾಯಿ ಪ್ರಸಾದ್ ನನ್ನು ವಶಕ್ಕೆ ಪಡೆದಿರುವ ಎನ್ ಐಎ ಅಧಿಕಾರಿಗಳು ವಿಚಾರಣೆಗೆ ಕರೆದೊಯ್ದಿದ್ದಾರೆಂದು ವರದಿ ತಿಳಿಸಿದೆ. ಆ ಬಳಿಕ ಸ್ಪಷ್ಟನೆ ನೀಡಿರುವ ಎನ್‌ಐಎ, ಪ್ರಕರಣದಲ್ಲಿ ಈತ ಆರೋಪಿಯಲ್ಲ. ಆತನನ್ನು ಸಾಕ್ಷಿಯಾಗಿ ಪಡೆದುಕೊಂಡಿರುವುದಾಗಿ ತಿಳಿಸಿದೆ.

ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಕಳೆದ ವಾರ ತೀರ್ಥಹಳ್ಳಿಯಲ್ಲಿ ದಾಳಿ ನಡೆಸಿದ್ದ ಎನ್ ಐಎ ಅಧಿಕಾರಿಗಳು ಇಬ್ಬರು ಮುಸ್ಲಿಂ ಯುವಕರ ಮನೆಗಳು ಹಾಗು ಮೊಬೈಲ್ ಅಂಗಡಿ ಶೋಧ ನಡೆಸಿದ್ದರು. ಇದೀಗ ಮುಸ್ಲಿಂ ಯುವಕರ ಜೊತೆ ಸಂಪರ್ಕದಲ್ಲಿದ್ದ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ, ಹಿಂದೂಗಳ ಹೆಸರಿಟ್ಟುಕೊಂಡು ಸಂಚು..!

ಕೆಫೆ ಬಾಂಬ್‌ ಸಂಚುಕೋರಗೆ ಬಾಡಿಗೆ ಮನೆ ಕೊಡಿಸಿದ್ದು ಚಿಕ್ಕಮಗಳೂರು ಸಿಪಿಐ
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದ ಪ್ರಮುಖ ಸಂಚುಕೋರನ ತಾಯಿಗೆ ಚಿಕ್ಕಮಗಳೂರಿನಲ್ಲಿ ಬಾಡಿಗೆ ಮನೆ ಕೊಡಿಸಲು ಸಹಾಯ ಮಾಡಿದ್ದು ಪೊಲೀಸ್‌ ಇನ್ಸ್‌ಪೆಕ್ಟರ್‌ ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಬಾಂಬ್‌ ಸ್ಫೋಟದ ಪ್ರಮುಖ ಸಂಚುಕೋರ ಮುಜಮಿಲ್‌ ಶರೀಫ್‌ ಮೂಲತಃ ಕಳಸದವನು. ಮುಜಮಿಲ್‌ ತನ್ನ ತಾಯಿಯನ್ನು ಚಿಕ್ಕಮಗಳೂರಿಗೆ ಕರೆತಂದು ಬಾಡಿಗೆ ಮನೆಯಲ್ಲಿರಿಸಲು ಸಹಾಯ ಮಾಡಿದ್ದು ಇಲ್ಲಿನ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಂದು ಹೇಳಲಾಗುತ್ತಿದೆ. ದುಬೈ ನಗರದಲ್ಲಿ ಮುಜಮಿಲ್‌ಗೆ ಇನ್‌ಸ್ಪೆಕ್ಟರ್‌ ಬಾಡಿಗೆ ಮನೆ ಹುಡುಕಿಕೊಟ್ಟಿದ್ದರು. ಆ ಮನೆಯಲ್ಲಿ ಮುಜಮಿಲ್‌ನ ತಾಯಿ ವಾಸವಾಗಿದ್ದರು. ಹೀಗಾಗಿ ಮುಜಮಿಲ್‌ಗೂ ಸಿಪಿಐಗೂ ಆತ್ಮೀಯತೆ ಇತ್ತಾ ಎಂಬ ಸಂಶಯದ ಮೇರೆಗೆ ಇದೀಗ ಸಿಪಿಐಗೆ ಎನ್‌ಐಎ ನೋಟೀಸ್‌ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ, ಹಿಂದೂಗಳ ಹೆಸರಿಟ್ಟುಕೊಂಡು ಸಂಚು..!

ತಮಿಳುನಾಡಿನಲ್ಲಿ ಕಚ್ಚಾ ಬಾಂಬ್ ತಯಾರಿಸಿದ ಶಂಕೆ!
ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಮುನ್ನ ತಮಿಳುನಾಡಿನ ಕೃಷ್ಣಗಿರಿ ಅರಣ್ಯ ಪ್ರದೇಶದಲ್ಲಿ ಕಚ್ಚಾ ಬಾಂಬ್ (ಐಇಡಿ) ಅನ್ನು ಶಂಕಿತ ಐಸಿಸ್‌ ಉಗ್ರರು ತಯಾರಿಸಿರಬಹುದು ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶಂಕೆ ವ್ಯಕ್ತಪಡಿಸಿದೆ.

ನಾಲ್ಕು ವರ್ಷಗಳಿಂದ ಎನ್‌ಐಎ ಕೈ ಸಿಗದೆ ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಮುಸಾವೀರ್ ಹುಸೇನ್ ಶಾಜಿಬ್ ಹಾಗೂ ಅಬ್ದುಲ್ ಮತೀನ್ ತಾಹಾ, ಕೆಫೆ ಸ್ಫೋಟಕಕ್ಕೂ ಮುನ್ನ ತಮಿಳುನಾಡಿನಲ್ಲಿ ಆಶ್ರಯ ಪಡೆದಿದ್ದರು. ಹಾಗಾಗಿ ಈ ವಿಧ್ವಂಸಕ ಕೃತ್ಯಕ್ಕೆ ಬಳಸಲಾದ ಕಚ್ಚಾ ಬಾಂಬ್ ಅನ್ನು ತಮಿಳುನಾಡಿನ ಕೃಷ್ಣಗಿರಿ ಬಳಿ ತಯಾರಿಸಿರಬಹುದು ಎನ್ನಲಾಗಿದೆ.

ಮಾ.1 ರಂದು ರಾಮೇಶ್ವರಂ ಕೆಫೆಗೆ ತಮಿಳುನಾಡು ಕಡೆಯಿಂದಲೇ ಮುಸಾವೀರ್ ಹುಸೇನ್ ಶಾಜಿಬ್‌ ಬಂದಿದ್ದ. ಸಿಲ್ಕ್ ಬೋರ್ಡ್‌ ಜಂಕ್ಷನ್‌ನಲ್ಲಿಳಿದು ಅಲ್ಲಿಂದ ಕೆಫೆಗೆ ಬಿಎಂಟಿಸಿ ಬಸ್‌ನಲ್ಲಿ ಆತ ಪ್ರಯಣಿಸಿದ್ದ. ಈ ಸಂಗತಿ ಬಿಬಿಎಂಟಿಸಿ ಬಸ್ಸಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಬೆಳಕಿಗೆ ಬಂದಿತ್ತು ಎಂದು ಮೂಲಗಳು ಹೇಳಿವೆ.

ನಟ್‌, ಬೋಲ್ಟ್‌ಗಳು, ಎಲೆಕ್ಟ್ರಿಕ್ ಸರ್ಕಿಟ್‌, ಅಮೋನಿಯಂ ನೈಟ್ರೇಟ್‌ ಹಾಗೂ ಟೈಮರ್‌ ಬಳಸಿ ಕಚ್ಚಾ ಬಾಂಬ್ (ಐಇಡಿ) ಅನ್ನು ದುಷ್ಕರ್ಮಿಗಳು ತಯಾರಿಸಿದ್ದರು. ಕಾಲೇಜು ವಿದ್ಯಾರ್ಥಿಗಳು ಪ್ರಾಜೆಕ್ಟ್‌ಗೆ ಬಳಸುವ ಹಾಗೂ ಆನ್‌ಲೈನ್‌ ಸೇರಿದಂತೆ ಸಾರ್ವಜನಿಕವಾಗಿ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್‌ ಸರ್ಕಿಟ್ ಬೋರ್ಡ್‌ ಅನ್ನೇ ಬಾಂಬ್ ತಯಾರಿಕೆಗೆ ಬಳಸಲಾಗಿದೆ. ಹೀಗಾಗಿ ಈ ಕಚ್ಚಾ ಬಾಂಬ್ ತಯಾರಿಕೆಗೆ 5 ರಿಂದ 10 ಸಾವಿರ ವೆಚ್ಚವಾಗಿರಬಹುದು ಎಂದು ತಿಳಿದು ಬಂದಿದೆ.