ಧಾರಾಕಾರ ಮಳೆ: ಚಿಕ್ಕೋಡಿ ರಸ್ತೆ ಮುಳುಗಡೆ, 50 ಮನೆಗಳಿಗೆ ನುಗ್ಗಿದ ನೀರು
ಬೆಳಗಾವಿ ಜಿಲ್ಲೆಯ ನಾನಾ ಕಡೆ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ಸವಳಿ ಹಳ್ಳ ಮೈದುಂಬಿ ಹರಿದು, ಅಂಕಲಿ-ಚಿಕ್ಕೋಡಿ ರಾಜ್ಯ ಹೆದ್ದಾರಿ ಮುಚ್ಚಿಹೋಗಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.
ಬೆಂಗಳೂರು(ಅ.23): ರಾಜ್ಯದಲ್ಲಿ ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿದ್ದ ವರುಣ ಶನಿವಾರ ಬಹುತೇಕ ಕಡೆ ಬಿಡುವು ನೀಡಿದ್ದಾನೆ. ಆದರೆ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಳಗಾವಿ ಜಿಲ್ಲೆ ಸೇರಿ ಹಲವೆಡೆ ಜನಜೀವನ ಅಸ್ತವ್ಯಸ್ತವಾದ ವರದಿಯಾಗಿದೆ.
ಬೆಳಗಾವಿ ಜಿಲ್ಲೆಯ ನಾನಾ ಕಡೆ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ಸವಳಿ ಹಳ್ಳ ಮೈದುಂಬಿ ಹರಿದು, ಅಂಕಲಿ-ಚಿಕ್ಕೋಡಿ ರಾಜ್ಯ ಹೆದ್ದಾರಿ ಮುಚ್ಚಿಹೋಗಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ರಾಯಬಾಗ ತಾಲೂಕಿನ ದಿಗ್ಗೆವಾಡಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ.
ತುಮಕೂರಲ್ಲಿ ನಿಲ್ಲದ ಮಳೆ: ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ಗೆ ನುಗ್ಗಿದ ನೀರು..!
ಬೈಕ್ ಸವಾರನನ್ನು ರಕ್ಷಿಸಿದ ಸ್ಥಳೀಯರು:
ತುಮಕೂರು ಜಿಲ್ಲೆಯಲ್ಲಿ ಕೆರೆಗಳು ಕೋಡಿ ಬಿದ್ದು ರಸ್ತೆ ಮೇಲೆಲ್ಲಾ ನೀರು ಹರಿಯುತ್ತಿದೆ. ರಭಸವಾಗಿ ಹರಿಯುವ ಹಳ್ಳದ ನೀರಿನಲ್ಲಿ ಬೈಕ್ ಓಡಿಸಲು ಹೋಗಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಸ್ಥಳೀಯರು ಪ್ರಾಣಾಪಾಯದಿಂದ ರಕ್ಷಿಸಿದ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕು ಲಕ್ಕೇನಹಳ್ಳಿಯಲ್ಲಿ ನಡೆದಿದೆ. ಸ್ಥಳೀಯರು ಹಗ್ಗದ ಸಹಾಯದಿಂದ ಆತನನ್ನು ರಕ್ಷಿಸಿದ್ದಾರೆ. ಆದರೆ ಬೈಕ್ ನೀರುಪಾಲಾಗಿದೆ. ಇನ್ನು ಶನಿವಾರ ಸಂಜೆ ಉತ್ತರಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಅರ್ಧತಾಸಿಗೂ ಅಧಿಕ ಕಾಲ ಮಳೆ ಸುರಿದಿದೆ.