ಮೈ ಕೊರೆಯುವ ಚಳಿ ಜೊತೆಗೆ ನಗರದಲ್ಲಿ ತುಂತುರು ಮಳೆ ಆರಂಭವಾಗಿದ್ದು, ಮಹಾಮಳೆಯ ನಂತರ ರಾಜ್ಯದಲ್ಲಿ ಪ್ರಾರಂಭವಾದ ಚಳಿಯ ಆರ್ಭಟ ಹೆಚ್ಚಾಗಿದೆ. ಹೌದು! ರಾಜ್ಯದಲ್ಲಿ ಚಳಿಗಾಲಕ್ಕೆ ಜನರು ತತ್ತರಿಸುವಂತೆ ಮಾಡಿದ್ದು, ಬೆಳಗ್ಗೆಯೇ ದಟ್ಟವಾದ ಮಂಜು ಆವರಿಸಿಕೊಳ್ಳುತ್ತಿದೆ. 

ಬೆಂಗಳೂರು (ನ.12): ಮೈ ಕೊರೆಯುವ ಚಳಿ ಜೊತೆಗೆ ನಗರದಲ್ಲಿ ತುಂತುರು ಮಳೆ ಆರಂಭವಾಗಿದ್ದು, ಮಹಾಮಳೆಯ ನಂತರ ರಾಜ್ಯದಲ್ಲಿ ಪ್ರಾರಂಭವಾದ ಚಳಿಯ ಆರ್ಭಟ ಹೆಚ್ಚಾಗಿದೆ. ಹೌದು! ರಾಜ್ಯದಲ್ಲಿ ಚಳಿಗಾಲಕ್ಕೆ ಜನರು ತತ್ತರಿಸುವಂತೆ ಮಾಡಿದ್ದು, ಬೆಳಗ್ಗೆಯೇ ದಟ್ಟವಾದ ಮಂಜು ಆವರಿಸಿಕೊಳ್ಳುತ್ತಿದೆ. ಬಯಲು ಪ್ರದೇಶಗಳಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗುತ್ತಿದೆ. ಮಧ್ಯಾಹ್ನದ ಹೊತ್ತು ಬಿಸಿಲಿನ ಜೊತೆ ತಣ್ಣನೆ ಗಾಳಿ ಜೋರಾಗಿಯೇ ಬೀಸುತ್ತಿದೆ. ವಾತಾವರಣದಲ್ಲಿನ ತೇವಾಂಶ ಬಂಗಾಳ ಕೊಲ್ಲಿಯಲ್ಲಿ ತೀವ್ರಗೊಂಡಿದೆ. ಇದು ಈಶಾನ್ಯ ದಿಕ್ಕಿನ ಕಡೆಗೆ ಸಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಮೋಡ ರಹಿತ ಆಕಾಶ ಸೃಷ್ಟಿಯಾಗುತ್ತಿದೆ. 

Add Asianetnews Kannada as a Preferred SourcegooglePreferred

ಮೋಡ ಇಲ್ಲದೇ ಇರುವುದರಿಂದ ಭೂಮಿಯಿಂದ ಹೊರಸೂಸುವ ಶಾಖ ಎಲ್ಲ ಕಡೆ ಹರಡುತ್ತದೆ. ಇದು ಚಳಿಯನ್ನು ಹೆಚ್ಚಿಸುತ್ತಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಚಳಿ ಅಧಿಕವಾಗಿದೆ. ರಾಜಧಾನಿಯಲ್ಲಿ ಕನಿಷ್ಠ ದಾಖಲೆಯ ತಾಪಮಾನ ದಾಖಲಾಗಿದೆ. ಈ ವರ್ಷದ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳ ಮೊದಲೆರಡು ವಾರಗಳಲ್ಲಿ ದಾಖಲೆ ಮಳೆಯಾಗಿತ್ತು. ಈ ಹಿನ್ನೆಲೆ ಕಾರ್ತಿಕ ಮಾಸ ಆರಂಭಕ್ಕೂ ಮುನ್ನವೇ ರಾಜಧಾನಿಯಲ್ಲಿ ಚಳಿ ಸೃಷ್ಟಿಯಾಗಿತ್ತು. ಸಹಜವಾಗಿ ಬೆಳಗ್ಗೆ ಎಂಟು ಗಂಟೆಯವರೆಗೂ ಚಳಿ ಇರಲಿದೆ. ಸಂಜೆ ಆರು ಗಂಟೆಗೆ ವಾತಾವರಣ ತಾಪಮಾನ ಇಳಿಕೆಯತ್ತ ಸಾಗುತ್ತಿದೆ ಎಂದು ತಿಳಿಸಿದ್ದಾರೆ

2ನೇ ಮದುವೆ ವೇಳೆ ರಾದ್ಧಾಂತ: ಮೊದಲ ಪತ್ನಿ ಜತೆ ಯೋಧ ಆತ್ಮಹತ್ಯೆ

ಎಲ್ಲೆಲ್ಲಿ ಎಷ್ಟು ತಾಪಮಾನ ದಾಖಲು: ಬೆಂಗಳೂರಿನಲ್ಲಿ 28 - 17 ಡಿಗ್ರಿ, ಮೈಸೂರು 29 - 18, ಚಾಮರಾಜನಗರ 29 - 18, ರಾಮನಗರ 30-18, ಮಂಡ್ಯ 30-18, ಬೆಂಗಳೂರು ಗ್ರಾಮಾಂತರ 28-17, ಚಿಕ್ಕಬಳ್ಳಾಪುರ 27-15, ಕೋಲಾರ 28-17 ಡಿಗ್ರಿಯಷ್ಟು ತಾಪಮಾನ ದಾಖಲಾಗಿದೆ. 

3 ದಿನ ಮೋಡಗಳದ್ದೇ ಆಟ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಮೂರ್ನಾಲ್ಕು ದಿನ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಬಂಗಾಳಕೊಲ್ಲಿನ ವಾಯುಭಾರ ಕುಸಿತದ ನೇರ ಪರಿಣಾಮ ಬೆಂಗಳೂರು ಮತ್ತದರ ಸುತ್ತಲಿನ ಪ್ರದೇಶಗಳ ಮೇಲಾಗಿದ್ದು, ಭಾರಿ ಮಳೆ ಬಾರದಿದ್ದರೂ ಮೋಡ ಕವಿದ ವಾತಾವರಣ ಇನ್ನು ಕೆಲ ದಿನ ನೆಲೆಸಲಿದೆ.

ಶುಕ್ರವಾರ ದಿನವಿಡೀ ನಗರದಲ್ಲಿ ಸೂರ್ಯನ ದರ್ಶನವೇ ಆಗಲಿಲ್ಲ. ದಟ್ಟಮೋಡ ಆವರಿಸಿತ್ತು. ಇದರ ನಡುವೆ ಜಿಟಿಜಿಟಿ ಮಳೆಯು ಕೆಲವೆಡೆ ಸುರಿಯುತ್ತಿತ್ತು. ಹಾಗೆಯೇ ನಿನ್ನೆಯಿಂದ ಬೀಸುತ್ತಿರುವ ತಣ್ಣನೆಯ ಗಾಳಿಯು ನಗರದಲ್ಲಿ ಚಳಿಯ ವಾತಾವರಣಕ್ಕೆ ಕಾರಣವಾಗಿದ್ದು, ಮುಂಜಾನೆ ಚಳಿಯ ತೀಕ್ಷ್ಣತೆ ತುಸು ಹೆಚ್ಚೆ ಇತ್ತು. ಚಳಿಯಿಂದ ರಕ್ಷಿಸಿಕೊಳ್ಳಲು ಜನರು ಸ್ವೆಟರ್‌, ಜರ್ಕಿನ್‌, ಪೂರ್ಣ ತೋಳಿನ ಬಟ್ಟೆಗಳನ್ನು ಹಾಕಿಕೊಂಡೆ ಮನೆಯಿಂದ ಹೊರ ಬರುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಜೊತೆಗೆ ಬೆಚ್ಚನೆಯ ತಿಂಡಿ ತಿನಿಸು, ಪಾನೀಯಗಳನ್ನು ಸೇವಿಸಿ ಬೆಚ್ಚನೆ ಇರುವ ಪ್ರಯತ್ನ ನಡೆಸುತ್ತಿದ್ದರು. 

ಸಾಮಾನ್ಯವಾಗಿ ದೀಪಾವಳಿಯ ನಂತರದ ದಿನಗಳಲ್ಲಿ ಚಳಿ ಹೆಚ್ಚಾಗುವುದು ವಾಡಿಕೆ. ಆದರೆ ಈ ಬಾರಿ ಉತ್ತರ ಮತ್ತು ಈಶಾನ್ಯ ಭಾರತದಿಂದ ಶೀತ ಮಾರುತ ಬೀಸುತ್ತಿರುವುದು ಮತ್ತು ಬಂಗಾಳಕೊಲ್ಲಿಯಲ್ಲಿ ಈಗಾಗಲೇ ಕಡಿಮೆ ಒತ್ತಡ ಪ್ರದೇಶ ಸೃಷ್ಟಿಯಾಗಿ ತಮಿಳುನಾಡಿನ ಅನೇಕ ಕಡೆ ಭಾರಿ ಮಳೆ ಆಗುತ್ತಿರುವುದು ಹಾಗೂ ಇನ್ನು ಮೂರ್ನಾಲ್ಕು ದಿನದಲ್ಲಿ ಬಂಗಾಳ ಕೊಲ್ಲಿಯಲ್ಲಿ ಇನ್ನೊಂದು ವಾಯುಭಾರ ಸೃಷ್ಟಿಗೆ ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ. ಇದರಿಂದ ಚಳಿ ಹೆಚ್ಚಿದೆ ಎಂದು ಭಾರತೀಯ ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಎ.ಪ್ರಸಾದ್‌ ಮಾಹಿತಿ ನೀಡುತ್ತಾರೆ.

ಸ್ಯಾನಿ​ಟೈ​ಸರ್‌ ಬಾಟ​ಲಿ ಸ್ಫೋಟ: ನಾಲ್ವರು ವಿದ್ಯಾರ್ಥಿಗಳು ಅಸ್ವಸ್ಥ

ಹಾಗೆಯೇ ಈ ಬಾರಿ ಬೆಂಗಳೂರು ಮತ್ತದರ ಸುತ್ತಲಿನ ಪ್ರದೇಶದಲ್ಲಿ ವಾಡಿಕೆ ಮೀರಿ ಮಳೆಯಾಗಿದೆ. ಇದರಿಂದಾಗಿ ಕೆರೆಕುಂಟೆ, ಜಲಾಶಯಗಳು, ನದಿ, ಹಳ್ಳಗಳು ತುಂಬಿ ತುಳುಕುತ್ತಿವೆ. ಜೊತೆಗೆ ಮಣ್ಣಿನ ಮೇಲ್ಪದರದಲ್ಲೇ ತೇವಾಂಶವು ಇದೆ. ಈ ನೀರಿನ ಅಂಶವನ್ನು ಹಾದು ಬೀಸುವ ಗಾಳಿ ಹೆಚ್ಚು ಶೀತ ಗುಣ ಹೊಂದಿರುತ್ತದೆ. ಇದರಿಂದಾಗಿ ಈ ವರ್ಷ ಹೆಚ್ಚು ಚಳಿ ಇರುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ.