ರಾಜ್ಯದಲ್ಲಿ ಒಬ್ಬ ಸಿಎಂ ಮತ್ತು ಒಬ್ಬ ಸೂಪರ್‌ ಸಿಎಂ ಇದ್ದಾರೆ. ಶಿವಕುಮಾರ್‌ ಸೂಪರ್‌ ಸಿಎಂ ಎಂದು ಬೊಮ್ಮಾಯಿ ಹೇಳಿದರು.

ಬೆಂಗಳೂರು(ಆ.11): ‘ಬಿಬಿಎಂಪಿ ಗುತ್ತಿಗೆದಾರರ ಸಂಘದವರು ಕಾಂಗ್ರೆಸ್‌ ಸರ್ಕಾರದಲ್ಲಿ ಶೇ.65ರಷ್ಟು ಕಮಿಶನ್‌ ಕೇಳುತ್ತಿದ್ದಾರೆ ಎಂಬ ಮಾಹಿತಿಯನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗಮನಕ್ಕೆ ತಂದಿದ್ದಾರೆ. ರಾಹುಲ್‌ ಗಾಂಧಿ ಭ್ರಷ್ಟಾಚಾರ ಸಹಿಸದಿದ್ದಲ್ಲಿ ತಕ್ಷಣ ಮಧ್ಯಪ್ರವೇಶಿಸಿ ಗುತ್ತಿಗೆದಾರರ ಬಾಕಿ ಬಿಲ್‌ ಬಿಡುಗಡೆಗೆ ಸೂಚಿಸಬೇಕು. ಇಲ್ಲದಿದ್ದರೆ ಕರ್ನಾಟಕ ಕಾಂಗ್ರೆಸ್‌ನ ಎಟಿಎಂ ಎನ್ನುವುದು ಸಾಬೀತಾದಂತೆ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗುರುವಾರ ತಮ್ಮನ್ನು ಭೇಟಿಯಾದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಮನವಿ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಹೈಕಮಾಂಡ್‌ ಭ್ರಷ್ಟಾಚಾರ ಸಹಿಸುವುದಿಲ್ಲ ಅಂತ ರಾಹುಲ್‌ ಗಾಂಧಿ ಹೇಳಿದ್ದಾರೆ. ಆದರೆ, ಗುತ್ತಿಗೆದಾರರು ರಾಹುಲ್‌ ಗಾಂಧಿಗೆ ಟ್ವೀಟ್‌ ಮಾಡಿ, ನಿಮ್ಮ ಸರ್ಕಾರ ಶೇ.65ರಷ್ಟುಕಮಿಶನ್‌ ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ರಾಹುಲ್‌ ಗಾಂಧಿಯವರು ಭ್ರಷ್ಟಾಚಾರದ ಬಗ್ಗೆ ಝಿರೋ ಟಾಲೆರೆನ್ಸ್‌ ಇದ್ದರೆ ತಕ್ಷಣ ಮಧ್ಯಪ್ರವೇಶಿಸಿ 24 ಗಂಟೆಯಲ್ಲಿ ಗುತ್ತಿಗೆದಾರರ ಬಾಕಿ ಹಣ ಕೊಡಿಸಲಿ ಎಂದು ಆಗ್ರಹಿಸಿದರು.

ವಿಪಕ್ಷ ನಾಯಕನ ಬೇಗ ನೇಮಿಸಿ: ಮಾಜಿ ಸಿಎಂ ಬೊಮ್ಮಾಯಿ

‘ಯಾರು ಕಳಪೆ ಕಾಮಗಾರಿ ಮಾಡಿದ್ದಾರೆ ಅದರ ಬಗ್ಗೆ ತನಿಖೆ ನಡೆಸಲಿ. ಪ್ರಾಮಾಣಿಕವಾಗಿ ಕೆಲಸ ಮಾಡಿದವರ ಹಣ ಬಿಡುಗಡೆ ಮಾಡಬೇಕು. ಗುತ್ತಿಗೆದಾರರು ಕೆಲಸ ನಿಲ್ಲಿಸಿದರೆ ಬ್ರ್ಯಾಂಡ್‌ ಬೆಂಗಳೂರು ಸ್ಥಗಿತ ಆಗುತ್ತದೆ. ಕಮಿಶನ್‌ ಎಷ್ಟು ಪಡೆಯಬೇಕು ಎನ್ನುವುದು ಶಾಂಘ್ರಿಲಾ ಹೊಟೆಲ್‌ನಲ್ಲಿ ಮಾತುಕತೆ ನಡೆಯುತ್ತಿದೆಯಂತೆ. ಎಷ್ಟಕ್ಕೆ ಆಗುತ್ತದೆಯೋ ನೋಡೋಣ. ಲಂಚ ಪಡೆಯುವುದು ಕೊಡುವುದು ಎರಡೂ ಅಪರಾಧ. ಗುತ್ತಿಗೆದಾರರು ಎಷ್ಟುಪರ್ಸೆಂಟೇಜಿಗೆ ಒಪ್ಪುತ್ತಾರೊ, ಭ್ರಷ್ಟಾಚಾರದ ಭಾಗವಾಗುತ್ತಾರೋ ಅಥವಾ ಇಲ್ಲವೋ ನೋಡೋಣ’ ಎಂದು ಹೇಳಿದರು.

ಡಿಕೆಶಿ ಸೂಪರ್‌ ಸಿಎಂ: ಬೊಮ್ಮಾಯಿ

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೂಪರ್‌ ಸಿಎಂ ಆಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ಟ್ರಾನ್ಸಫರ್‌ ತನ್ನ ಗಮನಕ್ಕೆ ತಂದು ಮಾಡಬೇಕು ಎಂದು ಶಿವಕುಮಾರ್‌ ಹೇಳಿದ್ದಾರೆ. ರಾಜ್ಯದಲ್ಲಿ ಒಬ್ಬ ಸಿಎಂ ಮತ್ತು ಒಬ್ಬ ಸೂಪರ್‌ ಸಿಎಂ ಇದ್ದಾರೆ. ಶಿವಕುಮಾರ್‌ ಸೂಪರ್‌ ಸಿಎಂ ಎಂದು ಬೊಮ್ಮಾಯಿ ಹೇಳಿದರು.