ರಚಿತಾ ರಾಮ್ ಮತ್ತು 'ಸಂಜು ವೆಡ್ಸ್ ಗೀತಾ 2' ಚಿತ್ರತಂಡದ ನಡುವಿನ ವಿವಾದವು KFCC ಮೆಟ್ಟಿಲೇರಿದೆ. ಚಿತ್ರ ಪ್ರಚಾರದಲ್ಲಿ ರಚಿತಾ ಭಾಗವಹಿಸದಿರುವುದು ವಿವಾದಕ್ಕೆ ಕಾರಣ ಎನ್ನಲಾಗಿದ್ದು, KFCC ಅಧ್ಯಕ್ಷರು ರಚಿತಾ ಅವರನ್ನು ಕರೆಸುವಲ್ಲಿ ವಿಫಲರಾಗಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಟಿ ರಚಿತಾ ರಾಮ್ ಹಾಗೂ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ತಂಡದ ನಡುವೆ ವಿವಾದ ತಲೆದೋರಿದೆ. ಈ ಬಗ್ಗೆ ಸಿನಿಮಾದ ನಿರ್ದೇಶಕ ನಾಗಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (KFCC) ದೂರು ಸಲ್ಲಿಸಿದ್ದಾರೆ. ಆದರೆ, ರಚಿತಾ ರಾಮ್ ಅವರನ್ನು ವಾಣಿಜ್ಯ ಮಂಡಳಿಗೆ ಕರೆಸುವ ಪ್ರಯತ್ನ ವಿಫಲವಾಗಿದೆ, ಇದರಿಂದ ಮಂಡಳಿ ಅಧ್ಯಕ್ಷ ನರಸಿಂಹಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಕಲಾವಿದರು ಸಿನಿಮಾ ಪ್ರಚಾರಕ್ಕೆ ಬೆಂಬಲ ನೀಡಲೇಬೇಕು:

ನರಸಿಂಹಲು ಅವರು ಈ ವಿಷಯದ ಬಗ್ಗೆ ಮಾತನಾಡುತ್ತಾ, “ಕಲಾವಿದರು ಸಿನಿಮಾ ಬಿಡುಗಡೆಯಾದಾಗ ಪ್ರಚಾರಕ್ಕೆ ಬಂದು ಬೆಂಬಲ ನೀಡಲೇಬೇಕು. ಚಿತ್ರರಂಗದಿಂದಲೇ ಹಣ, ಹೆಸರು ಗಳಿಸಿರುವ ಕಲಾವಿದರು ಕನಿಷ್ಠ ವಾಣಿಜ್ಯ ಮಂಡಳಿಯ ಕರೆಗಾದರೂ ಸ್ಪಂದಿಸಬೇಕು. ಯಾರೋ ಪಿಎಗಳ ಮೂಲಕ ಮಾತನಾಡಿಸುವುದು ಸರಿಯಲ್ಲ ಎಂದು ತಮ್ಮ ಕಿಚ್ಚು ಹೊರಹಾಕಿದ್ದಾರೆ.

ಏನಿದು ವಿವಾದ?

‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ರಚಿತಾ ರಾಮ್ ಭಾಗಿಯಾಗದಿರುವುದು ವಿವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಘಟನೆಯಿಂದ ಚಿತ್ರತಂಡ ಹಾಗೂ ರಚಿತಾ ರಾಮ್ ನಡುವಿನ ಭಿನ್ನಾಭಿಪ್ರಾಯಗಳು ದೂರು ಕೊಡುವ ಮಟ್ಟಕ್ಕೂ ಬಂದು ನಿಂತಿದೆ. ಇದೀಗ ವಾಣಿಜ್ಯ ಮಂಡಳಿ ಅಧ್ಯಕ್ಷರ ಅಸಮಾಧಾನದಿಂದ ವಿಷಯ ಇನ್ನಷ್ಟು ಗಂಭೀರವಾಗಿದ್ದು, ರಚಿತಾ ರಾಮ್ ಈ ಬಗ್ಗೆ ಹೇಗೆ ಸ್ಪಂದಿಸುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಈ ವಿವಾದದಿಂದ ಕನ್ನಡ ಚಿತ್ರರಂಗದಲ್ಲಿ ಕಲಾವಿದರು ಮತ್ತು ಚಿತ್ರತಂಡದ ನಡುವಿನ ಸಹಕಾರದ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ಈ ಗೊಂದಲ ಹೇಗೆ ಬಗೆಹರಿಯಲಿದೆ ಎಂಬುದನ್ನು ಕಾದುನೋಡಬೇಕಿದೆ.