ಪುತ್ತೂರಿನಲ್ಲಿ ಯುವತಿಯನ್ನು ಪ್ರೀತಿಸಿ ವಂಚಿಸಿದ ಪ್ರಕರಣದಲ್ಲಿ, ಕರ್ನಾಟಕ ಹೈಕೋರ್ಟ್ ಆರೋಪಿ ಕೃಷ್ಣ ಜೆ. ರಾವ್‌ಗೆ ತಿಂಗಳಿಗೆ 75 ಸಾವಿರ ರೂಪಾಯಿ ಮಾಸಿಕ ಪರಿಹಾರ ಪಾವತಿಸಲು ಆದೇಶಿಸಿದೆ. ನ್ಯಾಯಾಲಯವು ಪ್ರಕರಣವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರಾಕರಿಸಿದ್ದು, ಸಂತ್ರಸ್ತೆ ಮತ್ತು ಮಗುವಿನ ಹಿತದೃಷ್ಟಿಯಿಂದ ಷರತ್ತುಬದ್ಧ ಮಧ್ಯಂತರ ತಡೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿರುವ ಪ್ರೀತಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ತಿಂಗಳಿಗೆ 75 ಸಾವಿರ ಮಾಸಿಕವಾಗಿ ಪಾವತಿಸಲು ಆದೇಶ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವೇಳೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದ್ದು, ಪ್ರಕರಣಕ್ಕೆ ಸಂಪೂರ್ಣ ತಡೆ ನೀಡಲು ನಿರಾಕರಿಸಿದೆ. ಆದರೆ, ಕೆಲವು ಷರತ್ತುಗಳ ಮೇರೆಗೆ ಪ್ರಕರಣದ ಮುಂದಿನ ಕ್ರಮಗಳಿಗೆ ತಾತ್ಕಾಲಿಕ ತಡೆ ನೀಡಲಾಗಿದೆ.

ಮಗುವಿಗೆ ಈಗ 10 ತಿಂಗಳು

ಸಹಪಾಠಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದು, ಬಳಿಕ ಮದುವೆಯಾಗಲು ನಿರಾಕರಿಸಿದ್ದಾನೆ. ಸಂತೃಸ್ತೆ ಈಗ ಸುಮಾರು 10 ತಿಂಗಳ ಮಗುವಿಗೂ ಜನ್ಮ ನೀಡಿದ್ದು, ಡಿಎನ್‌ಎ ಪರೀಕ್ಷೆಯಲ್ಲಿ ಕೃಷ್ಣ ಜೆ. ರಾವ್ ಮಗುವೆಂದು ದೃಢಪಟ್ಟಿದೆ . ಈ ಹಿನ್ನೆಲೆಯಲ್ಲಿ ಯುವತಿ ಮತ್ತು ಆಕೆಯ ಮಗುವಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ಮಧ್ಯಂತರ ಪರಿಹಾರ ಕ್ರಮಗಳನ್ನು ಕೈಗೊಂಡಿದೆ.

ನ್ಯಾಯಾಲಯವು ಅರ್ಜಿದಾರ ಕೃಷ್ಣ ಜೆ. ರಾವ್ ಸಂತ್ರಸ್ತೆ ಯುವತಿ ಹಾಗೂ ಮಗುವಿಗೆ ಪ್ರತಿ ತಿಂಗಳು ಒಟ್ಟು 75 ಸಾವಿರ ರೂಪಾಯಿ ಪಾವತಿಸಲು ಸೂಚಿಸಿದೆ. ಈ ಹಣವನ್ನು ಮುಂದಿನ ಆದೇಶ ಬರುವವರೆಗೂ ನಿಯಮಿತವಾಗಿ ಪಾವತಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. 10 ತಿಂಗಳ ಮಗು ಹಾಗೂ ತಾಯಿಯನ್ನು ಅನಾಥರನ್ನಾಗಿಸುವಂತಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡದಂತೆ ನ್ಯಾಯಾಲಯ ಸೂಚನೆ

ಇದರ ಜೊತೆಗೆ, ಪ್ರಕರಣದ ಬಗ್ಗೆ ಸಂತ್ರಸ್ತೆ ಯುವತಿ ಅಥವಾ ಆಕೆಯ ಸಂಬಂಧಿಕರು ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಬಾರದು ಎಂಬುದಾಗಿ ನ್ಯಾಯಾಲಯ ಸೂಚಿಸಿದೆ. ಪ್ರಕರಣದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ನಿಯಂತ್ರಣ ವಿಧಿಸಲಾಗಿದೆ.

ಒಟ್ಟಿನಲ್ಲಿ, ಪ್ರಕರಣವನ್ನು ಸಂಪೂರ್ಣವಾಗಿ ರದ್ದುಪಡಿಸುವ ಬೇಡಿಕೆಯನ್ನು ನ್ಯಾಯಾಲಯ ತಳ್ಳಿಹಾಕಿದರೂ, ಸಂತ್ರಸ್ತೆಯ ಹಿತಾಸಕ್ತಿಯನ್ನು ಕಾಪಾಡುವ ದೃಷ್ಠಿಯಿಂದ ಷರತ್ತಿನ ಮೇರೆಗೆ ಮಧ್ಯಂತರ ತಡೆ ನೀಡಿರುವುದು ಗಮನಾರ್ಹವಾಗಿದೆ.