Asianet Suvarna News Asianet Suvarna News

ಉದ್ಯಮಿಯಾಗು ಉದ್ಯೋಗ ನೀಡು ಕಾರ್ಯಾಗಾರ ವೇದಿಕೆಗೆ ಪುನೀತ್ ಹೆಸರು : ನಿರಾಣಿ ತೀರ್ಮಾನ

  •    ಮೈಸೂರು, ಬೆಳಗಾವಿ, ಕರಾವಳಿ ಭಾಗದ ಮಂಗಳೂರು ಹಾಗೂ ತುಮಕೂರಿನಲ್ಲಿ "ಉದ್ಯಮಿಯಾಗು ಉದ್ಯೋಗ ನೀಡು" ಕಾರ್ಯಕ್ರಮ 
  • ಕಾರ್ಯಕ್ರಮ ವೇದಿಕೆಗೆ ಪುನೀತ್ ರಾಜ್ ಕುಮಾರ್ ಹೆಸರಿಡಲು ತೀರ್ಮಾನ - ಸಚಿವ ನಿರಾಣಿ
     
puneeth Rajkumar Name for Udyamiyagu Udyoga Needu workshop says Minister Nirani snr
Author
Bengaluru, First Published Nov 9, 2021, 2:31 PM IST

ಬೆಂಗಳೂರು (ನ.09):  ತಮ್ಮ ನಡೆ, ನುಡಿ, ಸರಳತೆ, ಸಮಾಜ ಸೇವೆ ಮೂಲಕ ಯುವ ಜನತೆಗೆ ಮಾದರಿಯಾಗಿದ್ದ  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅವರ ಹೆಸರನ್ನು ಕಲಬುರಗಿಯಲ್ಲಿ (kalaburagi) ಇದೇ 11 ರಂದು ನಡೆಯಲಿರುವ 'ಉದ್ಯಮಿಯಾಗು ಉದ್ಯೋಗ ನೀಡು' (Be an entrepreneur - Become an employer) ಕಾರ್ಯಾಗಾರದ ವೇದಿಕೆಗೆ ಹೆಸರಿಡಿಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ  (Murugesh Nirani) ತೀರ್ಮಾನಿಸಿದ್ದಾಗಿ ತಿಳಿಸಿದರು. 

ಸೋಮವಾರ ನಡೆದ ಪುನೀತ್ ರಾಜ್ ಕುಮಾರ್ ಅವರ 11 ದಿನದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸಚಿವ ನಿರಾಣಿ ಅವರು ಭಾಗವಹಿಸಿ ಆಗಲಿದ ಯುವ ನಟನಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಸದಾಶಿವ ನಗರದಲ್ಲಿರುವ ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ತೆರಳಿದ್ದ ಅವರು ಅಪ್ಪುವಿನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ‌ಗೌರವ ನಮನ ಸಲ್ಲಿಸಿದರು. ಬಳಿಕ ಪುನೀತ್ ರಾಜ್ ಕುಮಾರ್ ಪತ್ನಿ ಶ್ರೀಮತಿ ಅಶ್ವಿನಿ, (Ashwini Puneeth rajkumar) ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಇದೇ ತಿಂಗಳ  11 ರಂದು ಕಲಬುರಗಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವತಿಯಿಂದ ಉದ್ಯಮಿಯಾಗಿ ಉದ್ಯೋಗ ನೀಡು ಮತ್ತು  ಕೈಗಾರಿಕೆ ಅದಾಲತ್  ಕಾರ್ಯಾಗಾರವನ್ನು ಆಯೋಜಿಸಿದ್ದು, ಕಾರ್ಯಾಗಾರ ನಡೆಯುವ ವೇದಿಕೆಗೆ "ಪುನೀತ್ ರಾಜ್ ಕುಮಾರ್" ಎಂದು ಹೆಸರಿಟ್ಟು ಅಗಲಿದ ಮೇರು ನಟನೆಗೆ ಗೌರವ ಸಮರ್ಪಣೆ ಸಲ್ಲಿಸಲು ಸಚಿವ ನಿರಾಣಿ ಅವರು ಮುಂದಾಗಿದ್ದಾಗಿ ತಿಳಿಸಿದರು.

ಕಲಬುರಗಿ ಮಾತ್ರವಲ್ಲದೆ, ಮುಂದೆ ನಡೆಯಲಿರುವ ಮೈಸೂರು (Mysuru), ಬೆಳಗಾವಿ (Belagavi), ಕರಾವಳಿ ಭಾಗದ ಮಂಗಳೂರು (Mangaluru) ಹಾಗೂ ತುಮಕೂರಿನಲ್ಲಿ "ಉದ್ಯಮಿಯಾಗು ಉದ್ಯೋಗ ನೀಡು" ಕಾರ್ಯಕ್ರಮದ ವೇದಿಕೆಗೆ ಪುನೀತ್ ರಾಜ್ ಕುಮಾರ್ ಹೆಸರಿಡಲು ಸರ್ವಸಮ್ಮತದ ತೀರ್ಮಾನವನ್ನು ಸಚಿವರು ತೆಗೆದುಕೊಂಡಿದ್ದಾರೆ.

ಕೇವಲ ಸಿನಿಮಾ (Cinema ) ಕ್ಷೇತ್ರಕ್ಕೆ ಗುರುತಿಸಿಕೊಳ್ಳದ ಪುನೀತ್ ರಾಜ್ ಕುಮಾರ್ ಅನೇಕ ಸಮಾಜ‌ ಸೇವೆಗಳಲ್ಲೂ ತೊಡಗಿಸಿಕೊಂಡಿದ್ದರು. ನಿಜ ಜೀವನದಲ್ಲಿ ಪುನೀತ್ ರಾಜ್ ಕುಮಾರ್ ರಾಜಕುಮಾರನಾಗಿಯೇ ಮೆರೆದರು. ಮುಂದಿನ ಯುವಜನಾಂಗಕ್ಕೆ ಅವರ ಹೆಸರು "ಆಜಾರಮರಗೊಳಿಸಲು" ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿರುವುದಾಗಿ ನಿರಾಣಿ ಹೇಳಿದ್ದಾರೆ.

ಯುವಜನತೆಯು (Youths) ಯಾರೊಬ್ಬರ ಮೇಲೆ ಅವಲಂಬಿತರಾಗದೆ, ಸ್ವಾವಲಂಬಿಗಳಾಗಿ  ಬದುಕಬೇಕು ಎಂಬುದು ಅಪ್ಪು ಅವರ ಕನಸಾಗಿತ್ತು. ಅವರು ಕಂಡಿದ್ದ ಕನಸನ್ನು ನನಸು ಮಾಡುವ ಸಣ್ಣ ಪ್ರಯತ್ನ ಇದಾಗಿದೆ ಎಂದರು. 

ಪುನೀತ್​ ರಾಜ್​ಕುಮಾರ್​ ನಟನಾಗಿ ಮಾತ್ರವಲ್ಲ ನಿರ್ಮಾಪಕನಾಗಿಯೂ ಉದ್ಯಮಶೀಲತೆ ತೋರಿದರು.  ಅವರು ಪಿಆರ್​ಕೆ ಪ್ರೊಡಕ್ಷನ್​ ಆರಂಭಿಸುವ ಮೂಲಕ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದರು. ಹೊಸ ಪ್ರತಿಭೆಗಳಿಗೆ ಮಣೆ ಹಾಕುವ ಮೂಲಕ ಸ್ಯಾಂಡಲ್​ವುಡ್​​ನಲ್ಲಿ ಅವರು ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದರು ಎಂದು ನಿರಾಣಿ ಕೊಂಡಾಡಿದರು. 

ಕೇವಲ ಸಿನಿಮಾ ಕ್ಷೇತ್ರವಲ್ಲದೆ, ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವೃದ್ಧರ ಮತ್ತು ಅನಾಥರ ಪೋಷಣೆ ಜತೆಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಧಾರೆ ಎರೆದಿದ್ದರು. ಗೋ ಶಾಲೆಗಳನ್ನು ಪೋಷಣೆ ಮಾಡುತ್ತಿದ್ದರು. ತಾನು ಸಮಾಜಕ್ಕೆ ಈ ಕೊಡುಗೆ ಕೊಟ್ಟಿದ್ದೇನೆ ಎಂದು ಎಲ್ಲೂ ಬಹಿರಂಗ ಪಡಿಸದೇ ಸಮಾಜ ಸೇವೆ ಮಾಡುತ್ತಿದ್ದರು. ಈ ಮೂಲಕ ದೊಡ್ಡಮನೆಯ ದೊಡ್ಡತನ ಮೆರೆದಿದ್ದರು. ಅಂತಹ ಮೇರುನಟ ನಮಗೆ ಎಂದೆಂದಿಗೂ ಮಾದರಿ ಎಂದು ನಿರಾಣಿ ಹೇಳಿದರು.

ನಂತರ ಪುನೀತ್ ರಾಜ್ ಕುಮಾರ್ ಸಹೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಸಂಬಂಧಿಕರು‌ ಆದ ಮಧು ಬಂಗಾರಪ್ಪ, ‌ಸೇರಿದಂತೆ ಮತ್ತಿತರರ ಜೊತೆ ಪ್ರಸಾದ ಸೇವಿಸಿದರು.

Follow Us:
Download App:
  • android
  • ios