ಸಿಎಂಗಾಗಿ ರಸ್ತೆ ವಿಭಜಕವೇ ತೆರವು : ಸಾರ್ವಜನಿಕರ ಟೀಕೆ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಯಸದೇ ಇದ್ದರೂ, ಸಮಾರಂಭದ ಆಯೋಜಕರೂ ಕೋರದೆ ಇದ್ದರೂ ಸಿಎಂ ಅವರ ಸುಗಮ ಸಂಚಾರಕ್ಕಾಗಿ ರಸ್ತೆ ವಿಭಜಕವನ್ನು ತೆರವುಗೊಳಿಸಿದ್ದು ಸಾರ್ವಜನಿಕರಿಂದ ಟೀಕೆಗೆ ಒಳಗಾಯಿತು.
ಬೆಂಗಳೂರು : ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾರು ಹಾಗೂ ಬೆಂಗಾವಲು ಪಡೆ ವಾಹನಗಳ ಸಂಚಾರಕ್ಕಾಗಿ ಪೊಲೀಸರು ರಸ್ತೆ ವಿಭಜಕವನ್ನೇ (ಡಿವೈಡರ್) ತೆರವುಗೊಳಿಸಿದ ಘಟನೆ ಗುರುವಾರ ನಡೆದಿದೆ.
ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಯಸದೇ ಇದ್ದರೂ, ಸಮಾರಂಭದ ಆಯೋಜಕರೂ ಕೋರದೆ ಇದ್ದರೂ ಸಿಎಂ ಅವರ ಸುಗಮ ಸಂಚಾರಕ್ಕಾಗಿ ರಸ್ತೆ ವಿಭಜಕವನ್ನು ತೆರವುಗೊಳಿಸಿದ್ದು ಸಾರ್ವಜನಿಕರಿಂದ ಟೀಕೆಗೆ ಒಳಗಾಯಿತು.
ಗುರುವಾರ ನಿಮ್ಹಾನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ನಿಮ್ಹಾನ್ಸ್ ಮುಂಭಾಗದ ರಸ್ತೆಯುದ್ದಕ್ಕೂ ಡಿವೈಡರ್ ಇದ್ದಿದ್ದರಿಂದ ಡೈರಿ ವೃತ್ತದಲ್ಲಿ ‘ಯು’ ತಿರುವು ಪಡೆದೇ ವಾಪಸ್ ಬರಬೇಕಿತ್ತು.
ಹಾಗಾಗಿ ಶಾಂತಿನಗರ ಕಡೆಯಿಂದ ಬಂದ ಮುಖ್ಯಮಂತ್ರಿ ಅವರ ಕಾರು ಮತ್ತು ಬೆಂಗಾವಲು ವಾಹನಗಳು ನಿಮ್ಹಾನ್ಸ್ ಆವರಣಕ್ಕೆ ನೇರವಾಗಿ ತೆರಳಲು ಅನುವಾಗುವಂತೆ ನಿಮ್ಹಾನ್ಸ್ ಮುಖ್ಯದ್ವಾರದ ಮುಂಭಾಗದ ರಸ್ತೆಯ ಡಿವೈಡರ್ಅನ್ನೇ ತೆರವುಗೊಳಿಸಲಾಯಿತು.