ನಾವು ಎಲ್ಲರೂ ಒಟ್ಟಾಗಿ ಕೋವಿಡ್ ನಿಯಮಗಳನ್ನು ಪಾಲಿಸೋಣ.  ಬನ್ನಿ ಒಗ್ಗಟ್ಟಾಗೋಣ, ಕೋವಿಡ್ ಮುಕ್ತ ನಾಡನ್ನು ಕಟ್ಟೋಣ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. 

ಬೆಂಗಳೂರು (ಏ.21) : ಕೋವಿಡ್ ಮಹಾಮಾರಿ ನಿಯಂತ್ರಣಕ್ಕೆ ಇಂದು ವಿಶ್ವವೇ ಪರಿತಪಿಸುತ್ತಿದೆ. ಇದಕ್ಕಾಗಿ ಸರ್ಕಾರಗಳು ಅನೇಕ ಕಾರ್ಯಸೂಚಿ, ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಿವೆ. ಆದರೂ ಹತೋಟಿಗೆ ಬರುತ್ತಿಲ್ಲ. ಇದಕ್ಕೆ ನಾಗರಿಕರ ಸಹಭಾಗಿತ್ವವೂ ಮುಖ್ಯವಾಗಲಿದ್ದು, ಎಲ್ಲರೂ ಒಟ್ಟಾಗಿ ಪರಿಸ್ಥಿತಿ ನಿಭಾಯಿಸಬೇಕಿದೆ. ಬನ್ನಿ ಒಗ್ಗಟ್ಟಾಗೋಣ, ಕೋವಿಡ್ ಮುಕ್ತ ನಾಡನ್ನು ಕಟ್ಟೋಣ ಎಂದು ಸಚಿವ ಎಸ್.ಟಿ.ಸೋಮಶೇಖರ್ ಕರೆ ನೀಡಿದ್ದಾರೆ. 

Add Asianetnews Kannada as a Preferred SourcegooglePreferred

ಮಂಗಳವಾರವಷ್ಟೇ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಪ್ರಕಟ ಮಾಡಿದೆ. ಕಟ್ಟುನಿಟ್ಟಿನ ಕ್ರಮಗಳನ್ನು ಸೂಚಿಸಿದೆ. ಎಲ್ಲರೂ ಸರ್ಕಾರ ಪ್ರಕಟಿಸಿದ ಕೋವಿಡ್ ಮಾರ್ಗಸೂಚಿ ಅನುಸರಿಸಿ, ವಾರಂತ್ಯದ ಲಾಕ್ಡೌನ್ ಸೇರಿದಂತೆ ರಾತ್ರಿ ಕರ್ಫ್ಯೂಗೆ ಬೆಂಬಲ ನೀಡಿ, ಕೆಲಸ ಇದ್ದರೆ ಮಾತ್ರ ಹೊರಬನ್ನಿ, ಅನಾವಶ್ಯಕ ತಿರುಗಾಟ ಬೇಡ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್, ಸ್ಯಾನಿಟೈಸರ್ ಬಳಸಿ, ಅಗತ್ಯಕ್ಕಿಂತ ಹೆಚ್ಚು ಹೊತ್ತು ಒಂದೆಡೆ ನಿಲ್ಲಬೇಡಿ, ಗುಂಪು ಸೇರಲು ಅವಕಾಶ ಕೊಡಬೇಡಿ. ಕಾರಣ, ಕೊರೋನಾಕ್ಕೆ ಯಾವುದೇ ಭೇದ-ಭಾವ ಇಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ ಎಂದು ಸಚಿವರು ಜನರಲ್ಲಿ ಮನವಿ ಮಾಡಿದ್ದಾರೆ.

ಕೊರೋನ ಅಟ್ಟಹಾಸ : ಕೇರಳ ಗಡಿಯಲ್ಲಿ ಕೋವಿಡ್ ನಿಯಂತ್ರಣ ಕ್ರಮ

ಸಾರ್ವಜನಿಕರ ಸಹಿತ ಸಂಘ-ಸಂಸ್ಥೆಗಳು, ಸಮಾಜದ ಎಲ್ಲ ವರ್ಗದ ಜನರು, ಜನಪ್ರತಿನಿಧಿಗಳು ಸಹಕಾರ ನೀಡಬೇಕು. ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಆಸ್ಪತ್ರೆಗಳಿಗೆ ಭೇಟಿ ನೀಡಿ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

 ಸೋಂಕಿತರು ಹೋಂ ಐಸೋಲೇಷನ್ ನಲ್ಲಿದ್ದರೆ ಅಂಥವರು ಕ್ಯಾರಂಟೇನ್ ಅವಧಿ ಮುಗಿಯುವವರೆಗೂ ಮನೆಯಲ್ಲೇ ಇದ್ದು, ಅಂತರ ಕಾಯ್ದುಕೊಂಡು ಬೇಗ ಗುಣಮುಖರಾಗಲಿ, ಒಂದು ವೇಳೆ ತೀವ್ರ ಅಸ್ವಸ್ಥರಾದರೆ ತಕ್ಷಣ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಲಿ, ಹೀಗಾಗಿ ಎಲ್ಲರ ಸಹಕಾರ ಬೇಕು ಎಂದು ಈ ಮೂಲಕ ಮನವಿ ಮಾಡುತ್ತೇನೆ ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ. 


• ಎಲ್ಲರೂ ಸರ್ಕಾರ ಪ್ರಕಟಿಸಿದ ಕೋವಿಡ್ ಮಾರ್ಗಸೂಚಿ ಅನುಸರಿಸಿ
• ವಾರಂತ್ಯದ ಲಾಕ್ಡೌನ್ ಸೇರಿದಂತೆ ರಾತ್ರಿ ಕರ್ಫ್ಯೂಗೆ ಬೆಂಬಲ ನೀಡಿ
• ಕೆಲಸ ಇದ್ದರೆ ಮಾತ್ರ ಹೊರಬನ್ನಿ, ಅನಾವಶ್ಯಕ ತಿರುಗಾಟ ಬೇಡ
• ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್, ಸ್ಯಾನಿಟೈಸರ್ ಬಳಸಿ
• ಅಗತ್ಯಕ್ಕಿಂತ ಹೆಚ್ಚು ಹೊತ್ತು ಒಂದೆಡೆ ನಿಲ್ಲಬೇಡಿ, ಗುಂಪು ಸೇರಲು ಅವಕಾಶ ಕೊಡಬೇಡಿ