- ಫೆಬ್ರವರಿಯಲ್ಲಿ ನಡೆಯಬೇಕಿದ್ದ 402 ಪಿಎಸ್‌ಐಗಳ ನೇಮಕಾತಿ ಪರೀಕ್ಷೆ- ಅಕ್ರಮ ಕುರಿತಾದ ಆಡಿಯೋ ಬಿಡುಗಡೆ ಮಾಡಿದ ಪ್ರಿಯಾಂಕ್‌ ಖರ್ಗೆ- ಆಡಿಯೋ ಬೆಳಕಿಗೆ ಬಂದ ಬಗ್ಗೆ ಕನ್ನಡಪ್ರಭ ನಿನ್ನೆಯೇ ವರದಿ ಮಾಡಿತ್ತು.

ಕಲಬುರಗಿ(ಏ.24): ಫೆಬ್ರವರಿಯಲ್ಲಿ ನಡೆಯಬೇಕಿದ್ದ 402 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆ​ಸಲು ಸಿದ್ಧತೆ ನಡೆ​ದಿ​ತ್ತೆ​ನ್ನು​ವು​ದಕ್ಕೆ ಸಾಕ್ಷಿ ಎಂದೇ ಹೇಳ​ಲಾದ ಆಡಿಯೋವೊಂದನ್ನು ಶನಿ​ವಾರ ಚಿತ್ತಾ​ಪುರ ಶಾಸಕ, ಕೆಪಿ​ಸಿಸಿ ವಕ್ತಾರ ಪ್ರಿಯಾಂಕ್‌ ಖರ್ಗೆ ಬಿಡು​ಗಡೆ ಮಾಡಿ​ದ್ದಾ​ರೆ. ಜತೆ​ಗೆ ಇಡೀ ಹಗ​ರ​ಣದ ನೈತಿಕ ಹೊಣೆ ಹೊತ್ತು ಗೃಹ ಸಚಿ​ವ ಆರಗ ಜ್ಞಾನೇಂದ್ರ ಅವರು ರಾಜೀ​ನಾಮೆ ನೀಡ​ಬೇಕು ಎಂದು ಆಗ್ರಹಿ​ಸಿ​ರುವ ಅವರು, ತನಿಖೆ ಮುಗಿ​ಯು​ವ​ವ​ರೆಗೆ ಪೊಲೀ​ಸ್‌ ನೇಮ​ಕಾತಿ ವಿಭಾ​ಗದ ಎಡಿ​ಜಿಪಿ ಅವ​ರನ್ನು ವರ್ಗಾ​ವಣೆ ಮಾಡ​ಬೇಕು ಎಂದೂ ಸರ್ಕಾ​ರ​ವನ್ನು ಒತ್ತಾ​ಯಿ​ಸಿ​ದ್ದಾ​ರೆ.

ಈಗಾ​ಗಲೇ ನಡೆ​ದಿ​ರುವ 545 ಪಿಎ​ಸ್‌ಐ ನೇಮ​ಕಾತಿ ಪರೀ​ಕ್ಷೆ​ಯಲ್ಲಿ ಅಕ್ರಮ ನಡೆದ ಹಿನ್ನೆ​ಲೆ​ಯಲ್ಲಿ ಫೆಬ್ರ​ವ​ರಿ​ಯಲ್ಲಿ ನಡೆ​ಯ​ಬೇ​ಕಿದ್ದ 402 ಪಿಎ​ಸ್‌ಐ ನೇಮ​ಕಾತಿ ಪರೀ​ಕ್ಷೆ​ಯನ್ನು ಅನಿ​ರ್ದಿಷ್ಟಾ​ವ​ಧಿ​ವ​ರೆಗೆ ಮುಂದೂ​ಡ​ಲಾ​ಗಿದೆ. ಆದರೆ, ಈ ಪರೀ​ಕ್ಷೆ​ಯಲ್ಲೂ ಅಕ್ರ​ಮಕ್ಕೆ ಯೋಜನೆ ನಡೆ​ದಿತ್ತು ಎಂಬುದಕ್ಕೆ ಪುಷ್ಟಿನೀಡುವ ಆಡಿಯೋ ಈಗ ಎಲ್ಲೆಡೆ ಹರಿ​ದಾ​ಡು​ತ್ತಿದೆ. ಈ ಕುರಿತು ‘ಕನ್ನಡಪ್ರಭ’ ವಿಶೇಷ ವರ​ದಿ ಮಾಡಿತ್ತು. ಇದರ ಬೆನ್ನಲ್ಲೇ ಕಲ​ಬು​ರ​ಗಿಯ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ತುರ್ತು ಪತ್ರಿಕಾಗೋಷ್ಠಿ ನಡೆ​ಸಿದ ಪ್ರಿಯಾಂಕ್‌ ಖರ್ಗೆಯವರು ಮಾಧ್ಯಮಗಳ ಮುಂದೆ ಆ ಆಡಿಯೋ ಬಿಡು​ಗಡೆ ಮಾಡಿ​ದ್ದಾ​ರೆ.

ಪಿಎಸ್ಐ ಹುದ್ದೆಗೆ ಎಬಿವಿಪಿ, ಶ್ರೀರಾಮ ಸೇನೆ ಕಾರ್ಯಕರ್ತರ ನೇಮಕಕ್ಕೆ ಪ್ಲಾನ್!

ಆಡಿಯೋದಲ್ಲಿ ದಾಖಲಾಗಿರುವ ಸಂಭಾಷಣೆಯನ್ನು ಗಮ​ನಿ​ಸಿ​ದರೆ ಇಡೀ ಪಿಎ​ಸ್‌​ಐ ನೇಮಕಾತಿ ಪ್ರಕ್ರಿಯೆಯಲ್ಲೇ ಅಕ್ರ​ಮವಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ವಿಧಿವಿಜ್ಞಾನ ತಂಡದಿಂದ ಆಡಿಯೋದ ಸತ್ಯಾಸತ್ಯತೆ ಗುರುತಿಸುವ ಕೆಲಸವಾಗಬೇಕು, ಇಡೀ ಹಗರಣದಲ್ಲಿ ಯಾವುದೇ ಪಕ್ಷದವರು ಇದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ ನೊಂದ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಕಿಂಗ್‌ಪಿನ್‌ಗಳು ಹೊರಗಿದ್ದಾರೆ: 545 ಪಿಎಸ್‌ಐ ಹುದ್ದೆಗಳಿಗೆ ಒಟ್ಟು 75,000 ಮಂದಿ ಪರೀಕ್ಷೆ ಬರೆದಿದ್ದರು. ಈ ಎಲ್ಲ ಅಭ್ಯರ್ಥಿಗಳ ಭವಿಷ್ಯಕ್ಕೆ ಕಂಟಕ ಎದು​ರಾ​ಗಿದ್ದು, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಹಗರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ರಾಜೇಶ್‌ ಹಾಗರಗಿ, ಮಹಾಂತೇಶ ಪಾಟೀಲ್‌ ಹಾಗೂ ಇತರ 13 ಮಂದಿಯನ್ನು ಬಂಧಿಸಲಾಗಿದೆ. ಆದರೆ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧಿಸದಿರುವುದನ್ನು ಗಮನಿಸಿದರೆ ಪ್ರಮುಖ ಕಿಂಗ್‌ಪಿನ್‌ಗಳು ಇನ್ನೂ ಹೊರಗಡೆ ಇದ್ದಾರೆ. ದಿವ್ಯಾ ಹಾಗರಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದ ಮೇಲೆ ಯಾರದ್ದೋ ಸಂಪರ್ಕದಲ್ಲಿದ್ದಾರೆ ಎಂದರ್ಥವಲ್ಲವೇ? ಇದು ಅಧಿಕಾರಿಗಳಿಗೆ ಹಾಗೂ ಗುಪ್ತಚರ ಇಲಾಖೆಗೆ ತಿಳಿದಿಲ್ಲವೇ? ಇದೆಲ್ಲ ಗಮನಿಸಿದರೆ ತನಿಖಾಧಿಕಾರಿಗಳ ಮೇಲೆ ಒತ್ತಡ ಬರಬಹುದು ಎಂದು ಖರ್ಗೆ ಅನು​ಮಾನ ವ್ಯಕ್ತ​ಪ​ಡಿ​ಸಿ​ದ​ರು.

ಸರ್ಕಾರದ ಮತ್ತೆರಡು ವಿಕೆಟ್ ಪತನ ಖಚಿತ: ಪ್ರಿಯಾಂಕ್ ಖರ್ಗೆ ಬಾಂಬ್

ಆಡಿಯೋ ಬಗ್ಗೆ ತನಿಖೆ
ಆಡಿಯೋವನ್ನು ನಾನು ಕೇಳಿಲ್ಲ. ಆದರೆ, ಆಡಿಯೋದಲ್ಲಿ ಯಾರು ಮಾತನಾಡಿರುವುದು, ಇಬ್ಬರ ಅರ್ಹತೆ ಏನು? ಎಲ್ಲದರ ಬಗ್ಗೆ ಸರ್ಕಾರ ತನಿಖೆ ನಡೆಸಲಿದೆ. ಪ್ರಕರಣದಲ್ಲಿ ಯಾರಿದ್ದರೂ ಬಿಡುವುದಿಲ್ಲ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಈಗ ಯಾಕೆ ಬಿಡುಗಡೆ?
ಪಿಎಸ್‌ಐ ನೇಮಕಾತಿ ಹಗರಣ ಬೆಳಕಿಗೆ ಬಂದು ತಿಂಗಳ ಬಳಿಕ ಆಡಿಯೋ ಬಹಿರಂಗವಾಗಿದೆ. ಇದುವರೆಗೆ ಯಾಕೆ ಕಾಂಗ್ರೆಸ್‌ ನಾಯಕರು ಆಡಿಯೋ ಬಿಡುಗಡೆ ಮಾಡಿರಲಿಲ್ಲ. ಇದರ ಹಿಂದಿನ ಉದ್ದೇಶವೇನು?
- ಆರಗ ಜ್ಞಾನೇಂದ್ರ, ಗೃಹ ಸಚಿವ

ಆಡಿ​ಯೋ​ದ​ಲ್ಲೇ​ನಿ​ದೆ?
ವ್ಯಕ್ತಿ-1 : ನಮಸ್ಕಾರ್ರೀ ಸರ...
ವ್ಯಕ್ತಿ-2 : ನಮಸ್ಕಾರ್‌ ಪಿಎಸೈ ಸಾಬ್ರಿಗೆ..
ವ್ಯಕ್ತಿ-1 : ಎಚ್ಕೆದವರು ಕೋರ್ಟಿಗೆ ಹೋಗಿದ್ದಾರಂತೆ?
ವ್ಯಕ್ತಿ-2 : ವರ್ಷಾ ಇದ್ದುದ್ದೇ, ಅದೇನೂ ಆಗೋಲ್ಲ.
ವ್ಯಕ್ತಿ-1 : 2014ರ ಕೆಎಎಸ್‌ನಲ್ಲಿ ಆದಂತೆ ಮತ್ತೇನಾದರೂ...
ವ್ಯಕ್ತಿ-2 : ಏನೂ ಆಗೋಲ್ಲ, ಇಲ್ಲಿ ಎಲ್ಲಾ ದೊಡ್ಡವರೇ ಶಾಮೀಲಾಗಿದ್ದಾರೆ. ಗೌಡ್ರೆ, ನಮ್ಮವರೂ ಒಬ್ರಿರಿದ್ದಾರೆ, ದುಡ್ಡು ಸಾಕಷ್ಟಿದೆ.
ವ್ಯಕ್ತಿ-1 : ಈ ಸಲ ಆಗೋಲ್ಲ, 402ಗೆ ಹಾಕಿ.. ಬೇಗ ಅಪ್ಲಿಕೇಶನ್‌ ನಂಬರ್‌ ವಾಟ್ಸಾಪ್‌ ಮಾಡ್ಲಿಕ್ಕೆ ಹೇಳಿ, ಬೇರೆ ನಂಬರಿಂದ ಮಾಡಲಿ. ಸೆಂಟರ್‌ ಹಾಕಿಸಿಕೊಂಡು ಬರಬೇಕು.
ವ್ಯಕ್ತಿ-2 : ಮುಂದಿನ ಪ್ರೋಸೀಜರ್‌ ಹೇಳ್ತೇನೆ, ಅಪ್ಲಿಕೇಶನ್‌ ನಂಬರ್‌ನಲ್ಲಿ ಹಾಕಿದ್ದ ಮೊಬೈಲ್‌ ನಂಬರ್‌ ಬಿಟ್ಟು ಬೇರೆ ನಂಬರಿನಿಂದ ಅಪ್ಲಿಕೇಶನ್‌ ನಂಬರ್‌ ಕಳುಹಿಸಲು ಹೇಳಿ.
ವ್ಯಕ್ತಿ-1 : ಆಯ್ತು..