ಮೊದಲ ಬಾರಿ ಪೊಲೀಸ್ ಅಧಿಕಾರಿಗಳ ಬಂಧನ!
- ಪಿಎಸ್ಐ ಅಕ್ರಮ: ಡಿವೈಎಸ್ಪಿ, ಇನ್ಸ್ಪೆಕ್ಟರ್ ಸಿಐಡಿ ಬೋನಿಗೆ!
- ಕಿಂಗ್ಪಿನ್ಗಳಿಗೆ ‘ಗಿರಾಕಿ’ಗಳನ್ನು ಒದಗಿಸುತ್ತಿದ್ದ ಆರೋಪದಡಿ ಅರೆಸ್ಟ್
- ಲಿಂಗಸುಗೂರಿನ ವಿಜಯಕುಮಾರ್ ಸಾಲಿ, ಕಲಬುರಗಿಯ ಮೇತ್ರೆ ಸೆರೆ
- ಪ್ರಕರಣದಲ್ಲಿ ಈವರೆಗೆ 41 ಮಂದಿ ಬಂಧನ. ಆ ಪೈಕಿ 9 ಜನ ಪೊಲೀಸರು
ಕಲಬುರಗಿ (ಮೇ. 6): ಮಹತ್ವದ ಬೆಳವಣಿಗೆಯೊಂದರಲ್ಲಿ ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ(PSI Recruitment Scam) ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯ (Police department)ಇಬ್ಬರು ಉನ್ನತ ಅಧಿಕಾರಿಗಳನ್ನು ಬಂಧಿಸಲಾಗಿದೆ. ಅಕ್ರಮದ ಕಿಂಗ್ಪಿನ್ಗಳಿಗೆ ಅಭ್ಯರ್ಥಿಗಳನ್ನು ಪೂರೈಸುತ್ತಿದ್ದ ಆರೋಪದ ಮೇರೆಗೆ ಗುರುವಾರ ಡಿವೈಎಸ್ಪಿ (DYSP), ಸಿಪಿಐ (CPI) ಒಬ್ಬರನ್ನು ಗುರುವಾರ ಸಿಐಡಿ (CID) ಬಂಧಿಸಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ಡಿವೈಎಸ್ಪಿ ವಿಜಯ ಕುಮಾರ್ ಸಾಲಿ (Vijay Kumar Sali) ಹಾಗೂ ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರೆ (Anand Metre) ಬಂಧಿತ ಪೊಲೀಸ್ ಅಧಿಕಾರಿಗಳು. ಇಬ್ಬರನ್ನೂ ಬುಧವಾರ ತಡರಾತ್ರಿವರೆಗೂ ತೀವ್ರ ವಿಚಾರಣೆ ನಡೆಸಿದ್ದ ಸಿಐಡಿ ತಂಡ ಗುರುವಾರ ಬಂಧಿಸಿದೆ. ಈ ಇಬ್ಬರನ್ನೂ 8 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಹಣ ನೀಡಿ ಪರೀಕ್ಷೆ ಬರೆದಿದ್ದ ಏಳು ಮಂದಿ ಪೊಲೀಸ್ ಕಾನ್ಸ್ಟೇಬಲ್ಗಳನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಅಕ್ರಮದಲ್ಲಿ ಭಾಗಿಯಾದ ಆರೋಪದ ಮೇರೆಗೆ ಬಂಧಿತರಾಗಿರುವ ಮೊದಲಿಬ್ಬರು ಪೊಲೀಸರು ವಿಜಯ ಕುಮಾರ್ ಹಾಗೂ ಆನಂದ್ ಆಗಿದ್ದಾರೆ. ಈ ಇಬ್ಬರ ಬಂಧನದೊಂದಗೆ ಪ್ರಕರಣದಲ್ಲಿ ಒಟ್ಟಾರೆ ಬಂಧಿತರ ಸಂಖ್ಯೆ ಒಟ್ಟಾರೆ 41ಕ್ಕೇರಿದೆ. ಇದರಲ್ಲಿ 9 ಮಂದಿ ಪೊಲೀಸರಾಗಿದ್ದಾರೆ.
ಆರ್.ಡಿ. ಪಾಟೀಲ್ ಆಪ್ತರು?: ಬಂಧನಕ್ಕೊಳಪಟ್ಟಿರುವ ಡಿವೈಎಸ್ಪಿ ವಿಜಯ ಕುಮಾರ್ ಮತ್ತು ಸಿಪಿಐ ಮೇತ್ರೆ ಇಬ್ಬರೂ ಹಗರಣದ ಕಿಂಗ್ಪಿನ್ಗಳಲ್ಲೊಬ್ಬನಾದ ಅಫಜಲ್ಪುರದ ಆರ್.ಡಿ.ಪಾಟೀಲ್ (RD Patil) ಆಪ್ತರು ಎನ್ನಲಾಗಿದೆ. ಮೂಲಗಳ ಪ್ರಕಾರ, ಕೆಲ ಅಭ್ಯರ್ಥಿಗಳನ್ನು ಆರ್.ಡಿ. ಪಾಟೀಲಗೆ ಪರಿಚಯಿಸಿ ಹಣಕಾಸಿನ ಮಾತುಕತೆ ನಡೆಸಿ ಇವರೇ ಡೀಲ್ ಕುದುರಿಸಿದ್ದರು ಎನ್ನಲಾಗುತ್ತಿದೆ.
ನಾಲ್ವರು ಟ್ರೈನಿ ಪಿಎಸ್ಐಗಳ ವಿಚಾರಣೆ?: ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ಕಲಬುರಗಿಯ ನಾಗನಹಳ್ಳಿ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಟ್ರೈನಿ ಪಿಎಸ್ಐ ಯಶವಂತಗೌಡರನ್ನು ಮಂಗಳವಾರ ರಾತ್ರಿ ವಶಕ್ಕೆ ತೆಗೆದುಕೊಂಡು ಸಿಐಡಿ ತಂಡ ಬೆಂಗಳೂರಿಗೆ ಕರೆದುಕೊಂಡು ಹೋದ ಬೆನ್ನಲ್ಲೇ ಇದೇ ತರಬೇತಿ ಶಾಲೆಯ ಇನ್ನೂ ನಾಲ್ವರು ಟ್ರೈನಿ ಪಿಎಸ್ಐಗಳನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.
ದಿವ್ಯಾ ಹಾಗರಗಿ ಪಶ್ಚಾತ್ತಾಪ
ಕಲಬುರಗಿ: ‘ನನ್ನ ಶಾಲೆಯ ಮುಖ್ಯ ಶಿಕ್ಷಕ ಕಾಶೀನಾಥ್ ಮಾತು ಕೇಳಿ ತಪ್ಪು ಮಾಡಿಬಿಟ್ಟೆ. ಒಳ್ಳೆಯ ವಿದ್ಯಾರ್ಥಿಗಳಿಗೆ ನಾನು ಅನ್ಯಾಯ ಮಾಡಬಾರದಿತ್ತು’ ಎಂದು ಪರೀಕ್ಷಾ ಅಕ್ರಮ ನಡೆದ ಕಲಬುರಗಿ ಶಾಲೆಯ ಒಡತಿ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸಿಐಡಿ ವಿಚಾರಣೆ ವೇಳೆ ಪಶ್ಚಾತ್ತಾಪದ ಮಾತುಗಳನ್ನು ಆಡುತ್ತಿದ್ದಾಳೆ ಎನ್ನಲಾಗಿದೆ. ಅಲ್ಲದೆ ಕಳೆದ 3-4 ದಿನಗಳಿಂದ ತನಿಖೆಗೆ ನಿರೀಕ್ಷೆಗೂ ಮೀರಿ ಸ್ಪಂದಿಸುತ್ತಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಒಂದೇ ಗ್ರಾಮದ 3 ಮಂದಿ ಎಸ್ಐಗೆ ಆಯ್ಕೆ!
ಪೇದೆ ಸೇರಿ ಮೂವರ ಬಂಧನ
ಬೆಂಗಳೂರು: ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಮೂವರನ್ನು ಸಿಐಡಿ ಗುರುವಾರ ಬಂಧಿಸಿದೆ. ರಾಮನಗರ ಜಿಲ್ಲೆ ಕುಂಬಳಗೋಡು ಠಾಣೆಯ ಕಾನ್ಸ್ಟೇಬಲ್ ಸೋಮನಾಥ ಮಲ್ಲಿಕಾರ್ಜುನಯ್ಯ ಹಿರೇಮಠ, ಕಗ್ಗಲಿಪುರ ಸಮೀಪದ ಚಿನ್ನಕುರ್ಚಿ ಗ್ರಾಮದ ಬಿಜೆಪಿ ಮುಖಂಡರ ಪುತ್ರ ಎನ್ನಲಾದ ಸಿ.ಜೆ.ರಾಘವೇಂದ್ರ ಹಾಗೂ ಕುಣಿಗಲ್ ತಾಲೂಕು ಅಮೃತ್ತೂರಿನ ಸಿ.ಎಸ್.ನಾಗೇಶ್ಗೌಡ ಬಂಧಿತರಾಗಿದ್ದಾರೆ.
ಮದ್ಯ ಪ್ರಿಯರಿಗೆ ಶಾಕ್: ರಾಜ್ಯಾದ್ಯಂತ ಮದ್ಯ ಖರೀದಿ ಸ್ಥಗಿತವಾಗುತ್ತೆ ಯಾಕೆ ಗೊತ್ತಾ?
ಸಚಿವ ಅಶ್ವತ್ಥ ಬೆನ್ನಿಗೆ ನಿಂತ ಸಿಎಂ
ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಸದ್ಯ ಕಾಂಗ್ರೆಸ್ಸಿನ ಗುರಿಯಾಗಿರುವ ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್. ಅಶ್ವತ್ಥ ನಾರಾಯಣ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಲವು ಸಚಿವರು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಕಾಂಗ್ರೆಸ್ ಬಳಿ ದಾಖಲೆ ಇದ್ದರೆ ಕೊಡಲಿ ಎಂದು ಸವಾಲು ಹಾಕಿದ್ದಾರೆ.