Asianet Suvarna News Asianet Suvarna News

ಮಳೆ ಸಂತ್ರಸ್ತರಿಗೆ ವಾರದೊಳಗೆ ಪರಿಹಾರ ನೀಡಿ: ಸಚಿವ ಭೈರತಿ ಬಸವರಾಜ್

ಮಳೆಯಿಂದ ಹಾನಿಗೊಳಗಾದ ಎಲ್ಲಾ ಸಂತ್ರಸ್ತರಿಗೂ ಮಾರ್ಗಸೂಚಿ ಅನ್ವಯ ಪರಿಹಾರ ಮಂಜೂರು ಮಾಡಬೇಕು, ದಾಖಲಾತಿಗಳ ಸಬೂಬು ಹೇಳಿ ಯಾವುದೇ ಸಂತ್ರಸ್ತರು ಪರಿಹಾರದಿಂದ ವಂಚಿತರಾಗದಂತೆ ನೋಡಿಕೊಳ್ಳಿ ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಭೈರತಿ ಬಸವರಾಜ ಹೇಳಿದರು.

Provide compensation to rain victims within a week says Minister Byrathi basavaraj gvd
Author
First Published Sep 5, 2022, 3:00 AM IST

ದಾವಣಗೆರೆ (ಸೆ.05): ಮಳೆಯಿಂದ ಹಾನಿಗೊಳಗಾದ ಎಲ್ಲಾ ಸಂತ್ರಸ್ತರಿಗೂ ಮಾರ್ಗಸೂಚಿ ಅನ್ವಯ ಪರಿಹಾರ ಮಂಜೂರು ಮಾಡಬೇಕು, ದಾಖಲಾತಿಗಳ ಸಬೂಬು ಹೇಳಿ ಯಾವುದೇ ಸಂತ್ರಸ್ತರು ಪರಿಹಾರದಿಂದ ವಂಚಿತರಾಗದಂತೆ ನೋಡಿಕೊಳ್ಳಿ ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಳೆಹಾನಿ ಪರಿಹಾರ ಮತ್ತು ಕೋವಿಡ್‌ ಸ್ಥಿತಿಗತಿಗಳ ಪರಿಶೀಲನೆ ಕುರಿತು ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಮನೆಗಳು ಹಾನಿಗೊಳಗಾಗಿದ್ದು ಅನೇಕರು ಮನೆಗಳ ಕಳೆದುಕೊಂಡಿದ್ದು ಅಂತಹ ಸಂತ್ರಸ್ತರನ್ನು ಗುರುತಿಸಿ ಇನ್ನೊಂದು ವಾರದಲ್ಲಿ ಸೂಕ್ತ ಪರಿಹಾರ ಮಂಜೂರು ಮಾಡಬೇಕು. ಪರಿಹಾರ ಮಂಜೂರು ಮಾಡುವಲ್ಲಿ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ಮೇಲೆ ಮುಲ್ಲಾಜಿಲ್ಲದೇ ಕ್ರಮ ಜರುಗಿಸಲಾಗುವುದು. ಹಾನಿಗೊಳಗಾದ ಮನೆಗಳನ್ನು ಖುದ್ದಾಗಿ ಸ್ಥಳೀಯ ಪಿಡಿಒ ಮತ್ತು ತಹಸೀಲ್ದಾರರು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

ದಾವಣಗೆರೆ: ಲೇಡಿ ಸಿಂಗಂ ಇನ್ನಿಲ್ಲ, ಕ್ರಿಮಿನಲ್‌ಗಳಿಗೆ ಸಿಂಹಸ್ವಪ್ನವಾಗಿದ್ದ ತುಂಗಾ ಇನ್ನು ನೆನಪು ಮಾತ್ರ..!

ಸರ್ವೇ ನಡೆಸಿ ವರದಿ ತಯಾರಿಸಿ: ಇನ್ನು ಎರಡು ತಿಂಗಳಿಗೂ ಹೆಚ್ಚು ಮಳೆಗಾಲವಿದ್ದು ಕಟಾವಿಗೆ ಬಂದಿರುವ ಬೆಳೆಗಳ ಉಳಿಸಲು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. 956 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದ್ದು ಅರ್ಹ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಬೆಳೆ ಹಾನಿಯಾದ ರೈತರಿಗೆ ಕೃಷಿ ಇಲಾಖೆಯವರು ಅನ್ಯಾಯವಾಗದಂತೆ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ವಿಶೇಷವಾಗಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಮಳೆಯಿಂದ ಹಾನಿಗೊಳಗಾದ ಬೆಳೆಗಳ ಸರ್ವೇ ನಡೆಸಿ ವರದಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ಕಳೆದ ಹತ್ತು ದಿನಗಳಿಂದ ಜಿಲ್ಲೆಯಲ್ಲಿ ಇನ್ನೂರು ಪಟ್ಟು ಜಾಸ್ತಿ ಮಳೆಯಾಗಿದೆ. 140 ಮಿಲೀ ಮೀಟರ್‌ ಹೆಚ್ಚು ಮಳೆಯಾಗಿದೆ, ಸರ್ಕಾರದ ನಿರ್ದೇಶನದಂತೆ ಪರಿಹಾರ ನೀಡಲಾಗುತ್ತಿದೆ ಎಂದರು.

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌ ಮಾತನಾಡಿ, ಜಿಲ್ಲೆಯಾದ್ಯಂತ ಒಟ್ಟು 13,608 ಹೆಕ್ಟೇರ್‌ ಬೆಳೆಹಾನಿಯಾಗಿದ್ದು ಪರಿಹಾರ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ತೋಟಗಾರಿಕೆ ಇಲಾಖೆ ಅಧಿಕಾರಿ ರಾಘವೇಂದ್ರ ಮಾಹಿತಿ ನೀಡಿ, 956 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದೆ, ಹೊಸದಾಗಿ 27.32 ಎಕರೆ ಬೆಳೆಹಾನಿ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆ ಪೂರ್ಣಗೊಂಡ ನಂತರ ವರದಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಪ್ರತಿ ಮನೆ-ಮನೆಗೆ ಲಸಿಕೆ: ಕೋವಿಡ್‌ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ನಾಗರಾಜ್‌ ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಕಡಿಮೆಯಾಗಿದ್ದು ಒಟ್ಟು 32 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ದಾಖಲಾಗಿದ್ದವು. ಇನ್ನು 18 ಪ್ರಕರಣಗಳು ಸಕ್ರಿಯವಾಗಿವೆ. ಬೂಸ್ಟರ್‌ ಡೋಸ್‌ ಲಸಿಕೆ ನೀಡುವ ಕಾರ್ಯ ಶೇ.17 ರಷ್ಟುಪೂರ್ಣಗೊಂಡಿದೆ. ಪ್ರತಿ ಮನೆ-ಮನೆಗೆ ಹೋಗಿ ಲಸಿಕೆ ನೀಡಲಾಗುತ್ತಿದೆ ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಚನ್ನಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ್‌ ಮುದಜ್ಜಿ, ಸ್ಮಾರ್ಚ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಉಪವಿಭಾಗಾಧಿಕಾರಿಗಳಾದ ದುರ್ಗಾಶ್ರೀ, ಹುಲ್ಲುಮನಿ ತಿಮ್ಮಣ್ಣ ಸೇರಿದಂತೆ ತಾಲೂಕುಗಳ ತಹಸೀಲ್ದಾರ್‌ಗಳು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ನದಿ ಪಾತ್ರದರಿಗೆ ಶಾಶ್ವತ ಸೂರು ಒದಗಿಸಿ: ಹರಿಹರದ ಗಂಗಾನಗರ ಹಾಗೂ ಹೊನ್ನಾಳಿಯ ಬಾಲರಾಜ್‌ ಘಾಟ್‌ ಬಳಿ ಪ್ರತಿ ಬಾರಿ ಹೊಳೆ ನೀರು ಆ ಪ್ರದೇಶದ ಮನೆಗಳಿಗೆ ನುಗ್ಗುತ್ತಿದೆ, ಅಲ್ಲಿಯ ನಿವಾಸಿಗಳಿಗೆ ಲಭ್ಯವಿರುವ ಕಡೆ ತಕ್ಷಣ ಜಾಗ ಗುರುತಿಸಿ ನಿವೇಶನ ನೀಡಿ ಮನೆ ಕಟ್ಟಿಕೊಳ್ಳಲು ಕ್ರಮವಹಿಸಿ. ಎಷ್ಟುದಿನ ಹೀಗೆಯೇ ಪರಿಹಾರ ಕೊಟ್ಟು ಕೂರುತ್ತೀರಿ ಈ ಸಮಸ್ಯೆ ಇಲ್ಲಿಗೇ ಮುಗಿಯಬೇಕು. ಮುಂದಿನ ಸಭೆಯೊಳಗೆ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಸೂಚಿಸಿದರು.

Davanagere; ಮಾಯಕೊಂಡ ತಾಲೂಕು ಕೇಂದ್ರ ಘೋಷಣೆ ಮಾಡಲು ಮುಂದುವರಿದ ಹೋರಾಟ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಿರುವ ಚರಂಡಿ, ರಾಜಕಾಲುವೆಗಳನ್ನು ತೆರವುಗೊಳಿಸಬೇಕು ಹಾಗೂ ಸ್ಮಾರ್ಚ್‌ ಸಿಟಿ ವತಿಯಿಂದ ಕೈಗೊಂಡ ಬಸ್‌ ಸ್ಟ್ಯಾಂಡ್‌, ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಏಪ್ರಿಲ್‌ ತಿಂಗಳೊಳಗೆ ಪೂರ್ಣಗೊಳಿಸಬೇಕು.
-ಭೈರತಿ ಬಸವರಾಜ, ಜಿಲ್ಲಾ ಉಸ್ತುವಾರಿ ಸಚಿವ

Follow Us:
Download App:
  • android
  • ios