ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ 1400 ಕೋಟಿ ಅವ್ಯವಹಾರ| ತಲೆ ಮರೆಸಿಕೊಂಡಿರುವ ಅಧ್ಯಕ್ಷ, ನಿರ್ದೇಶಕ, ಸಾಲಗಾರ| 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ಘೋಷಿತ ಅಪರಾಧಿಗಳು ಎಂದು ಘೋಷಣೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ| 

ಬೆಂಗಳೂರು(ಸೆ.26): ಶ್ರೀ ಗುರು ರಾಘವೇಂದ್ರ ಬ್ಯಾಂಕ್‌ನ ಬಹುಕೋಟಿ ವಂಚನೆ ಆರೋಪ ಹೊತ್ತು ತಲೆಮರೆಸಿಕೊಂಡಿರುವ ಬ್ಯಾಂಕ್‌ನ ಅಧ್ಯಕ್ಷ ಹಾಗೂ ನಿರ್ದೇಶಕ, ಸಾಲಗಾರನ ಬಗ್ಗೆ ಮಾಹಿತಿ ನೀಡಿದವರಿಗೆ ಸಿಐಡಿ ಬಹುಮಾನ ಘೋಷಿಸಿದೆ.

Add Asianetnews Kannada as a Preferred SourcegooglePreferred

ಈ ವಂಚನೆ ಕೃತ್ಯ ಬೆಳಕಿಗೆ ಬಂದ ನಂತರ ಬ್ಯಾಂಕ್‌ ಅಧ್ಯಕ್ಷ ಕೆ.ರಾಮಕೃಷ್ಣ, ಅವರ ಪುತ್ರ ಮತ್ತು ನಿರ್ದೇಶಕ ಕೆ.ಆರ್‌.ವೇಣುಗೋಪಾಲ್‌ ಹಾಗೂ ಸಾಲಗಾರ ಜಿ.ರಘುನಾಥ್‌ ಪತ್ತೆಗೆ ಸಿಐಡಿ ಬಲೆ ಬೀಸಿದೆ. ಆದರೆ ಇದುವರೆಗೆ ಸುಳಿವು ಸಿಕ್ಕಿಲ್ಲ. ಹೀಗಾಗಿ ಈ ಮೂರು ಆರೋಪಿಗಳ ಕುರಿತು ಸುಳಿವು ಅಥವಾ ಅವರನ್ನು ಸೆರೆ ಹಿಡಿಯುವ ಸಾರ್ವಜನಿಕರಿಗೆ ಬಹುಮಾನ ಕೊಡಲಾಗುತ್ತದೆ ಎಂದು ಸಿಐಡಿ ಎಸ್‌ಪಿ (ಡಿಟೆಕ್ವಿವ್‌) ರಾಘವೇಂದ್ರ ಕೆ.ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಘವೇಂದ್ರ ಬ್ಯಾಂಕ್‌ ವಂಚನೆ ಕೇಸ್‌: ಅಧ್ಯಕ್ಷನ ಬಂಧನಕ್ಕೆ ಹೈಕೋರ್ಟ್‌ ಸೂಚನೆ

ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ 1400 ಕೋಟಿ ಅವ್ಯವಹಾರದ ಕುರಿತು ಸಿಐಡಿ ತನಿಖೆಗೆ ಸರ್ಕಾರ ವಹಿಸಿದೆ. ಪ್ರಕರಣ ದಾಖಲಾದ ಬಳಿಕ ಮೂವರು ಭೂಗತರಾಗಿದ್ದಾರೆ. ಇನ್ನು 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ಘೋಷಿತ ಅಪರಾಧಿಗಳು ಎಂದು ಘೋಷಣೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಆರೋಪಿಗಳ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಸಿಐಡಿ ಮನವಿ ಮಾಡಿದೆ.
ಸಂಪರ್ಕಿಸಿ:

ಸಿಐಡಿ ಆರ್ಥಿಕ ಅಪರಾಧ ಗುಪ್ತದಳ ಡಿವೈಎಸ್‌ಪಿ ಮೊಬೈಲ್‌ ಸಂಖ್ಯೆ 94808 00181 ಅಥವಾ ದೂರವಾಣಿ. 080-22094485/22094498ಗೆ ಕರೆ ಮಾಡುವಂತೆ ಎಸ್ಪಿ ಕೋರಿದ್ದಾರೆ.