ಇಲ್ಲಿನ ಹಿಂಡಲಗಾ ಕೇಂದ್ರ ಕಾರಗೃಹದಲ್ಲಿ ಇಬ್ಬರು ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಸ್ಕ್ರೂಡ್ರೈವರನಿಂದ ಚುಚ್ಚಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಮಂಡ್ಯ ಮೂಲದ ಸುರೇಶ್‌ ಕುಮಾರ(29) ತೀವ್ರ ಗಾಯಗೊಂಡಿದ್ದಾನೆ. 

ಬೆಳಗಾವಿ (ಜು.31): ಇಲ್ಲಿನ ಹಿಂಡಲಗಾ ಕೇಂದ್ರ ಕಾರಗೃಹದಲ್ಲಿ ಇಬ್ಬರು ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಸ್ಕ್ರೂಡ್ರೈವರನಿಂದ ಚುಚ್ಚಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಮಂಡ್ಯ ಮೂಲದ ಸುರೇಶ್‌ ಕುಮಾರ(29) ತೀವ್ರ ಗಾಯಗೊಂಡಿದ್ದಾನೆ. ಮತ್ತೋರ್ವ ಕೈದಿ ಶಂಕರ ಭಜಂತ್ರಿ (40) ಎಂಬಾತ ಸುರೇಶ ಮೇಲೆ ಸ್ಕ್ರೂಡ್ರೈವರನಿಂದ ಹಲ್ಲೆ ನಡೆಸಿ, ಹಲವು ಬಾರಿ ಇರಿದಿದ್ದಾನೆ. ಮೂಲಗಳ ಪ್ರಕಾರ, ಕ್ಷುಲ್ಲಕ ಕಾರಣಕ್ಕಾಗಿ ಶುರುವಾದ ಜಗಳ ನಂತರ ಹಿಂಸಾಚಾರಕ್ಕೆ ತಿರುಗಿದೆ ಎನ್ನಲಾಗುತ್ತಿದೆ. ಈ ಇಬ್ಬರೂ ಕೈದಿಗಳು ಕುಖ್ಯಾತ ಅಪರಾಧಿಗಳಾಗಿದ್ದಾರೆ. 

Add Asianetnews Kannada as a Preferred SourcegooglePreferred

ಹುಬ್ಬಳ್ಳಿಯಲ್ಲಿ ಕೊಲೆಗೈದ ಆರೋಪಿ ಶಂಕರ ಭಜಂತ್ರಿಯನ್ನು 2022ರಲ್ಲಿ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಈ ಹಿಂದೆ ಗುಲ್ಬರ್ಗಾ ಮತ್ತು ಹುಬ್ಬಳ್ಳಿ ಜೈಲಿನಲ್ಲಿದ್ದ. ಮೂಲಗಳ ಪ್ರಕಾರ, ಅವರು ಮನೋರೋಗಿ ಆಗಿದ್ದು, ಅವರ ನಡವಳಿಕೆ ಮೇಲೆ ನಿಯಂತ್ರಣ ಹೊಂದಿಲ್ಲ. ಈ ಹಿಂದೆಯೂ ಇತರ ಕೈದಿಗಳ ಮೇಲೆ ದಾಳಿ ನಡೆಸಿದ್ದಾನೆ. ಹೀಗಾಗಿ, ಅವರನ್ನು ಒಂಟಿ ಸೆಲ್‌ನಲ್ಲಿ ಇರಿಸಲಾಗಿತ್ತು. 

ವ್ಯಸನಮುಕ್ತರು ಸತ್ಪ್ರಜೆಗಳಾಗಿ ಬದುಕಬೇಕು: ಯು.ಟಿ.ಖಾದರ್‌

ಜೈಲಿನಲ್ಲಿ ಟೈಲರಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಈತ ಅಲ್ಲಿಂದ ಸ್ಕ್ರೂಡ್ರೈವರ ಪಡೆದಿದ್ದಾನೆ. ಹೊಟ್ಟೆ, ಎದೆ ಮತ್ತು ಕಿವಿಗೆ ಗಾಯಗಳಾಗಿರುವ ಸುರೇಶ್‌ ಕುಮಾರನನ್ನು ಜೈಲಿನ ಅಧಿಕಾರಿಗಳು ತಕ್ಷಣ ಜಿಲ್ಲಾಸ್ಪತ್ರೆ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಿದ್ದಾರೆ. ಬೆಳಗಾವಿ ಜಿಲ್ಲಾಸ್ಪತ್ರೆಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಘರ್ಷಣೆ ವೇಳೆ ಸುರೇಶ್‌ಕುಮಾರ ಗಾಯಗೊಂಡಿದ್ದ ಶಂಕರಗೆ ಥಳಿಸಿದ್ದಾನೆ. 

ಹಣ ಹಾಗೂ ಹೆಣದ ಮೇಲೆ ಕಾಂಗ್ರೆಸ್‌ ರಾಜಕಾರಣ: ಎನ್‌.ರವಿಕುಮಾರ್‌

ಸುರೇಶ್‌ಕುಮಾರ್‌ ಈ ಹಿಂದೆ ಮಂಡ್ಯ, ಚನ್ನಪಟ್ಟಣ, ರಾಮನಗರದಲ್ಲಿ ನಡೆದ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹಿಂಡಲಗಾ ಜೈಲಿಗೆ ಬಂದ ಬಳಿಕ ತನಗೆ ಮಧುಮೇಹ ಇದ್ದು, ಉತ್ತಮ ಆಹಾರ ನೀಡುತ್ತಿಲ್ಲ ಎಂದು ನ್ಯಾಯಾಧೀಶರ ಮುಂದೆ ಜೈಲು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಗಾಯಾಳುಗಳು ಅಪಾಯದಿಂದ ಪಾರಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ. ಶಂಕರ ಭಜಂತ್ರಿ ವಿರುದ್ಧ ಪ್ರಕರಣ ದಾಖಲಾಗಿದೆ.