Asianet Suvarna News Asianet Suvarna News

ಮಂಗಳೂರಿನಲ್ಲಿ ‌ಪ್ರಧಾನಿ‌ ಮೋದಿ ಕಾರ್ಯಕ್ರಮದ ಸಮಯ ಬದಲಾವಣೆ: ವಿವರ ಇಲ್ಲಿದೆ..

ಪ್ರಧಾನಿ ಮೋದಿ ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಆಗಮಿಸುತ್ತಿದ್ದು, ಸಮಾವೇಶಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಈ ಮಧ್ಯೆ, ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸುವ ಸಮಯ ಬದಲಾವಣೆಯಾಗಿದೆ. 

prime minister modi mangaluru visit time changed details here ash
Author
First Published Aug 29, 2022, 10:56 PM IST

ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್‌ 2 ರಂದು ಆಗಮಿಸುತ್ತಿದ್ದು, ಆದರೆ ಮೋದಿ ಕಾರ್ಯಕ್ರಮದ ಸಮಯ ಬದಲಾವಣೆಯಾಗಿದೆ. ಸೆಪ್ಟೆಂಬರ್ 2ರ ಮಧ್ಯಾಹ್ನ 1 ಗಂಟೆಗೆ ಸುಮಾರಿಗೆ ಮಂಗಳೂರಿಗೆ ಆಗಮಿಸಲಿರುವ ಮೋದಿ, ಮಧ್ಯಾಹ್ನ 3 ಗಂಟೆ ವೇಳೆಗೆ ವಾಪಸಾಗಲಿದ್ದಾರೆ ಎಂದು ತಿಳಿದುಬಂದಿದೆ. ಈ ಮೊದಲು ಸಂಜೆ 4 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ ಈಗ ಮಧ್ಯಾಹ್ನವೇ ನಡೆಯಲಿದೆ. ಸೆಪ್ಟೆಂಬರ್‌ 2 ರಂದು ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸುವುದು ದೃಢಪಟ್ಟಿದ್ದು, ಆದರೆ, ಮೋದಿ ಕಾರ್ಯಕ್ರಮದ ಸಮಯ ಬದಲಾವಣೆಯಾಗಿದೆ. ಸೆಪ್ಟೆಂಬರ್ 2ರ ಮಧ್ಯಾಹ್ನ 1 ಗಂಟೆಗೆ ಸುಮಾರಿಗೆ ಮಂಗಳೂರಿಗೆ ಮೋದಿ ಆಗಮಿಸುತ್ತಿದ್ದು, ಮಧ್ಯಾಹ್ನ 1.30ರಿಂದ 2.30ರ ವರೆಗೆ ಸಮಾವೇಶದಲ್ಲಿ ಮೋದಿ ‌ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಕೊಚ್ಚಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಲಿರುವ ಮೋದಿ, ಮಂಗಳೂರು ಏರ್‌ಪೋರ್ಟ್‌ನಿಂದ ಹೆಲಿಕಾಪ್ಟರ್ ಮೂಲಕ ಮಂಗಳೂರು ಬಂದರಿನ ಹೆಲಿಪ್ಯಾಡ್‌ನಲ್ಲಿ‌ ಲ್ಯಾಂಡಿಂಗ್ ಆಗಲಿದ್ದಾರೆ ಎನ್ನಲಾಗಿದೆ. 

ಅಲ್ಲಿಂದ ಸಮಾವೇಶ ನಡೆಯುವ ಸ್ಥಳವಾದ ಕೂಳೂರಿನ ಗೋಲ್ಡ್ ಫಿಂಚ್‌ ಸಿಟಿ ಮೈದಾನಕ್ಕೆ ರಸ್ತೆ ‌ಮೂಲಕ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಮಧ್ಯಾಹ್ನ 1.30ರಿಂದ 2.30ರ ವರೆಗೆ ಸಮಾವೇಶದಲ್ಲಿ ಮೋದಿ ‌ಭಾಗಿಯಾಗಲಿದ್ದು, ಮಧ್ಯಾಹ್ನ 3 ಗಂಟೆ ಹೊತ್ತಿಗೆ ಮಂಗಳೂರಿನಿಂದ ಪ್ರಧಾನಿ ವಾಪಸಾಗಲಿದ್ದಾರೆ ಎಂದು ತಿಳಿದುಬಂದಿದೆ. ಅಧಿಕೃತ ಸರ್ಕಾರಿ ಕಾರ್ಯಕ್ರಮದ ಫಲಾನುಭವಿಗಳ ಸಮಾವೇಶದಲ್ಲಿ ಪ್ರಧಾನಿ ಭಾಗಿಯಾಗಲಿದ್ದು, ಈ ಸಮಾವೇಶದ ವೇದಿಕೆಯಲ್ಲೇ ನವಮಂಗಳೂರು ಬಂದರು ಹಾಗೂ ಇತರೆ 3 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಈ ಮೊದಲು ಸಂಜೆ 4 ಗಂಟೆಗೆ ನಿಗದಿಯಾಗಿದ್ದ ಮೋದಿ ಕಾರ್ಯಕ್ರಮದಲ್ಲಿ ಈಗ ಸಮಯ ಬದಲಾವಣೆಯಾಗಿದೆ. ಆದರೆ, ಸಮಯ ಬದಲಾವಣೆಗೆ ನಿರ್ದಿಷ್ಟವಾದ ಕಾರಣ ತಿಳಿದುಬಂದಿಲ್ಲ. 

ಮಂಗಳೂರು ಮೋದಿ ಸಮಾವೇಶಕ್ಕೆ ನಾಲ್ಕೇ ದಿನ: ಇಂದು ಎಸ್‌ಪಿಜಿ ಆಗಮನ

ಈ ಮಧ್ಯೆ, ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಘಟನೆ ಮುಂದಿಟ್ಟುಕೊಂಡು ಕರಾವಳಿ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನದ ಪೋಸ್ಟರ್‌ಗಳ ವೈರಲ್‌ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಪಕ್ಷದಿಂದಲೇ ಪ್ರತಿ ಪೋಸ್ಟರ್‌ ಟ್ರೋಲ್‌ ಶುರುವಾಗಿದೆ. ಮಂಗಳೂರಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಕಾರ್ಯಕರ್ತರನ್ನು ಕರೆತರುವ ದಿಶೆಯಲ್ಲಿ ಬೂತ್‌ ಭೇಟಿಯಲ್ಲಿರುವ ಮುಖಂಡರು, ಏಕಕಾಲಕ್ಕೆ ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ.

ನಾಯಕರ ವಿರುದ್ಧದ ಅಸಮಾಧಾನ ತಣಿಯಬೇಕು. ಸಮಾವೇಶಕ್ಕೂ ಕಾರ್ಯಕರ್ತರೂ ಆಗಮಿಸಬೇಕು. ಈ ಎರಡು ಅಜೆಂಡಾ ಇರಿಸಿಕೊಂಡು ಪಕ್ಷ ಮುಖಂಡರು ಬೂತ್‌ ಭೇಟಿ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರ ವಿರುದ್ಧದ ಅಸಮಾಧಾನಿತರ ಟ್ರೋಲ್‌ ಹಿಂದೆ ಕಾಂಗ್ರೆಸ್‌ ಕೈವಾಡವನ್ನು ಆರೋಪಿಸುವ ಮುಖಂಡರು, ಈ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಲು ಹೊರಟಿದ್ದಾರೆ.

ಮೋದಿ ಮಂಗಳೂರು ಸಮಾವೇಶಕ್ಕೆ 2 ಲಕ್ಷ ಜನ?

ಇನ್ನೊಂದೆಡೆ, ಕರಾವಳಿಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಸೆ.2ರಂದು ಕೂಡ ಭಾರಿ ಮಳೆಯ ಮುನ್ಸೂಚನೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಸಮಾವೇಶಕ್ಕೆ ತೊಂದರೆಯಾಗದಂತೆ ಇಡೀ ಸಮಾವೇಶ ಸ್ಥಳವನ್ನು ಪೂರ್ತಿಯಾಗಿ ನೆಲಮಟ್ಟದಿಂದ ತುಸು ಎತ್ತರದಲ್ಲಿ ರಚಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಒಂದು ವೇಳೆ ಭಾರಿ ಮಳೆ ಬಂದರೂ ಕಾರ್ಯಕ್ರಮಕ್ಕೆ ತೊಂದರೆಯಾಗದು. ಅಲ್ಲದೆ ಮಳೆ ನೀರು ನಿಂತು ಕೆಸರಿನ ತಾಪತ್ರಯವೂ ಇರದು. ಜರ್ಮನ್‌ ಮಾದರಿ ಬೃಹತ್‌ ಪೆಂಡಾಲ್‌ ಮಳೆಯಿಂದ ಪೂರ್ತಿ ರಕ್ಷಣೆ ನೀಡಲಿದ್ದು, ಇದಕ್ಕೆ ಬೇಕಾದ ಎಲ್ಲ ರೀತಿಯ ತಯಾರಿಗಳನ್ನು ಮಾಡಲಾಗುತ್ತಿದೆ.

Follow Us:
Download App:
  • android
  • ios