ಸರ್ಕಾರಿ ಆಸ್ಪತ್ರೆಗೆ ಬರುವವರು ಹೆಚ್ಚಿನವರು ಬಡವರು. ಕಡಿಮೆ ಹಣದಲ್ಲಿ ಉತ್ತಮ ಚಿಕಿತ್ಸೆಯ ನಿರೀಕ್ಷೆಯಲ್ಲಿ ಬರುವ ಜನರಿಂದಲೇ ಹಣ ಪೀಕಿಸುವ ಘಟನೆಗಳು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿವೆ. ಆದರೆ, ಡಿಸ್ಟ್ರಿಕ್ಟ್ ಸರ್ಜನ್ ಈ ಆರೋಪಗಳನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. 

ವರದಿ: ಕಿರಣ್ ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜುಲೈ 15): ಸರ್ಕಾರಿ ಆಸ್ಪತ್ರೆ ಅಂದ್ರೆ ಅದು ಬಡವರ ಪರವಾಗಿ ಇರುವುದು ಎಂದು ಜನರು ಭಾವಿಸಿದ್ದಾರೆ. ಆದ್ರೆ ಈ ಜಿಲ್ಲೆಯಲ್ಲಿರುವ ಸರ್ಕಾರಿ ಜಿಲ್ಲಾಆಸ್ಪತ್ರೆ ಬಡ ರೋಗಿಗಳು ಹಾಗೂ ಅವರ ಸಂಬಂಧಿಕರ ರಕ್ತ ಹೀರುವ ಕೇಂದ್ರವಾಗಿದೆ. ಯಾವ ಸಿಬ್ಬಂದಿ‌ ನೋಡಿದ್ರು ‌ದುಡ್ಡು ದುಡ್ಡು ಎಂದು ಬಾಯ್ಬಿಡ್ತಿದ್ದಾರೆ. ಇಲ್ಲಿನ ಜಿಲ್ಲಾಸ್ಪತ್ರೆಯ ಕರ್ಮಕಾಂಡವನ್ನು ಖಂಡಿಸಿ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ವೈದ್ಯರ ಜೊತೆ ವಾಗ್ವಾದ ಮಾಡ್ತಿರೋ ರೋಗಿಯ ಸಂಬಂಧಿಕರು‌. ಮತ್ತೊಂದೆಡೆ ಚಿಕಿತ್ಸೆ ಪಡೆಯುತ್ತಿರುವ ರೋಗಿ ರತ್ನಮ್ಮ ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಬಳಿ. ಸರ್ಕಾರಿ ಆಸ್ಪತ್ರೆ ಅಂದ್ರೆ ಸಾಕು ಗ್ರಾಮೀಣ ಭಾಗದ ಜನರು ಹಣ ಕಡಿಮೆ ಉತ್ತಮ ಚಿಕಿತ್ಸೆ ಪಡೆದು ಗುಣಮುಖ ಆಗಬಹುದು ಎಂದು ಆಧರಿಸಿ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಆದರೆ, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ರೋಗಿಗಳನ್ನು ವಾರ್ಡ್ ಗೆ ಕರೆದುಕೊಂಡು ಹೋಗುವ ತಳ್ಳೋ ಗಾಡಿಯಿಂದ ಹಿಡಿದು, ಡಾಕ್ಟರ್‌ಗಳಿಗೂ ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗೋದು ಎಂದು ರೋಗಿಯ ಕಡೆಯವರು ಆರೋಪಿಸಿದ್ದಾರೆ. ಹೆಚ್ಚಾಗಿ ಗ್ರಾಮೀಣ ಭಾಗದಿಂದ ಜನರು ಕಡಿಮೆ ಖರ್ಚು ಎಂದು ಜಿಲ್ಲಾಸ್ಪತ್ರೆಗೆ ಬಂದ್ರೆ ಇಲ್ಲಿನ ಸಿಬ್ಬಂದಿಗಳು ಒಂದು ರೋಗಿಗೆ ತಳ್ಳೋ ಗಾಡಿಯವರು ನೂರು ರೂಪಾಯಿ ಇಸ್ಕೊಳ್ತಾರೆ ಅಂದ್ರೆ ಬಡವರು ಎಲ್ಲಿಗೆ ಹೋಗಬೇಕು. ಆದ್ದರಿಂದ ಕೂಡಲೇ ಈ ಕುರಿತು ಜಿಲ್ಲಾಡಳಿತ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಬಡವರಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದು ಆಗ್ರಹಿಸಿದರು.

ಈ ಕುರಿತು ಡಿಸ್ಟ್ರಿಕ್ಟ್ ಸರ್ಜನ್ ವಿಚಾರಿಸಿದರೆ, ನಮ್ಮ ಆಸ್ಪತ್ರೆಯಲ್ಲಿ ರತ್ನಮ್ಮ ಎಂಬ ರೋಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಇನ್ನೂ ಆಪರೇಷನ್ ಮಾಡಿರಲಿಲ್ಲ ಆದರೆ ಅವರೇ ಪದೇ ಪದೇ ವಾರ್ಡ್ ನಿಂದೆ ಹೊರಗಡೆ ಬರುತ್ತಿದ್ದರು. ಆದ್ರೆ, ಕೆಲವು ಸಿಬ್ಬಂದಿಗಳು ಹಣ ಕೇಳಿದ್ದಾರೆ ಎಂದು ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ. ಆ ರೀತಿ ನನ್ನ ಗಮನಕ್ಕೆ ಬಂದಿಲ್ಲ ಅದು ಸುಳ್ಳು ಸುಮ್ಮನೆ ಇವರು ಕಟ್ಟು ಕಥೆ ಹೇಳುತ್ತಿದ್ದಾರೆ. ಅಚಾನಕ್ ಆಗಿ ಊರಿನ್ ಬ್ಯಾಗ್ ಹಿಡಿದುಕೊಂಡು ಹೊರಗಡೆ ಬಂದಿದ್ದಾರೆ. ಆದರೆ, ಸಿಬ್ಬಂದಿಗಳು ಯಾವುದೇ ಹಣ ಕೇಳಿಲ್ಲ ಎಂದು ಸಮರ್ಥಿಸಿಕೊಳ್ಳುವ ಮೂಲಕ ಬೇಜವಾಬ್ದಾರಿ ಉತ್ತರ ನೀಡ್ತಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಮಧ್ಯ ಕರ್ನಾಟಕದ ಮಿನಿ ಊಟಿ ಜೋಗಿಮಟ್ಟಿ

ಒಟ್ಟಾರೆಯಾಗಿ ಸರ್ಕಾರಿ ಆಸ್ಪತ್ರೆಗೆ ಬಂದು ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪಡೆಯುವ ಆಲೋಚನೆಯಲ್ಲಿ ಜನ ಇದ್ದಾರೆ. ಆದ್ರೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿನ ಸಿಬ್ಬಂದಿಗಳ ಕರ್ಮಕಾಂಡ ನಿನ್ನೆ‌ ಮೊನ್ನೆದಲ್ಲ. ಇಷ್ಟೆಲ್ಲಾ ಆರೋಪಗಳು ಅನೇಕ ರೋಗಿ ಸಂಬಂಧಿಕರು ಮಾಡುತ್ತಿದ್ದರೂ, ಅಧಿಕಾರಿಗಳು ಮಾತ್ರ ಸಮರ್ಥನೆ ಮಾಡಿಕೊಂಡೇ ಕಾಲ ಕಳೆಯುತ್ತಿರೋದು ಖಂಡನೀಯ. 

Add Asianetnews Kannada as a Preferred SourcegooglePreferred