64ನೇ ಕನ್ನಡ ರಾಜ್ಯೋತ್ಸವ: ನಮ್ಮ ಭಾಷೆಯಲ್ಲಿಯೇ ಶುಭ ಕೋರಿದ ಮೋದಿ
ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ಕನ್ನಡದಲ್ಲಿಯೇ ಟ್ವೀಟ್ ಮಾಡಿ, ಶುಭ ಹಾರೈಸಿದ್ದಾರೆ. ಮೋದಿಗೆ ಕನ್ನಡದಲ್ಲಿ ಶುಭ ಕೋರುವುದರೊಂದಿಗೆ, ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೋವಿಗೆ ತಡವಾಗಿ ಸ್ಪಂದಿಸಿದ ಮೋದಿ ಬಗ್ಗೆ ಕನ್ನಡಿಗರು ತಮ್ಮ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ನ.1): ಕನ್ನಡಿಗರು 64ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಿದ್ದು, ಈ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ಕನ್ನಡದಲ್ಲಿಯೇ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
'ರಾಷ್ಟ್ರದ ಬೆಳವಣಿಗೆಗೆ ಕರ್ನಾಟಕ ನೀಡಿದ ಅತ್ಯುನ್ನತ ಕೊಡುಗೆಯನ್ನು ಆಚರಣೆ ಮಾಡುವ ದಿವಸವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ವಿಶಾಲ ಹೃದಯವಂತಿಕೆ ಹಾಗೂ ಕನ್ನಡ ನಾಡಿನ ಸೌಂದರ್ಯ ಹೆಸರುವಾಸಿಯಾದದ್ದು. ಬರುವ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ,' ಎಂದು ಮೋದಿ ಹೇಳಿದ್ದಾರೆ.
/p>
ಮೋದಿಯ ಕನ್ನಡ ಟ್ವೀಟಿಗೆ ಬಹುತೇಕರು ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದ್ದು, ಮೋದಿ ಅವರಿಗೂ ಶುಭ ಹಾರೈಸಿದ್ದಾರೆ. ಜತೆಗೆ ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರ ನೋವಿಗೆ ತಡವಾಗಿ ಸ್ಪಂದಿಸಿದ್ದಕ್ಕೆ ಇದೇ ಸಂದರ್ಭದಲ್ಲಿ ಆಕ್ರೋಶವೂ ವ್ಯಕ್ತಪಡಿಸಿದ್ದಾರೆ ಕನ್ನಡಿಗರು.
ಕನ್ನಡಿಗರಲ್ಲಿ ಕಡಿಮೆಯಾಗುತ್ತಿದೆ ಫಲವತ್ತತೆ
'ನೀವು ಕನ್ನಡ ಭಾಷೆಯಲ್ಲಿ ಮಾತನಾಡುವುದನ್ನು ಕೇಳುವುದೇ ಚೆಂದ ಮೋದಿ ಅವರೇ. ಹೌದು ಕರ್ನಾಟಕ ವಿಶಾಲ ಹೃದಯವುಳ್ಳ ಹೆಮ್ಮೆಯ ಕನ್ನಡಿಗರ ನಾಡು. ಕನ್ನಡ ರಾಜ್ಯೋತ್ಸವದ ಶುಭಾಶಯಗಳು.' ಎಂದು ಒಬ್ಬರುಹೇಳಿದರೆ, ಮತ್ತೊಬ್ಬರು 'ಇನ್ನೂ ಕಾಲ ಮಿಂಚಿಲ್ಲ ಕನ್ನಡತನವನ್ನು ಉಳಿಸಿ ಬೆಳೆಸುವ ನಿಮ್ಮ ಮಾತು ಬರೀ ಟ್ವೀಟ್ ಗೆ ಸೀಮಿತವಾಗದೆ ಕಾರ್ಯರೂಪಕ್ಕೆ ಬರುವ ಮಾತಾಗಲಿ,' ಎಂದು ಪ್ರಧಾನಿಗೆ ಕಿವಿ ಮಾತು ಹೇಳಿದ್ದಾರೆ.
ಕನ್ನಡ ಧ್ವಜ ವಿವಾದ:
ಒಂದೆಡೆ ಮೋದಿ ಕನ್ನಡದಲ್ಲಿಯೇ ಕನ್ನಡ ರಾಜ್ಯೋತ್ಸವ ಶುಭ ಕೋರಿದರೆ, ಮತ್ತೊಂದೆಡೆ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಹೊರಡಿಸಿರುವ ಸುತ್ತೋಲೆಯೊಂದು ವಿವಾದಕ್ಕೆ ಕಾರಣವಾಗಿದೆ. ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ರಾಜ್ಯದ ಯಾವ ಭಾಗದಲ್ಲಿಯೂ ಕನ್ನಡ ಧ್ವಜ ಹಾರಾಟ ಬೇಡ, ಬದಲಾಗಿ ರಾಷ್ಟ್ರಧ್ವಜವನ್ನಷ್ಟೇ ಹಾರಿಸಬೇಕು ಎಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಅಲ್ಲದೇ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವದಂದು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜಿಸಿ, ರಾಷ್ಟ್ರ ಧ್ವಜಾರೋಹಣ ಮಾಡಬೇಕೆಂದು ಸುತ್ತೋಲೆಯಲ್ಲಿದೆ.
ಇಂದಿನಿಂದ ನಾಮ ಫಲಕದಲ್ಲಿ ಕಡ್ಡಾಯವಾಗಿ ಕನ್ನಡ ಇರಬೇಕು
ಈ ವಿವಾದದ ಬಗ್ಗೆ ಮೋದಿ ಟ್ವೀಟಿಗೆ ಪ್ರತಿಕ್ರಿಯೆ ನೀಡಿರುವ ಕನ್ನಡಿಗರೊಬ್ಬರು ಪ್ರತಿಕ್ರಿಯೆ ನೀಡಿ, 'ನಮ್ಮ ನಾಡಿನ ಧ್ವಜದ ತಂಟೆಗೆ ನಿಮ್ಮ ಪಕ್ಷ, ನಿಮ್ಮದೇ ಇಚ್ಛೆಯ ಕಾನೂನು ಕೇಂದ್ರಾಡಳಿತ ತಲೆ ಹಾಕುತ್ತಿದೆ. ಮುಂದೆ ನಿಮ್ಮ ಪಕ್ಷಕ್ಕೆ ಶನಿ ಹೆಗಲೇರುವ ಕಾಲ ದೂರವಿಲ್ಲ. ಎಚ್ಚರಿಕೆ.ನಾವ್ ಕನ್ನಡಿಗರು, ಕನ್ನಡಕ್ಕಾಗಿ ಪ್ರತಿ ಕನ್ನಡಿಗನೂ ಕಾವಲಿಗರು.' ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.