Asianet Suvarna News Asianet Suvarna News

ಹುಬ್ಬಳ್ಳಿಗೆ ಇಂದು ಪ್ರಧಾನಿ ಮೋದಿ: ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ

2012ರಲ್ಲಿ ಮಂಗಳೂರಲ್ಲಿ ಒಂದು ದಿನದ ಯುವಜನೋತ್ಸವ ನಡೆದಿತ್ತು. ಇದೀಗ ಮೊದಲ ಬಾರಿಗೆ ಉತ್ತರ ಕರ್ನಾಟಕಕ್ಕೆ ಯುವಜನೋತ್ಸವದ ಆತಿಥ್ಯ ಸಿಕ್ಕಿದೆ. ಈ ಉತ್ಸವದ ಉದ್ಘಾಟನೆ ಮಾತ್ರ ಹುಬ್ಬಳ್ಳಿಯಲ್ಲಿ ನಡೆಯಲಿದ್ದು, 5 ದಿನಗಳ ಕಾರ್ಯಕ್ರಮಗಳೆಲ್ಲ ಧಾರವಾಡದಲ್ಲೇ ನಡೆಯಲಿವೆ. 

PM Narendra Modi Will Be Come to Hubballi on Jan 12th grg
Author
First Published Jan 12, 2023, 4:14 AM IST

ಹುಬ್ಬಳ್ಳಿ(ಜ.12): ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಗುರುವಾರ) ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದು, ಹನ್ನೊಂದು ವರ್ಷದ ಬಳಿಕ ಕರ್ನಾಟಕದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

2012ರಲ್ಲಿ ಮಂಗಳೂರಲ್ಲಿ ಒಂದು ದಿನದ ಯುವಜನೋತ್ಸವ ನಡೆದಿತ್ತು. ಇದೀಗ ಮೊದಲ ಬಾರಿಗೆ ಉತ್ತರ ಕರ್ನಾಟಕಕ್ಕೆ ಯುವಜನೋತ್ಸವದ ಆತಿಥ್ಯ ಸಿಕ್ಕಿದೆ. ಈ ಉತ್ಸವದ ಉದ್ಘಾಟನೆ ಮಾತ್ರ ಹುಬ್ಬಳ್ಳಿಯಲ್ಲಿ ನಡೆಯಲಿದ್ದು, 5 ದಿನಗಳ ಕಾರ್ಯಕ್ರಮಗಳೆಲ್ಲ ಧಾರವಾಡದಲ್ಲೇ ನಡೆಯಲಿವೆ. ಇದಕ್ಕೆ ಬೇಕಾದ ಸಿದ್ಧತೆಗಳು ಪೂರ್ಣಗೊಂಡಿದ್ದು, 7,500 ಪ್ರತಿನಿಧಿಗಳು ಸೇರಿ 40 ಸಾವಿರಕ್ಕೂ ಅಧಿಕ ಯುವ ಸಮೂಹ ಪಾಲ್ಗೊಳ್ಳಲಿದೆ.
ಯುವ ಜನೋತ್ಸವ ಉದ್ಘಾಟನಾ ಸಮಾರಂಭ ಬರೋಬ್ಬರಿ ಒಂದೂವರೆ ತಾಸಿನ ಕಾರ್ಯಕ್ರಮ. ಸಂಜೆ 4ಕ್ಕೆ ಆರಂಭವಾಗುವ ಕಾರ್ಯಕ್ರಮ ಸಂಜೆ 5.30ರ ಹೊತ್ತಿಗೆ ಪೂರ್ಣಗೊಳ್ಳಲಿದೆ. ಪ್ರಧಾನಿ ಮೋದಿ 30 ರಿಂದ 40 ನಿಮಿಷ ಭಾಷಣ ಮಾಡಲಿದ್ದಾರೆ.

NATIONAL YOUTH DAY 2023: ಪ್ರಧಾನಿ ಮೋದಿಗಾಗಿ ವಿಶೇಷ ಕಲಾಕೃತಿ ತಯಾರಿಸಿದ ಧಾರವಾಡದ ಯುವ ಕಲಾವಿದ

ಇಡೀ ನಗರವೇ ಸಿಂಗಾರ:

ರಾಷ್ಟ್ರೀಯ ಯುವಜನೋತ್ಸವ ಅಂಗವಾಗಿ ಮೈದಾನದಲ್ಲಿ ಬೃಹತ್‌ ವೇದಿಕೆ ನಿರ್ಮಿಸಲಾಗಿದೆ. 40 ಸಾವಿರದವರೆಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಯುವ ಸಮೂಹವೇನಾದರೂ ಆಗಮಿಸಿದರೆ ಅವರಿಗೆ ಕೂರಲೂ ಪ್ರತ್ಯೇಕ ವ್ಯವಸ್ಥೆ ಇದೆ. ಜತೆಗೆ ಅಲ್ಲಲ್ಲಿ ಎಲ್‌ಇಡಿ ಸ್ಕ್ರೀನ್‌ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಂಗವಾಗಿ ಇಡೀ ನಗರವನ್ನು ಸಿಂಗರಿಸಲಾಗಿದೆ. ಮೋದಿ ಸಂಚರಿಸುವ ಮಾರ್ಗದಲ್ಲಿ ಧೂಳು ಏಳದಂತೆ ರಸ್ತೆ ದುರಸ್ತಿ ಮಾಡಲಾಗಿದೆ. ಕಾಂಪೌಂಡ್‌, ರಸ್ತೆ ವಿಭಜಕಗಳಿಗೆ ಸುಣ್ಣ ಬಣ್ಣ ಬಳಿಯಲಾಗಿದೆ. ಕಾಂಪೌಂಡ್‌ಗಳ ಮೇಲೆ ಸುಂದರವಾದ ಗೋಡೆ ಬರಹ, ಚಿತ್ರಗಳನ್ನು ಬರೆದು ಸಿಂಗರಿಸಲಾಗಿದೆ. ನಗರದಲ್ಲಿ ಎಲ್ಲ ಸರ್ಕಾರಿ ಕಚೇರಿಗಳ ಕಟ್ಟಡಗಳನ್ನು ವಿದ್ಯುತ್‌ ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ಅಲ್ಲಲ್ಲಿ ಬಿಜೆಪಿ ಮುಖಂಡರ ಕಟೌಟ್‌, ಮೋದಿ ಹಾಗೂ ವಿವೇಕಾನಂದರ ಬೃಹತ್‌ ಕಟೌಟ್‌ಗಳು ರಾರಾಜಿಸುತ್ತಿವೆ.

ಪಥ ಸಂಚಲನ-5 ಕಲಾ ತಂಡ:

ರೈಲ್ವೆ ಮೈದಾನದಲ್ಲಿ 70/40 ಅಡಿ ಅಳತೆಯ ಬೃಹತ್‌ ವೇದಿಕೆ ಸಿದ್ಧಪಡಿಸಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಜಾನಪದ ಲೋಕ ಕೂಡ ಅನಾವರಣಗೊಳ್ಳಲಿರುವುದು ವಿಶೇಷ. ರಾಜ್ಯದ ಐದು ಕಲಾ ಮೇಳಗಳು ಸೇರಿ ವಿವಿಧ ತಂಡಗಳಿಂದ ಜಾನಪದ ಪಥ ಸಂಚಲನ ನಡೆಸಲಿವೆ. ಕೆಲಗೇರಿಯ ಶ್ರೀ ದುರ್ಗಾದೇವಿ ಜಾನಪದ ಜಗ್ಗಲಗಿ ಮೇಳ, ಸಾಗರದ ಬೂದಿಯಪ್ಪ ಡೊಳ್ಳಿನ ತಂಡ, ಶೇರೆವಾಡದ ವೆಂಕಪ್ಪ ಭಜಂತ್ರಿ ಕರಡಿ ಮಜಲು, ಉಡುಪಿಯ ಲಕ್ಷ್ಮಿ ನಾರಾಯಣ ಚಂಡೆ ಮದ್ದಳೆ, ಮೈಸೂರಿನ ನಗಾರಿ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಳ್ಳಲಿವೆ. ಮಹಾರಾಷ್ಟ್ರದ ಧ್ರುವಂ ಗ್ಲೋಬಲ್‌ ಸ್ಕೂಲ್‌ನ ವಿದ್ಯಾರ್ಥಿಗಳು ಡಾನ್ಸ್‌ ಹಾಗೂ ಯೋಗ ಪ್ರದರ್ಶಿಸಲಿದ್ದಾರೆ. ಮಧ್ಯಪ್ರದೇಶದ ತಂಡವು ಮಲ್ಲಕಂಬ ಪ್ರದರ್ಶನ ನೀಡಲಿದೆ. ಈ ಎರಡೂ ಕಾರ್ಯಕ್ರಮಕ್ಕೆ ಪ್ರತ್ಯೇಕ ವೇದಿಕೆ ಸಿದ್ಧಪಡಿಸಲಾಗಿದೆ.

ವೇದಿಕೆ ಮೇಲೆ 24 ಜನ:

ಮೋದಿ ಸೇರಿ 25 ಮಂದಿ ವೇದಿಕೆ ಅಲಂಕರಿಸಲಿದ್ದಾರೆ. ಮೊದಲ ಸಾಲಿನಲ್ಲಿ ಪ್ರಧಾನಿ, ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಸಚಿವರು, ಜಿಲ್ಲಾ ಮಂತ್ರಿ ಸೇರಿ 11 ಮಂದಿ ಗಣ್ಯಾತಿಗಣ್ಯರು ಇದ್ದರೆ, ಎರಡನೇ ಸಾಲಿನಲ್ಲಿ ಸ್ಥಳೀಯ ಶಾಸಕರು, ಎಂಎಲ್ಸಿಗಳು, ಮೇಯರ್‌ ಸೇರಿ 14 ಮಂದಿ ಕುಳಿತುಕೊಳ್ಳಲಿದ್ದಾರೆ. ಮಾಜಿ ಸಿಎಂ ಜಗದೀಶ ಶೆಟ್ಟರ್‌ ಮೊದಲ ಸಾಲಿನಲ್ಲೇ ಕುಳಿತುಕೊಳ್ಳಲಿದ್ದಾರೆ.

ಮೋದಿ ರೋಡ್‌ಶೋ ಇಲ್ಲ:

ಯುವಜನೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗೆ 8 ಕಿ.ಮೀ. ರಸ್ತೆ ಮಾರ್ಗದ ಮೂಲಕ ವಾಹನದಲ್ಲಿ ಪ್ರಧಾನಿ ಮೋದಿ ತೆರಳಲಿದ್ದಾರೆ. ಮಾರ್ಗಮಧ್ಯೆ ಪ್ರಧಾನಿ ಎರಡ್ಮೂರು ಕಡೆ ವಾಹನ ನಿಲುಗಡೆ ಮಾಡಿ ಜನರನ್ನು ಮಾತನಾಡಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.

ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜ.12 ರಂದು ಕಳೆದ 25 ವರ್ಷಗಳಿಂದ ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯದಿಂದ ರಾಷ್ಟ್ರೀಯ ಯುವಜನೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಯುವಕರಲ್ಲಿನ ಸಾಂಸ್ಕೃತಿಕ ಪ್ರತಿಭೆಗೆ ವೇದಿಕೆ ಒದಗಿಸುವ ಜತೆಗೆ ಅವರಲ್ಲಿ ರಾಷ್ಟ್ರೀಯ ಏಕತೆ, ಕೋಮುಸೌಹಾರ್ದತೆ, ಧೈರ್ಯ ಹಾಗೂ ಸಾಹಸ ಪರಿಕಲ್ಪನೆ ಮೂಡಿಸುವ ದೃಷ್ಟಿಯಿಂದ ಈ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಧಾರವಾಡದಲ್ಲಿ ಇದೀಗ 26ನೇ ಯುವಜನೋತ್ಸವ ನಡೆಯುತ್ತಿದ್ದು, ಐದು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಸ್ಪರ್ಧೆ, ಸಾಹಸಕ್ರೀಡೆಗಳು ಸೇರಿ ವಿವಿಧ ಕಾರ್ಯಕ್ರಮ ನಡೆಯಲಿವೆ. ಕರ್ನಾಟಕ ಕಾಲೇಜು ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆದರೆ, ಇದೇ ಕಾಲೇಜು ಮೈದಾನದಲ್ಲಿ ಯುವ ಕ್ಲೈಂಬಿಂಗ್‌ ಕಾರಾರ‍ಯಗಾರ, ಯುವ ವಾಯುಯಾನ ಕಾರ್ಯಾಗಾರ, ಹುಬ್ಬಳ್ಳಿಯ ಈಜುಗೊಳದಲ್ಲಿ ಯುವ ಸ್ಕೂಬಾ ಡೈವಿಂಗ್‌, ಕವಿವಿಯಲ್ಲಿ ಮೌಂಟನ್‌ ಬೈಕಿಂಗ್‌, ಆರ್‌.ಎನ್‌. ಶೆಟ್ಟಿಕ್ರೀಡಾಂಗಣದಲ್ಲಿ ದೇಸಿ ಕ್ರೀಡೆಗಳು ನಡೆಯಲಿವೆ.

Dharwad: ಶಾಲೆಗಳಿಗೆ ಮಾತ್ರ ರಜೆ, ಕಾಲೇಜುಗಳಿಗೆ ರಜೆ ಇಲ್ಲ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸ್ಪಷ್ಟನೆ

ಏನಿದು ಉತ್ಸವ?

ಜ.12 ಸ್ವಾಮಿ ವಿವೇಕಾನಂದರ ಜನ್ಮದಿನ. ಇದರ ನಿಮಿತ್ತ ಕಳೆದ 25 ವರ್ಷಗಳಿಂದ ಕೇಂದ್ರ ಯುವಜನ ಸೇವೆ, ಕ್ರೀಡಾ ಸಚಿವಾಲಯ ಯುವಜನೋತ್ಸವ ಆಯೋಜಿಸಿಕೊಂಡು ಬಂದಿದೆ. ಧಾರವಾಡದಲ್ಲಿ ನಡೆಯುತ್ತಿರುವುದು 26ನೆಯದ್ದು.

ಏನಿದರ ವಿಶೇಷತೆ?

ಯುವಕರಲ್ಲಿನ ಸಾಂಸ್ಕೃತಿಕ ಪ್ರತಿಭೆಗೆ ವೇದಿಕೆ ಒದಗಿಸುವ ಜತೆಗೆ ಅವರಲ್ಲಿ ರಾಷ್ಟ್ರೀಯ ಏಕತೆ, ಕೋಮುಸೌಹಾರ್ದತೆ, ಧೈರ್ಯ ಹಾಗೂ ಸಾಹಸ ಪರಿಕಲ್ಪನೆಯನ್ನು ಈ ಉತ್ಸವದಲ್ಲಿ ಮೂಡಿಸಲಾಗುತ್ತದೆ. 5 ದಿನ ಧಾರವಾಡದಲ್ಲಿ ವಾಯುಯಾನ, ಸ್ಕೂಬಾ ಡೈವಿಂಗ್‌, ಮೌಂಟೇನ್‌ ಬೈಕಿಂಗ್‌ ಸೇರಿ ಹಲವು ಕ್ರೀಡೆಗಳು ನಡೆಯಲಿವೆ.

Follow Us:
Download App:
  • android
  • ios