ಹೈನುಗಾರ ಮಹಿಳೆಯರ ಸ್ವಾವಲಂಬಿ ಮಾಡಲು ಯೋಜನೆ ರೂಪಿಸಿ: ಜಾರಕಿಹೊಳಿಗೆ ಮೋದಿ ಸಲಹೆ

ಬೆಂಗಳೂರು(ಸೆ.13): ಕಳೆದ ಐದು ದಶಕಗಳಿಂದ ರೈತರ ಸೇವೆ ಮಾಡುತ್ತಿರುವ ಕೆಎಂಎಫ್‌ನ ಕಾರ್ಯ ಶ್ಲಾಘನೀಯ. ಸಹಕಾರಿ ವಲಯದಲ್ಲಿ ಕರ್ನಾಟಕದ ಕೆಎಂಎಫ್‌ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶದ ಗ್ರೇಟರ್‌ ನೋಯಿಡಾ ನಗರದಲ್ಲಿ ಸೋಮವಾರದಿಂದ ಆರಂಭಗೊಂಡಿರುವ ವಿಶ್ವ ಡೈರಿ ಶೃಂಗ ಸಭೆಯಲ್ಲಿ ಕೆಎಂಎಫ್‌ನ ನಂದಿನಿ ಉತ್ಪನ್ನಗಳ ಮಳಿಗೆಗೆ ಭೇಟಿ ನೀಡಿದ ಅವರು, ಕೆಎಂಎಫ್‌ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ವೇಳೆ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ‘ಹೈನುಗಾರಿಕೆ ಮೇಲೆಯೇ ಅವಲಂಬಿತರಾಗಿರುವ ರೈತ ಸಮುದಾಯ ಅದರಲ್ಲೂ ವಿಶೇಷವಾಗಿ ರೈತ ಮಹಿಳೆಯರ ಆರ್ಥಿಕ ಸ್ವಾವಲಂಬಿ ಬದುಕಿಗೆ ವಿಶೇಷ ಯೋಜನೆಗಳನ್ನು ರೂಪಿಸಿ’ ಎಂದು ಸಲಹೆ ನೀಡಿದರು.

Milk Price Rise: ರಾಜ್ಯದ ಜನತೆಗೆ ಮತ್ತೊಂದು ಶಾಕ್: ಇಂದಿನಿಂದ ಹಾಲಿನ ದರ 3 ರೂ ಹೆಚ್ಚಳ..?

ಕೆಎಂಎಫ್‌ನ ಕಾರ್ಯ ಚಟುವಟಿಕೆಗಳ ಬಗ್ಗೆ ಅಧ್ಯಕ್ಷ ಹಾಗೂ ಶಾಸಕರೂ ಆದ ಬಾಲಚಂದ್ರ ಜಾರಕಿಹೊಳಿ ಅವರು ಪ್ರಧಾನಿಗಳಿಗೆ ವಿಸ್ತೃತ ಮಾಹಿತಿ ನೀಡಿದರು. ಇನ್ನು ಕೆಎಂಎಫ್‌ 91.88 ಲಕ್ಷ ಕೆಜಿ ಗರಿಷ್ಠ ಶೇಖರಣೆ ಸಾಮರ್ಥ್ಯ ಹೊಂದಿದೆ. ಪ್ರತಿದಿನ ರೈತರಿಗೆ 30 ಕೋಟಿ ರು. ಹಣ ಪಾವತಿ ಮಾಡುತ್ತಿದ್ದು, 170ಕ್ಕೂ ಅಧಿಕ ನಂದಿನಿ ಹಾಲಿನ ಉತ್ಪನ್ನಗಳನ್ನು ಕೆಎಂಎಫ್‌ ಉತ್ಪಾದಿಸುತ್ತಿದೆ ಎಂದು ಮಾಹಿತಿ ಒದಗಿಸಿದರು.

ಈ ವೇಳೆ ಕೆಎಂಎಫ್‌ ಆಡಳಿತ ಮಂಡಳಿ ಸದಸ್ಯರು, ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮತ್ತು ಸದಸ್ಯರು, ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ, ಒಕ್ಕೂಟಗಳ ಕಾರ್ಯನಿರ್ವಾಹಕ ನಿರ್ದೇಶಕರು , ಹಿರಿಯ ಅಧಿಕಾರಿಗಳು ಹಾಜರಿದ್ದರು.

Milk Price Hike: ಸರ್ಕಾರದ ಒಪ್ಪಿಗೆ ಕೇಳದೆ ಹಾಲಿನ ದರ 3 ಹೆಚ್ಚಳ?

ಕೆಎಂಎಫ್‌ನ ಸಾಧನೆ ಬಗ್ಗೆ ನರೇಂದ್ರ ಮೋದಿ ಅವರು ಮುಕ್ತವಾಗಿ ಪ್ರಶಂಸೆ ವ್ಯಕ್ತಪಡಿಸಿರುವುದು ನಮ್ಮ ಮುಂದಿನ ಯೋಜನೆಗಳಿಗೆ ಬಲ ನೀಡಿದೆ. ನಮ್ಮ ಮಳಿಗೆಗೆ ಭೇಟಿ ಕೊಟ್ಟು ಅಗತ್ಯ ಮಾರ್ಗದರ್ಶನ ನೀಡಿದ್ದಾರೆ. ರೈತ ಸಮುದಾಯ ಮತ್ತು ರೈತ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ ಎಂಬುದಕ್ಕೆ ಅವರು ನೀಡಿದ ಸಲಹೆಗಳೇ ಸಾಕ್ಷಿ. ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತರಲು ಶ್ರಮಿಸುತ್ತೇವೆ ಅಂತ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. 

ಉತ್ತರಪ್ರದೇಶದ ಗ್ರೇಟರ್‌ ನೋಯಿಡಾದಲ್ಲಿ ಸೋಮವಾರ ಪ್ರಾರಂಭವಾದ ವಿಶ್ವ ಡೈರಿ ಶೃಂಗ ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಎಂಎಫ್‌ನ ನಂದಿನಿ ಉತ್ಪನ್ನಗಳ ಪ್ರದರ್ಶನ ಮಳಿಗೆಗೆ ಭೇಟಿ ನೀಡಿದರು. ಕೆಎಂಎಫ್‌ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಜರಿದ್ದರು.